- ‘ವಿರೋಧ ಪಕ್ಷದ ನಾಯಕ ಆಯ್ಕೆ ಮಾಡುವುದರೊಳಗಾಗಿ ಸರ್ಕಾರ ಪತನ’
- ‘ರಾಜಕೀಯ ಭೂಕಂಪ ಮೊದಲು ಬೆಳಗಾವಿ ಜಿಲ್ಲೆಯವರಿಗೆ ಗೊತ್ತಾಗುತ್ತದೆ’
ರಾಜ್ಯ ಸರ್ಕಾರವೇ ಪತನಗೊಳ್ಳುತ್ತಿರುವಾಗ ರಾಜ್ಯದಲ್ಲಿ ಪ್ರತಿಪಕ್ಷ ನಾಯಕ ಏಕೆ ಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು.
ವಿಜಯಪುರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದರೊಳಗಾಗಿ ಕಾಂಗ್ರೆಸ್ ಸರ್ಕಾರವೇ ಇಲ್ಲದಂತಾಗಬಹುದು” ಎಂದರು.
“ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ದೊಡ್ಡ ಷಡ್ಯಂತ್ರ ನಡೆದಿದೆ. ಅವರದ್ದೇ ಪಕ್ಷದ ಚನ್ನಗಿರಿ ಶಾಸಕ ಡಿ.ಕೆ. ಶಿವಕುಮಾರ್ಗೆ 70 ಶಾಸಕರ ಬೆಂಬಲ ಇದೆ ಎಂದಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಅವರ ಕಡೆಗೆ 65 ಅಷ್ಟೇ ಇದೆ ಎಂದಾಯಿತು” ಎಂದರು.
“ಶಾಸಕ ರಮೇಶ ಜಾರಕಿಹೊಳಿ ಹೇಳಿದ ಹಾಗೆ ಸರ್ಕಾರ ಪತನವಾಗುವ ಸಾಧ್ಯತೆ ಇದೆ. ಎಲ್ಲೇ ರಾಜಕೀಯ ಭೂಕಂಪನವಾದರೂ ಮೊದಲು ಬೆಳಗಾವಿ ಜಿಲ್ಲೆಯವರಿಗೆ ಗೊತ್ತಾಗುತ್ತದೆ. ಹಾಗೆಯೇ, ರಮೇಶ ಜಾರಕಿಹೊಳಿಯವರಿಗೆ ಗೊತ್ತಾಗಿದೆ ಎನ್ನಿಸುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ʻಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲʼ ಎಂದು ಸಿಎಂ ಯಾರನ್ನು ಹೆದರಿಸುತ್ತಿದ್ದಾರೆ?
“ರಾಜ್ಯ ಸರ್ಕಾರ ಪೂರ್ಣವಾಗಿ ದಿವಾಳಿಯಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿಲ್ಲ. ಘೋಷಣೆಯಂತೆ 200 ಯುನಿಟ್ ವಿದ್ಯುತ್ ಉಚಿತ ಕೊಡುತ್ತಿಲ್ಲ. ಗೃಹ ಲಕ್ಷ್ಮಿ ಎಲ್ಲರಿಗೂ ಸಿಕ್ಕಿಲ್ಲ, ಅದಕ್ಕಾಗಿ ಹಣ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಹುಲಿ ಉಗುರು, ಚಿರತೆ ಉಗುರು, ಬಸವನಾಡು ನಾಮಕರಣ ಮಾಡುವುದು ಸೇರಿದಂತೆ ಕೆಲಸಕ್ಕೆ ಬಾರದ ವಿಷಯಗಳ ಮೂಲಕ ಜನರನ್ನು ತಪ್ಪು ದಾರಿಗೆ ಒಯ್ಯುತ್ತಿದ್ದಾರೆ” ಎಂದು ಕಿಡಿ ಕಾರಿದರು.
ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ಗಳಿಗೆ ಬೆಂಕಿ ಹಚ್ಚುತ್ತಿರುವ ವಿಷಯವಾಗಿ ಪ್ರತಿಕ್ರಿಯಿಸಿದ ಯತ್ನಾಳ, “ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ಕೆರಳಿಸುವ ಪ್ರಯತ್ನ ಮಾಡಬಾರದು. ಪ್ರಚೋದನೆ ಕೊಡುವ ಕೆಲಸ ಖಂಡಿಸುತ್ತೇವೆ. ನಿಮ್ಮ ಸರ್ಕಾರದ ಜಗಳದಿಂದಾಗಿ ಕರ್ನಾಟಕದ ಬಸ್ಗಳಿಗೆ ಬೆಂಕಿ ಹಚ್ಚುವ ಕೆಲಸ ಮಾಡಬಾರದು” ಎಂದರು.





