ಕಾರ್ಮಿಕರ ಕಾನೂನುಬದ್ಧ ಹಕ್ಕುಗಳನ್ನು ಕಾಪಾಡಿ ಅವರಿಗೆ ನ್ಯಾಯ ಒದಗಿಸಿ ಕೊಡಲು ಅನುಭವವುಳ್ಳ ವಕೀಲರು ಹಾಗೂ ಕಾರ್ಮಿಕ ಕಾನೂನು ತಜ್ಞರನ್ನು ಒಳಗೊಂಡ ವಕೀಲರ ಯಾದಿ/ ಪಟ್ಟಿ (Panel of Advocates) ರಚಿಸಲು ಕಾರ್ಮಿಕ ಇಲಾಖೆ ಮುಂದಾಗಿದ್ದು, ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ನ್ಯಾಯಾಲಯಗಳಲ್ಲಿ ಕಾರ್ಮಿಕರು, ಕಾರ್ಮಿಕ ಸಂಘಗಳು ಮತ್ತು ಆಡಳಿತ ಮಂಡಳಿ ವಿರುದ್ಧ ಹಲವು ಪ್ರಕರಣಗಳು ಸದ್ಯ ಬಾಕಿ ಉಳಿದಿವೆ. ಪ್ರಕರಣಗಳು ವಿವಿಧ ಕಾರಣಗಳಿಂದ ವಿಳಂಭವಾಗುತ್ತಿರುವುದರಿಂದ ಕಾರ್ಮಿಕರಿಗೆ ತೊಂದರೆ ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಒದಗಿಸಲು ಕಾರ್ಮಿಕ ಇಲಾಖೆ ಈ ವಿಶಿಷ್ಟ ಕ್ರಮ ಕೈಗೊಂಡಿದೆ. ಈ ಮೂಲಕ ಕಾರ್ಮಿಕರ ಕಾನೂನುಬದ್ದ ಹಕ್ಕುಗಳನ್ನು ರಕ್ಷಿಸುವಲ್ಲಿ ಅವರಿಗೆ ಕಾನೂನು ನೆರವು ನೀಡಲು ಮುಂದಾಗಿರುವ ಕಾರ್ಮಿಕ ಇಲಾಖೆಯು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.
ಈ ಹಿನ್ನೆಲೆಯಲ್ಲಿ, ಹತ್ತು ಜನ ವಕೀಲರ ಯಾದಿ/ಪಟ್ಟಿ ರಚಿಸಲು ಅನುಮೋದನೆ ನೀಡಿದ್ದು, ವಕೀಲರ ನೇಮಕದಲ್ಲಿ ಪಾರದರ್ಶಕತೆ, ಕಾರ್ಮಿಕ ಕಾನೂನು ಕುರಿತು ಜ್ಞಾನ/ ಪರಿಣತಿ/ ಅನುಭವ ಇರುವವರಿಗೆ ಆದ್ಯತೆ ಸೇರಿದಂತೆ, ವಕೀಲರ ಆಯ್ಕೆ, ಕಾರ್ಯವಿಧಾನ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯಾಚರಣಾ (ಎಸ್ಒಪಿ) ತಯಾರಿಸಬೇಕಿದೆ. ಈ ವಕೀಲರಿಗೆ ಪಾವತಿಸಬೇಕಾದ ಸಂಭಾವನೆಗೆ ಕಾನೂನು ಇಲಾಖೆಯ ಆದೇಶಗಳನ್ನು ಅನುಸರಿಸಬೇಕೆಂಬ ಷರತ್ತುಗಳನ್ನು ವಿಧಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಹಾರದಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ರಾಜ್ಯದ ಕಾರ್ಮಿಕ ನ್ಯಾಯಾಲಯ ಹಾಗೂ ಕೈಗಾರಿಕಾ ನ್ಯಾಯಮಂಡಳಿಗಳಲ್ಲಿ ಸಾಕಷ್ಟು ಕಾರ್ಮಿಕ ಸಂಬಂಧಿತ ದಾವೆಗಳು ಬಾಕಿ ಉಳಿದಿದ್ದು, ಅವುಗಳ ಅಂಕಿ ಅಂಶ ಇಂತಿದೆ:
ಬೆಂಗಳೂರು ನಗರ ಮತ್ತು ಗ್ರಾಮೀಣ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಲ್ಲಿ 2023-24 ರಲ್ಲಿ 563 ದಾವೆಗಳು ಹಾಗೂ 2024-25 ರಲ್ಲಿ 446 ದಾವೆಗಳು ಬಾಕಿ ಇವೆ. ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ 2023-24 ರಲ್ಲಿ 91 ದಾವೆಗಳು, 2024-25 ರಲ್ಲಿ 99 ದಾವೆಗಳು ಬಾಕಿ ಇವೆ. ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ 2023-24 ರಲ್ಲಿ 424 ದಾವೆಗಳು, 2024-25 ರಲ್ಲಿ 200 ದಾವೆಗಳು ಬಾಕಿ ಇವೆ. ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ದಾವಣಗೆರೆ, ಹಾವೇರಿ, ಮಂಗಳೂರು, ಉಡುಪಿ, ಕಾರವಾರದಲ್ಲಿ 2023-24 ರಲ್ಲಿ 346 ದಾವೆಗಳು, 2024-25 ರಲ್ಲಿ 212 ದಾವೆಗಳು ಬಾಕಿ ಇವೆ. ಇನ್ನು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಮಡಿಕೇರಿಗಳಲ್ಲಿ 2023-24 ರಲ್ಲಿ 59 ಹಾಗೂ 2024-25 ರಲ್ಲಿ 59 ದಾವೆಗಳು ಬಾಕಿ ಇವೆ





