ಕರ್ನಾಟಕದ ಜನರೇ ಕಟ್ಟಿಕೊಂಡಿರುವ ವಿಶಿಷ್ಟ ಸಮುದಾಯ ಮಾಧ್ಯಮ ‘ಈದಿನ’, ಇದೇ ನವೆಂಬರ್ 30ರಂದು ಕಲಬುರಗಿಯಲ್ಲಿ ತನ್ನ 2ನೇ ಓದುಗರ ಸಮಾವೇಶವನ್ನು ನಡೆಸಲಿದ್ದು, ಈಗಾಗಲೇ ಜೋರು ತಯಾರಿ ನಡೆಸಿದೆ. ವೇದಿಕೆ ಕಾರ್ಯಕ್ರಮ, ಅತಿಥಿಗಳು ಸೇರಿದಂತೆ ಸಮಾವೇಶದ ಸಂಪೂರ್ಣ ಮಾಹಿತಿ ಇಲ್ಲಿದೆ.
ನವೆಂಬರ್ 30ರ ಭಾನುವಾರ ಬೆಳಗ್ಗೆ 10ರಿಂದ ಕಾರ್ಯಕ್ರಮಗಳು ಶುರುವಾಗಲಿವೆ. ಈದಿನ.ಕಾಮ್ ಹೊರತರುತ್ತಿರುವ “ಜೈ ಹಿಂದ್–ಜಯ ಕರ್ನಾಟಕ” ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಕಲ್ಯಾಣ ಕರ್ನಾಟಕದ ಇತಿಹಾಸ–ಸಂಸ್ಕೃತಿಯ ಸಂವಾದ ಕಾರ್ಯಕ್ರಮ ರಾಜ್ಯದ ಪ್ರಮುಖ ವ್ಯಕ್ತಿತ್ವಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಈದಿನ ಸಮುದಾಯ ವಿಭಾಗದ ಮುಖ್ಯಸ್ಥರಾದ ಡಾ. ವಾಸು ಎಚ್ ವಿ ಅವರ ಪ್ರಾಸ್ತಾವಿಕ ನುಡಿಗಳ ನಂತರ, ಸಂಚಿಕೆಯನ್ನು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಡುಗಡೆ ಮಾಡಲಿದ್ದಾರೆ. ʼನ್ಯೂಸ್ ಮಿನಿಟ್ʼ ಸಂಪಾದಕಿ ಧನ್ಯಾ ರಾಜೇಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ʼದಿ ವೈರ್ʼನ ಹಿರಿಯ ಪತ್ರಕರ್ತೆ ಆರಫಾ ಖಾನಂ ಶೇರ್ವಾನಿ ಅವರು ವಿಶೇಷ ಶುಭ ಸಂದೇಶ ನೀಡಲಿದ್ದಾರೆ. ಕಲಬುರಗಿ, ಯಾದಗಿರಿ, ಚಿಕ್ಕಮಗಳೂರು, ಗದಗ, ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಓದುಗ ಪ್ರತಿನಿಧಿಗಳು ಕಾರ್ಯಕ್ರಮದ ಭಾಗವಾಗಲಿದ್ದಾರೆ.
ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷ ಮರಿಯಪ್ಪ ಹಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಖನೀಜಾ ಫಾತಿಮಾ, ಅಲ್ಲಮಪ್ರಭು ಪಾಟೀಲ್, ಮಹಾಪೌರರಾದ ವರ್ಷಾ ರಾಜು ಜಾನೆ, ಕೆಕೆಆರ್ಟಿಸಿ ಅಧ್ಯಕ್ಷ ಅರುಣ ಕುಮಾರ ಪಾಟೀಲ್, ಮಣ್ಣೂರ್ ಆಸ್ಪತ್ರೆ ಎಂಡಿ ಡಾ. ಫಾರೂಕ್ ಮಣ್ಣೂರ್, ದಸಂಸ ಮುಖಂಡ ಅರ್ಜುನ್ ಭದ್ರೆ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಹರವಾಳ, ಮಾಜಿ ಜಿಪಂ ಸದಸ್ಯ ಶಿವಾನಂದ ಪಾಟೀಲ್ ಸೇರಿದಂತೆ ಹಲವು ಗಣ್ಯರು ವೇದಿಕೆ ಅಲಂಕರಿಸಲಿದ್ದಾರೆ. ಮಧ್ಯಾಹ್ನ 2.30ರಿಂದ ‘ದಿ ಹಿಂದೂ’ ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕ ಹೃಷಿಕೇಶ ಬಹದ್ದೂರ ದೇಸಾಯಿ ಅವರು, ‘ಕಲ್ಯಾಣ ಕರ್ನಾಟಕದ ಚರಿತ್ರೆ ಮತ್ತು ಸಂಸ್ಕೃತಿಯ ಹಿರಿಮೆ’ ಎಂಬ ವಿಷಯ ಮಂಡಿಸಲಿದ್ದಾರೆ. ಸಂಶೋಧಕಿ ಡಾ. ಸ್ವಾತಿ ಶಿವಾನಂದ, ಡಾ. ಲಕ್ಷ್ಮಣ ದಸ್ತಿ ಮತ್ತು ಹಿರಿಯ ಹೋರಾಟಗಾರ ಡಾ. ರಜಾಕ್ ಉಸ್ತಾದ್ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನಟ ಮತ್ತು ಚಿಂತಕ ಪ್ರಕಾಶ್ ರೈ ಸಮಾರೋಪ ಭಾಷಣ ಮಾಡಲಿದ್ದಾರೆ. ಸಮಾರೋಪಕ್ಕೆ ಶಾಸಕ ಹಾಗೂ ಕರ್ನಾಟಕ ಯೋಜನಾ ಮಂಡಳಿಯ ಅಧ್ಯಕ್ಷ ಬಿ ಆರ್ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದು, ಕೆಕೆಆರ್ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಮುಖ್ಯ ಅತಿಥಿಗಳಾಗಿರಲಿದ್ದಾರೆ. ಆರ್ ಕೆ ಹುಡಗಿ, ಮೀನಾಕ್ಷಿ ಬಾಳಿ, ಮಲ್ಲಿಕಾರ್ಜುನ ಸತ್ಯಂಪೇಟೆ, ಮರೆಪ್ಪ ಚಟ್ಟೇರಕರ್, ಸಿದ್ದಪ್ಪ ಮೂಲಗೆ, ಮಲ್ಲಿಕಾರ್ಜುನ ಕ್ರಾಂತಿ, ಮಹಾದೇವಿ ನಿಂಬಾಳ, ಗುರುರಾಜ್ ಹಾಗೂ ಉದಯ್ ಕುಮಾರ್ ಪಾಟೀಲ್ ಗಣ್ಯ ಉಪಸ್ಥಿತಿ ವಹಿಸಲಿದ್ದಾರೆ.
ಸಾಂಸ್ಕೃತಿಕ ಪರಿವಾರದಲ್ಲಿ, ಯಾದಗಿರಿ ಜಿಲ್ಲೆಯ ಸುರಪುರದ ಕಲಾವಿದ ಲಕ್ಷ್ಮಣ ಗುತ್ತೇದಾರ್ ನೇತೃತ್ವದ ತಂಡದಿಂದ ‘ದುಂದುಮೆ’ ಹಾಡು, ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹುಳಗೋಳ ಗ್ರಾಮದ ಕಲಾವಿದ ಶಂಕರೆಪ್ಪ ಹುಳಗೋಳ ಅವರಿಂದ ‘ಏಕತಾರಿ ತತ್ವಪದʼ ಹಾಡು, ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಟ್ನಾಳ ಗ್ರಾಮದ ಮಹಿಳಾ ಕಲಾವಿದರಿಂದ ʼಗೋಪು ಕೋಲಾಟ’ ಪ್ರದರ್ಶನ, ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕಡಕೋಳ ಮಡಿವಾಳೇಶ್ವರ ಭಜನಾ ಸಂಘದಿಂದ ‘ತತ್ವಪದ’ ಗಾಯನ ಹಾಗೂ ಇತರೆ ಕಾರ್ಯಕ್ರಮಗಳು ಮನರಂಜಿಸಲಿವೆ.
ರಂಗಮಂದಿರದ ಆವರಣದಲ್ಲಿ, ʼಬಿದರಿ ಕಲೆ ಪ್ರದರ್ಶನ ಮತ್ತು ಮಾರಾಟʼ, ʼಈ ದಿನ’ ನಡೆದು ಬಂದ ಹಾದಿಯ ಚಿತ್ರಾವಳಿʼಯ ಪ್ರದರ್ಶನದ ಜೊತೆಗೆ ಈ ದಿನದ ನಾಗರಿಕ ಪತ್ರಕರ್ತರಾಗಲು (ಸಿಟಿಜನ್ ಜರ್ನಲಿಸ್ಟ್) ನೋಂದಣಿಗೆ ಅವಕಾಶವೂ ಇರಲಿದೆ.
ಇದನ್ನೂ ಓದಿ: ಕಲಬುರಗಿಯಲ್ಲೇಕೆ ಓದುಗರ ಸಮಾವೇಶ? ಈ ಒಂದು ಒಲವಿನೋಲೆ ಓದಿ
ಈದಿನದ ಗೌರವ ಸಂಪಾದಕರಾದ ಡಿ. ಉಮಾಪತಿ ಹಾಗೂ ಸಂಪಾದಕರಾದ ಬಸವರಾಜು ಮೇಗಲಕೇರಿ ಅವರ ನೇತೃತ್ವದಲ್ಲಿ, ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ನಾಗರಿಕ ಪತ್ರಕರ್ತರ ಸಮಗ್ರ ಸಹಕಾರದೊಂದಿಗೆ ಮುಂದಿನ ಕಾರ್ಯಕ್ರಮಕ್ಕೆ ಭವ್ಯ ವೇದಿಕೆ ಸಜ್ಜಾಗುತ್ತಿದೆ. ಈದಿನದ ಓದುಗರನ್ನೂ, ಸ್ನೇಹಿತರನ್ನೂ, ಬೆಂಬಲಿಗರನ್ನೂ, ಸಂಗಾತಿಗಳನ್ನೂ ಒಗ್ಗೂಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದ್ದು, ನೀವೂ ಕಾರ್ಯಕ್ರಮದ ಭಾಗವಾಗಲು ಈ ದಿನ.ಕಾಮ್ ತಂಡ ತುಂಬು ಹೃದಯದಿಂದ ಆಹ್ವಾನಿಸುತ್ತಿದೆ.
ಸಂಚಾಲಕರಾಗಿ ಈ ದಿನದ ಕೋ ಆರ್ಡಿನೇಟರ್ಗಳಾದ ಗೀತಾ ಹೊಸಮನಿ, ಬಾಲಾಜಿ ಕುಂಬಾರ, ಮಹಮ್ಮದ್ ರಫಿ ಮತ್ತು ರಾಜೇಂದ್ರ ರಾಜವಾಳ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.





