ಸಂಘಪರಿವಾರ ಹಾಗೂ ಬಿಜೆಪಿಯ ನಾಯಕರು ಮುಸ್ಲಿಂ ಸಮುದಾಯವನ್ನು ಹಿಂದೂಗಳ ಶಾಶ್ವತ ಶತ್ರುಗಳಾಗಿ ಬಿಂಬಿಸುವ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹಿರಿಯ ಸಮಾಜ ಚಿಂತಕರಾದ ಶಿವಸುಂದರ್ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿನ ಕ್ವೀನ್ ರಸ್ತೆಯಲ್ಲಿರುವ ಬಿಫ್ಟ್ ಸಭಾಂಗಣದಲ್ಲಿ ಸೋಲಿಡಾರಿಟಿ ಯೂತ್ ಮೂಮೆಂಟ್ ಕರ್ನಾಟಕವು ವಿವಿಧ ಲೇಖಕರು, ಚಿಂತಕರು ಹಾಗೂ ಪತ್ರಕರ್ತರ ಸಮಗ್ರ ಕೃತಿಯಾದ “ವಕ್ಫ್: ಅಪಪ್ರಚಾರ ಮತ್ತು ವಾಸ್ತವ” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಕ್ಫ್ ವಿಚಾರಗಳಲ್ಲಿ ಸುಪ್ರೀಂ ಕೋರ್ಟ್ ಕೂಡ ತನ್ನ ಮೂಲಭೂತ ಕರ್ತವ್ಯಗಳಿಂದ ಸಂಪೂರ್ಣವಾಗಿ ಹಿಂದೆ ಹೋಗುತ್ತಿದೆ. ವಕ್ಫ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಇತ್ತೀಚಿನ ತೀರ್ಪುಗಳು ಕೂಡ ಬೇಸರ ಮೂಡಿಸಿವೆ. ಸಂಘಪರಿವಾರ ಹಿನ್ನೆಲೆಯುಳ್ಳ ಕೇಂದ್ರದ ಬಿಜೆಪಿ ಸರ್ಕಾರ ಸಾವರ್ಕರ್ ಚಿಂತನೆಯ ಬ್ರಾಹ್ಮಣಶಾಹಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಕಳೆದ 10-11 ವರ್ಷಗಳಿಂದ ಅದರ ವೇಗ ಹೆಚ್ಚಾಗಿದೆ. 2024ರ ಜೂನ್ ತನಕ ಈ ವಕ್ಫ್ ಎಂಬ ಪ್ರಸ್ತಾಪವೇ ದೇಶದಲ್ಲಿ ಇರಲಿಲ್ಲ. ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲೂ ಕೂಡ ವಕ್ಫ್ ತಿದ್ದುಪಡಿ ತರುತ್ತೇವೆ ಎಂದೂ ಕೂಡ ಹೇಳಿರಲಿಲ್ಲ. ಮುಸ್ಲಿಂ ಸಮುದಾಯವನ್ನು ಹತ್ತಿಕ್ಕುವ ಸಲುವಾಗಿ ಈ ವಿಚಾರ ಮುನ್ನೆಲೆಗೆ ತರಲಾಗಿದೆ ಎಂದು ಶಿವಸುಂದರ್ ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ತಿರುಪತಿ ದೇವಾದಿದೇವ ತಿಮ್ಮಪ್ಪನಿಗೇ ನಾಮ ಹಾಕುವ ಧೂರ್ತರು!
ಬಾಬರಿ ಮಸೀದಿ ಆಯಿತು, ಕಾಶ್ಮೀರ ಆಯಿತು ಈಗ ವಕ್ಫ್ ವಿಚಾರವನ್ನು ತಂದು ಮುಸ್ಲಿಂ ಸಮುದಾಯವನ್ನು ಶಾಶ್ವತವಾಗಿ ಹಿಂದೂಗಳ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ಮೋದಿ ಸರ್ಕಾರ ವಕ್ಫ್ ಟ್ರಸ್ಟ್ ಸಾರ್ವಜನಿಕರಿಗೆ ಸೇರಿದ್ದು ಎಂಬುದನ್ನು ನಿರಾಕರಿಸಿ ಸಂವಿಧಾನಕ್ಕೆ ವಿರುದ್ಧವಾದ ಕೆಲಸಗಳನ್ನು ಮಾಡಲು ಹೊರಟಿದೆ. ಈಗ ಎಸ್ಐಆರ್ನಲ್ಲಿಯೂ ಮುಸ್ಲಿಂ ಸಮುದಾಯವನ್ನು ನೇರವಾಗಿ ಗುರಿ ಮಾಡಲಾಗುತ್ತಿದೆ. ಇದಲ್ಲದೆ ಬೌದ್ಧ ಧರ್ಮದ ಟ್ರಸ್ಟ್ಗಳಲ್ಲೂ ಬ್ರಾಹ್ಮಣರನ್ನೂ ತಂದು ಕೂರಿಸುತ್ತಿರುವುದು ಕೂಡ ಆತಂಕಕಾರಿ ಬೆಳವಣಿಗೆ. ಈ ಹುನ್ನಾರದ ವಿರುದ್ಧ ಸಮಗ್ರ ಭಾರತದ ಪ್ರಜೆಗಳು ಎಚ್ಚೆತ್ತುಕೊಂಡು ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಹೈಕೋರ್ಟ್ ವಕೀಲರಾದ ಅಕ್ಮಲ್ ರಿಝ್ವಿ ಮಾತನಾಡಿ, ಯುವಕರಿಂದ ಸಮಾಜದಲ್ಲಿ ಹೆಚ್ಚಾಗಿ ಕೋಮುವಾದ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಆದರೆ 40-50 ವಯಸ್ಸಿನ ಕೌಟುಂಬಿಕ ಜವಾಬ್ದಾರಿ ಹೊತ್ತಿರುವುವವರಿಂದಲೇ ಕೋಮುವಾದ ತೀವ್ರವಾಗುತ್ತಿದೆ. ಜಗತ್ತಿನಲ್ಲಿ ಎಐ ವೇಗವಾಗಿ ಬೆಳೆಯುತ್ತಿದ್ದು, ಬಹುತೇಕರ ಉದ್ಯೋಗಗಳಿಗೆ ಕುತ್ತು ತರುತ್ತಿದೆ. ಆದರೆ ಆಡಳಿತ ನಡೆಸುತ್ತಿರುವವರು ಇದನ್ನು ಹೇಗೆ ಸರಿಪಡಿಸಬೇಕು ಎಂಬುದನ್ನು ಬಿಟ್ಟು ಧಾರ್ಮಿಕ ವಿಷಯಗಳನ್ನು ಸಮಾಜದ ಮೇಲೆ ಬಿತ್ತುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ಘಟಕಾಧ್ಯಕ್ಷರಾದ ಡಾ. ಮುಹಮ್ಮದ್ ಸಾದ್ ಬೆಳಗಾಮಿ, ಬೆಂಗಳೂರು ನಗರಾಧ್ಯಕ್ಷರಾದ ಹಾರೂನ್ ಸಫ್ದರ್, ಸೋಲಿಡಾರಿಟಿ ಯೂತ್ ಮೂಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ನಸೀಮ್ ಅಹ್ಮದ್, ಇಸ್ಮಾಯಿಲ್ ತೀರ್ಥಹಳ್ಳಿ, ಪತ್ರಕರ್ತ ಇರ್ಷಾದ್ ವೇಣೂರು ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.









