ಬೆಂಗಳೂರು, ಮೈಸೂರು, ಕೋಲಾರ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುರುವಾರ ರಾತ್ರಿ ಹಾಗೂ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು, ರೈಲ್ವೆ ಅಂಡರ್ಪಾಸ್ಗಳು ಮತ್ತು ವಸತಿ ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ತೀವ್ರ ತೊಂದರೆ ಎದುರಿಸಿದ್ದಾರೆ.
ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ಸುರಿಯುತ್ತಿರುವ ಮಳೆ ಸಿಲಿಕಾನ್ ಸಿಟಿಯಲ್ಲಿ ಶುಕ್ರವಾರವೂ ಅಬ್ಬರಿಸಿತು. ಮೆಜೆಸ್ಟಿಕ್, ಮಲ್ಲೇಶ್ವರಂ, ಚಾಮರಾಜಪೇಟೆ, ಕಾರ್ಪೊರೇಶನ್ ಸರ್ಕಲ್, ಆನಂದ್ ರಾವ್ ಸರ್ಕಲ್, ಲಾಲ್ಬಾಗ್ ಸೇರಿದಂತೆ ಹಲವು ಪ್ರದೇಶಗಳು ಜಲಾವೃತವಾಗಿವೆ. ಕೆ ಆರ್ ಮಾರ್ಕೆಟ್, ರಿಚ್ಮಂಡ್ ಟೌನ್ ಹಾಗೂ ವಿಕ್ಟೋರಿಯಾ ರಸ್ತೆಯು ನದಿಯಂತಾಗಿ ವಾಹನ ಸಂಚಾರಕ್ಕೆ ತೊಂದರೆಯಾಯಿತು.
ಕೆಆರ್ ಪುರಂನ ಭೀಮಯ್ಯ ಲೇಔಟ್, ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿನಗರ, ವರ್ತೂರು ಬಳಿಯ ಬಳಗೆರೆ ರಸ್ತೆ ಹಾಗೂ ಸರ್ಜಾಪುರ ರಸ್ತೆಯ ವಿಪ್ರೋ ಗೇಟ್ ಭಾಗಗಳಲ್ಲಿ ನೀರು ನುಗ್ಗಿ ಮನೆಗಳಿಗೂ ಹಾನಿಯಾಗಿದೆ. ಮಾನ್ಯತಾ ಟೆಕ್ ಪಾರ್ಕ್ ರಸ್ತೆಯು ಮಳೆ ನೀರಿನಿಂದ ಸಂಪೂರ್ಣ ಮುಳುಗಿದೆ. ಹವಾಮಾನ ಇಲಾಖೆಯ ಪ್ರಕಾರ ಮುಂದಿನ ಅಕ್ಟೋಬರ್ 13ರವರೆಗೆ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೆಡಿಕಲ್ ಮಾಫಿಯಾಗೆ ಅಮಾಯಕ ಮಕ್ಕಳು ಬಲಿ; ಸರ್ಕಾರಗಳೇ ಜವಾಬ್ದಾರಿ
ಕೋಲಾರದಲ್ಲಿ ಮಳೆಯ ಆರ್ಭಟ
ಕೋಲಾರ ಜಿಲ್ಲೆಯ ಖಾದ್ರಿಪುರದಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದ ರೈಲ್ವೆ ಅಂಡರ್ಪಾಸ್ ಜಲಾವೃತಗೊಂಡಿತು. ಇದರಿಂದ ವಿದ್ಯಾರ್ಥಿಗಳು, ಕಚೇರಿಗೆ ತೆರಳುವವರು ಮತ್ತು ಕೂಲಿಕಾರ್ಮಿಕರು ರೈಲ್ವೆ ಹಳಿಗಳನ್ನು ದಾಟಬೇಕಾಯಿತು. ಸ್ಥಳೀಯ ಜನರ ಸಂಘಟನೆಯೊಂದು ಅಂಡರ್ಪಾಸ್ನ ಕೊಳಕು ನೀರಿನಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿ, ಪೌರಾಡಳಿತದ ಉದಾಸೀನತೆಯನ್ನು ಖಂಡಿಸಿತು. ಶ್ರೀನಿವಾಸಪುರದ ತಗ್ಗು ಪ್ರದೇಶಗಳಲ್ಲೂ ಮಳೆಯಿಂದ ಜನರು ಕಷ್ಟ ಅನುಭವಿಸಿದರು.
ಚಿಕ್ಕಬಳ್ಳಾಪುರದಲ್ಲಿ ದುರಂತ
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಮಳೆ ನೀರು ತುಂಬಿದ್ದ ಗುಂಡಿಗೆ ಬಿದ್ದು ರಾಮಂಜಿ (45) ಎಂಬ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಮಂಡ್ಯ ತಾಲೂಕಿನ ಕೆಎಚ್ಬಿ ಕಾಲೋನಿಯಲ್ಲಿ ಭಾರಿ ಮಳೆಯಿಂದ ಜಲಾವೃತಗೊಂಡಿದ್ದು, ಎಕರೆಗಟ್ಟಲೆ ಭತ್ತದ ಬೆಳೆ ನಾಶವಾಗಿದೆ. ಮೈಸೂರು, ಚಾಮರಾಜನಗರ, ತುಮಕೂರು, ದಾವಣಗೆರೆ ಜಿಲ್ಲೆಗಳಲ್ಲೂ ಗುರುವಾರ ರಾತ್ರಿ ಭಾರೀ ಮಳೆಯಾಗಿದ್ದು, ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಹವಾಮಾನ ಇಲಾಖೆಯ ಮುನ್ಸೂಚನೆ
ರಾಜ್ಯ ಹವಾಮಾನ ಇಲಾಖೆಯು ಬೆಂಗಳೂರಿನಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಆರೆಂಜ್ ಅಲರ್ಟ್ ಘೊಷಿಸಿದೆ. ಅಕ್ಟೋಬರ್ 13ರ ವರೆಗೆ ಯೆಲ್ಲೋ ಅಲರ್ಟ್ ಜಾರಿಯಲ್ಲಿದ್ದು, ಬೆಂಗಳೂರು, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದಾದ್ಯಂತ ಒಡ್ಡಾಡುತ್ತಿರುವ ಈ ಜಲಪ್ರಳಯ ಸ್ಥಿತಿಯಿಂದಾಗಿ ಜನರು ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ. ನಿರಂತರ ಮಳೆಯಿಂದ ರಸ್ತೆಗಳು ಕೆಸರುಪಾಲಾಗಿದ್ದು, ತಗ್ಗು ಪ್ರದೇಶಗಳ ನಿವಾಸಿಗಳು ಪರದಾಡುತ್ತಿದ್ದಾರೆ. ಜನರು ಸುರಕ್ಷಿತವಾಗಿ ಇರಲು ಹವಾಮಾನ ಇಲಾಖೆಯ ಎಚ್ಚರಿಕೆ ಪಾಲಿಸುವಂತೆ ವಿನಂತಿಸಲಾಗಿದೆ





