ಸರ್ಕಾರಿ ಸ್ಥಳಗಳಲ್ಲಿ ಅನುಮತಿ ಪಡೆಯದೆ ಆರ್ಎಸ್ಎಸ್ ಚಟುವಟಿಕೆಗಳನ್ನು ನಡೆಸುತ್ತಿದೆ. ಸರ್ಕಾರಿ ಜಾಗದಲ್ಲಿ ಆರ್ಎಸ್ಎಸ್ ಕಾರ್ಯಕ್ರಮಗಳನ್ನು ನಿಷೇಧಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಆ ಕಾರಣಕ್ಕಾಗಿ, ಬಿಜೆಪಿ ಮತ್ತು ಆರ್ಎಸ್ಎಸ್ ಮುಖಂಡರು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ನಿಂದಿಸುತ್ತಿದ್ದಾರೆ. ಬಿಜೆಪಿಗರ ಧೋರಣೆಯ ವಿರುದ್ಧ ಕಿಡಿಕಾರಿರುವ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ‘RSSಗಾಗಿ ಖರ್ಗೆ ಮೇಲೆ ಮುಗಿಬಿದ್ದವರು, ಗವಾಯಿ ಮೇಲಿನ ದಾಳಿಗೆ ತುಟಿಬಿಚ್ಚಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ನ ವಿಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ಅವರು ‘ಆರ್ಎಸ್ಎಸ್ಗೆ ಕಾಂಗ್ರೆಸ್ ಮನೆಗಳಿಂದಲೇ ಹಣ ಬರುತ್ತದೆ’ ಎಂದಿದ್ದಾರೆ. ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕೂಡ ಆರ್ಎಸ್ಎಸ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ಅವರ ಹೇಳಿಕೆಗಳ ಪತ್ರಿಕಾ ತುಣುಕನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ಅಮಿನ್ ಮಟ್ಟು, ಆರ್ಎಸ್ಎಸ್ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದನ್ನು ನೆಪವಾಗಿಟ್ಟುಕೊಂಡು ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರನಾಯಕರು ಸಚಿವ ಪ್ರಿಯಾಂಕ್ ಖರ್ಗೆ ಮೇಲೆ ಮುಗಿಬಿದ್ದಿದ್ದಾರೆ. ಇವರಲ್ಲಿ ಯಾರೂ ಕೂಡಾ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಸನಾತನಿ ವಕೀಲನೊಬ್ಬ ಶೂ ಎಸೆದ ಘಟನೆ ಬಗ್ಗೆ ತುಟಿ ಬಿಚ್ಚಿಲ್ಲ” ಎಂದು ಕಿಡಿಕಾರಿದ್ದಾರೆ.
“ಇವರನ್ನು ಬಿಟ್ಟುಬಿಡಿ ವಿಶ್ವದ ಹಿಂದುಗಳ ರಕ್ಷಣೆಯ ಪಣತೊಟ್ಟ ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ಇಲ್ಲಿಯವರೆಗೆ ಶೂ ಎಸೆತವನ್ನು ಖಂಡಿಸಿ ನಾಲ್ಕು ಸಾಲಿನ ಹೇಳಿಕೆ ಬಿಡುಗಡೆ ಮಾಡಿಲ್ಲ. ಆ ಘಟನೆಯನ್ನು ಖಂಡಿಸುವ ಪ್ರಾಮಾಣಿಕತೆಯೂ ಇಲ್ಲ, ಸಮರ್ಥಿಸುವ ಧೈರ್ಯವೂ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇವರ (ಆರ್ಎಸ್ಎಸ್) ‘ಹಿಂದು’ ವ್ಯಾಖ್ಯಾನದಲ್ಲಿ ದಲಿತರು ಮತ್ತು ಶೂದ್ರರು ಇಲ್ಲ ಎನ್ನುವುದು ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ, ನಾರಾಯಣ ಸ್ವಾಮಿ, ರವಿಕುಮಾರ್, ಸುನೀಲ್ ಕುಮಾರ್, ಸಿ.ಟಿ.ರವಿ ಮೊದಲಾದವರಿಗೆ ಗೊತ್ತಾಗುವುದು ಯಾವಾಗ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.




