“ಮೀಸಲಾತಿ ಏಕೆ ಬೇಕು ಎಂದು ಪ್ರಶ್ನಿಸುವವರಲ್ಲಿ ಪಾಂಡೆಗಳು, ಅಗರ್ವಾಲ್ಗಳೇ ಹೆಚ್ಚಿರುತ್ತಾರೆ. ಐಎಎಸ್ ಹುದ್ದೆಗಳಲ್ಲಿ ಇಂದು ಯಾದವ್ ಥರದ ಸರ್ನೇಮ್ಗಳು ಕಾಣಿಸುತ್ತಿವೆ. ಇದು ಮಂಡಲೋತ್ತರ ವಿದ್ಯಮಾನವೇ ಹೊರತು, ಮಂಡಲ್ ಪೂರ್ವದಲ್ಲಿ ಈ ಹೆಸರುಗಳೂ ಕಾಣಸಿಗುತ್ತಿರಲಿಲ್ಲ” ಎಂದು ಅತೀಕ್ ಹೇಳಿದರು.
“ಜಾತಿ ಸಮೀಕ್ಷೆ ಬೇಕು ಎಂಬ ಕೂಗು ಇತರೆ ಹಿಂದುಳಿದ ವರ್ಗಗಳಿಂದ (ಒಬಿಸಿಗಳಿಂದ) ಹೆಚ್ಚಾಗಿ ಬರುತ್ತಿಲ್ಲ. ಒಬಿಸಿಗಳ ಒಳಗಿನಿಂದಲೇ ಜಾತಿಗಣತಿ ಬೇಕೆಂದು ಅನಿಸದಿದ್ದರೆ ಆಳುವವರ್ಯಾಕೆ ಜಾತಿ ಸಮೀಕ್ಷೆ ಬಗ್ಗೆ ಯೋಚಿಸುತ್ತಾರೆ?” ಎಂದು ನಿವೃತ್ತ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್ ಹೇಳಿದರು.
‘ಕರ್ನಾಟಕ ದಮನಿತ ಹಿಂದುಳಿದ ಸಮುದಾಯಗಳ ಸಂಘಟನೆ’, ‘ಕರ್ನಾಟಕ ಸರ್ವ ಸಮುದಾಯಗಳ ಸಾಮಾಜಿಕ ನ್ಯಾಯ ಸಂರಕ್ಷಣಾ ಅಭಿಯಾನ’ದ ಸಹಯೋಗದಲ್ಲಿ ‘ಜಾಗೃತ ಕರ್ನಾಟಕ’ ರಾಜಕೀಯ ಸಂಘಟನೆಯು ಬೆಂಗಳೂರಿನ ಗಾಂಧಿಭವನದಲ್ಲಿ ಇಂದು (ಶನಿವಾರ) ಹಮ್ಮಿಕೊಂಡಿದ್ದ ‘ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2: ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ’ ವಿಚಾರ ಸಂಕಿರಣದಲ್ಲಿ ‘ಜಾತಿ ಸಮೀಕ್ಷೆ ಏಕೆ ಬೇಕು?’ ಸರ್ವಸಮುದಾಯಗಳಿಗೂ ಇದರಿಂದ ಇರುವ ಅನುಕೂಲಗಳೇನು?’ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಜಾತಿ ಸಮೀಕ್ಷೆಗಾಗಿ ಒತ್ತಡ ಹೇರುವ ಕೆಲಸ ಮಾಡಬೇಕು. ಜಾತಿ ಸಮೀಕ್ಷೆ ಎಂದರೆ ಜಾತಿಗಳ ಜನಸಂಖ್ಯೆಯಷ್ಟೇ ಅಲ್ಲ. ನಂಬರಿನ ಆಚೆ ನಾವು ನೋಡಬೇಕು. ನಂಬರ್ ಗೇಮ್ ರೀತಿ ನೋಡುವ ಬದಲಾಗಿ, ನೀತಿ ನಿರೂಪಣೆಗಳಿಗೆ ಬೇಕಾದ ದತ್ತಾಂಶವನ್ನು ಒದಗಿಸುವ ಅಧಿಕೃತವಾದ ಸಾಧನ ಜಾತಿ ಸಮೀಕ್ಷೆ ಎಂದು ಪರಿಗಣಿಸಬೇಕು ಎಂದು ತಿಳಿಸಿದರು.
ವರ್ಗ ಇದೆ, ಜಾತಿ ಇಲ್ಲ ಎನ್ನುವವರಿದ್ದಾರೆ. ಎಡಪಂಥೀಯರಿಗೆ ಜಾತಿ ಬಗ್ಗೆ ಅರ್ಥವಾಗಲಿಲ್ಲ. ಪಶ್ಚಿಮ ಬಂಗಾಳದಲ್ಲಿ 35 ವರ್ಷ ಸಿಪಿಎಂ ಅಧಿಕಾರದಲ್ಲಿತ್ತು. ಚಟರ್ಜಿ, ಬ್ಯಾನರ್ಜಿ, ಭಟ್ಟಾಚಾರ್ಯ, ಸೇನ್, ಗುಪ್ತ ಇವರುಗಳೇ ಲೀಡರ್ಗಳಾಗಿದ್ದರು. ಹಿಂದುಳಿದ ವರ್ಗಗಳಿಂದ ಯಾವುದೇ ನಾಯಕತ್ವ ಬೆಳೆಯಲಿಲ್ಲ. ಪಶ್ಚಿಮ ಬಂಗಾಳದಲ್ಲಿ ಶೇ.26ರಷ್ಟು ಮುಸ್ಲಿಮರಿದ್ದರೂ ಕೆಳಹಂತದ ಅಂಗನವಾಡಿ ಕೆಲಸಗಳಲ್ಲಿ ಮುಸ್ಲಿಮರ ಪಾತ್ರ ಶೇ.4ರಷ್ಟು ಮಾತ್ರ ಇತ್ತು. ಅಂಗನವಾಡಿ ಕಾರ್ಯಕರ್ತೆಯರಲ್ಲೂ ಹೆಚ್ಚಿನದಾಗಿ ಭಟ್ಟಾಚಾರ್ಯರಿದ್ದರು. ಈ ಸಮಸ್ಯೆ ಕೂಡ ಕಮ್ಯುನಿಸ್ಟರ ಅಧಿಕಾರವಧಿಯಲ್ಲೇ ಉಂಟಾಯಿತು. ಇಂತಹ ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳಲು ವೈಜ್ಞಾನಿಕ ದತ್ತಾಂಶಗಳು ಬೇಕಾಗುತ್ತವೆ ಎಂದು ವಿವರಿಸಿದರು.
“ಮೀಸಲಾತಿ ಏಕೆ ಬೇಕು ಎಂದು ಪ್ರಶ್ನಿಸುವವರಲ್ಲಿ ಪಾಂಡೆಗಳು, ಅಗರ್ವಾಲ್ಗಳೇ ಹೆಚ್ಚಿರುತ್ತಾರೆ. ಐಎಎಸ್ ಹುದ್ದೆಗಳಲ್ಲಿ ಇಂದು ಯಾದವ್ ಥರದ ಸರ್ನೇಮ್ಗಳು ಕಾಣಿಸುತ್ತಿವೆ. ಇದು ಮಂಡಲೋತ್ತರ ವಿದ್ಯಮಾನವೇ ಹೊರತು, ಮಂಡಲ್ ಪೂರ್ವದಲ್ಲಿ ಈ ಹೆಸರುಗಳೂ ಕಾಣಸಿಗುತ್ತಿರಲಿಲ್ಲ” ಎಂದು ವಿಶ್ಲೇಷಿಸಿದರು.
ಆರ್ಥಿಕ ವ್ಯವಸ್ಥೆಯ ಸಮಸ್ಯೆಗಳನ್ನು ಪುನರ್ ಪರಿಶೀಲನೆ ಮಾಡದಿದ್ದರೆ ಬಡತನ ಮುಂದುವರಿಯುತ್ತದೆ. ಸಮಸ್ಯೆಯನ್ನು ಬಗೆಹರಿಸಲು ಮಾಹಿತಿ, ದತ್ತಾಂಶ ಬೇಕಾಗುತ್ತದೆ. ಅದಕ್ಕಾಗಿ ಜಾತಿ ಸಮೀಕ್ಷೆಗಳು ಅಗತ್ಯವಿವೆ. 2ನೇ ಜಾತಿ ಸಮೀಕ್ಷೆ ಸೆಪ್ಟೆಂಬರ್ನಲ್ಲಿ ನಡೆಯುತ್ತದೆ. ಮೊದಲ ಸಮೀಕ್ಷೆಯಲ್ಲಿ ನ್ಯಾಯಸಿಗಲಿಲ್ಲ, ಈಗಲೂ ಸಿಗುವುದಿಲ್ಲ ಎಂದು ಕೂತರೆ ಅನ್ಯಾಯವಾಗುವುದು ಶೋಷಿತ ಸಮುದಾಯಗಳಿಗೆಯೇ ಹೊರತು, ಬೇರೆಯವರಿಗಲ್ಲ ಎಂದು ಎಚ್ಚರಿಸಿದರು.
ಇದನ್ನೂ ಓದಿರಿ: ವಿಧಾನಸಭೆ, ಲೋಕಸಭೆಯಲ್ಲಿ ಒಬಿಸಿಗಳಿಗೆ ಮೀಸಲಾತಿ ಬೇಕೇಬೇಕು: ಎ.ನಾರಾಯಣ
ಕೇವಲ ಜಾತಿಗಣತಿಯಿಂದ ಪ್ರಯೋಜನವಿಲ್ಲ ಎಂದು 1951ರಲ್ಲಿ ಜಾತಿಗಣತಿ ನಿಲ್ಲಿಸಲಾಯಿತು. 2011ರಲ್ಲಿ ಮನಮೋಹನ್ ನೇತೃತ್ವದ ಸರ್ಕಾರ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಸಿದಾಗಲೂ ಜಾತಿಗಳನ್ನು ಸರಿಯಾಗಿ ಎಣಿಸಿಲ್ಲ, ಗಣತಿ ಸಮರ್ಪಕವಾಗಿಲ್ಲ ಎಂದು ಆಕ್ಷೇಪಿಸಲಾಯಿತು. ವೈಜ್ಞಾನಿಕವಾಗಿಲ್ಲ ಎಂಬ ತಕರಾರು ಪದೇಪದೇ ಬರುತ್ತದೆ. ಮುಂದೆ ಕೂಡ ಇಂತಹ ಸಮಸ್ಯೆ ಎದುರಾಗಲ್ಲ ಎನ್ನಲಾರೆ ಎಂದರು.
ಒಳಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿ, “ಪ್ರತಿ ಸಂದರ್ಭದಲ್ಲಿ ಎಲ್ಲ ಪಕ್ಷಗಳು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತವೆ. ಈಗ ಬಂದಿರುವ ವರದಿಗಳನ್ನು, ಶಿಫಾರಸ್ಸುಗಳನ್ನು ಸಮರ್ಪಕವಾಗಿ ಜಾರಿ ಮಾಡಿದ್ದರೆ ಇಷ್ಟು ಸಮೀಕ್ಷೆಗಳ ಅಗತ್ಯವೇ ಇರಲಿಲ್ಲ. ಸಾರಾಸಗಟಾಗಿ ಒಂದು ವರದಿಯನ್ನು ತಿರಸ್ಕರಿಸುವುದು ಯಾವ ರೀತಿಯ ಸಾಮಾಜಿಕ ನ್ಯಾಯ? ಮುಂದೆ ನಡೆಸುವ ಸಮೀಕ್ಷೆಯನ್ನು ವಸ್ತುನಿಷ್ಠವಾಗಿ ನಡೆಸಬೇಕು. ನಾವು ಎಚ್ಚರಿಕೆ ವಹಿಸದಿದ್ದರೆ ಮತ್ತೆ ಬೆಲೆ ತೆರಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶೋಷಿತ ವರ್ಗಗಳ ಒಕ್ಕೂಟದ ರಾಮಚಂದ್ರಪ್ಪ, “ನಾವು ಜಾಗೃತರಾಗಿದ್ದರೆ ನಮ್ಮ ಸಂಘಟನೆ ಬಲವಾಗಿರುತ್ತಿತ್ತು. ಸಮುದಾಯಗಳನ್ನು ಒಡೆದು ಆಳುವ ನೀತಿ ಮೊದಲಿನಿಂದಲೂ ಕೆಲಸ ಮಾಡುತ್ತಿದೆ. ಮನುವಾದಿಗಳಿಗೆ ನಮ್ಮ ಅಭಿವೃದ್ಧಿ ಬೇಕಿಲ್ಲ. ನಮ್ಮಲ್ಲೇ ಒಡಕು ಉಂಟು ಮಾಡುತ್ತಾರೆ. ನಾವು ಸಂಘಟಿತರಾಗದಂತೆ ನೋಡಿಕೊಳ್ಳುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ನಾರಾಯಣ, ಜಾಗೃತ ಕರ್ನಾಟಕದ ಮುತ್ತುರಾಜು ಇದ್ದರು.





