ಅಹ್ಮದಾಬಾದ್ನಲ್ಲಿ ಕರ್ನಾಟಕ ಸಂಘಕ್ಕೆ ಕನ್ನಡ ಭವನ ನಿರ್ಮಾಣಕ್ಕೆ ಬೇಕಿರುವ ನಿವೇಶನ ಕೊಡಿಸುವುದಕ್ಕೆ ಗುಜರಾತ್ ಸರಕಾರದ ಜತೆ ಚರ್ಚೆ ನಡೆಸುವೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಅಹ್ಮದಾಬಾದ್ ಕರ್ನಾಟಕ ಸಂಘವು ಶನಿವಾರ ಹಮ್ಮಿಕೊಂಡಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಸಚಿವರು.
“ಅಹ್ಮದಾಬಾದ್ ನಗರ ಒಂದರಲ್ಲಿಯೇ ಸಾವಿರಾರು ಕನ್ನಡ ಕುಟುಂಬಗಳು ಅನೇಕ ದಶಕಗಳಿಂದಲೂ ನೆಲೆಸಿವೆ. ನಿಮ್ಮೆಲ್ಲರ ಕನ್ನಡಸೇವೆ ನನಗೆ ಬಹಳ ಸಂತೋಷ ಉಂಟು ಮಾಡಿದೆ. ಕರ್ನಾಟಕ ಸಂಘಕ್ಕೆ ಸ್ವಂತ ಭವನ ಬೇಕು ಎಂದು ಕೇಳಿದ್ದೀರಿ. ಈ ಬಗ್ಗೆ ನಾನು ಅದಷ್ಟು ಬೇಗ ಗುಜರಾತ್ ಸರಕಾರದ ಜತೆ ಮಾತುಕತೆ ನಡೆಸುತ್ತೇನೆ. ಸಂಘಕ್ಕೆ ನಿವೇಶನ ಹಾಗೂ ಕನ್ನಡ ಭವನ ನಿರ್ಮಾಣಕ್ಕೆ ನೆರವು ಇರುತ್ತದೆ” ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
“ನಿಮ್ಮ ಭಾಷಾಭಿಮಾನಕ್ಕೆ ನಾನು ಮೂಕನಾಗಿದ್ದೇನೆ. ನನಗೆ ಬಹಳ ಸಂತೋಷ ಉಂಟಾಗಿದೆ. ನಾನು ಅಹ್ಮದಾಬಾದ್ ನಲ್ಲಿ ಇದ್ದೇನೆಯೋ ಅಥವಾ ಕರ್ನಾಟಕದಲ್ಲಿ ಇದ್ದೇನೆಯೋ ಎನ್ನುವ ಭಾವನೆ ಬರುವಷ್ಟು ಕನ್ನಡ ವಾತಾವರಣ ಇಲ್ಲಿದೆ. ‘ಎಲ್ಲಾದರೂ ಇರು, ಎಂತಾದರೂ ಇರು, ನೀ ಕನ್ನಡವಾಗಿರು..’ ಎಂದು ರಾಷ್ಟ್ರಕವಿ ಕುವೆಂಪು ಅವರು ನೀಡಿರುವ ಸಂದೇಶದಂತೆ ನೀವೆಲ್ಲರೂ ಕನ್ನಡಕ್ಕೆ ದೊಡ್ಡ ಸೇವೆ ಸಲ್ಲಿಸುತ್ತಿದ್ದೀರಿ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ಆತ್ಮಾವಲೋಕನದ ಕಾಲ ಮಾತ್ರವಲ್ಲ, ಪ್ರಬಲವಾಗಿ ಸಜ್ಜುಗೊಳ್ಳುವ ಸಮಯ!
“ಇಲ್ಲಿ ನೀವು ಬದುಕು ಕಟ್ಟಿಕೊಂಡು ನಿಮ್ಮ ಜೀವನ ನೀವು ನೋಡಿಕೊಳ್ಳದೆ ತಾಯ್ನಾಡನ್ನು ಮರೆಯದೇ ಕನ್ನಡ ಸೇವೆ ಮಾಡುತ್ತಿರುವುದು ನನಗೆ ಅಚ್ಚರಿ ಉಂಟು ಮಾಡಿದೆ. ನಾನು ಉಕ್ಕು ಸಚಿವನಾದ ಮೇಲೆ ಛತ್ತೀಸಗಢದ ಬಿಲಾಯಿ ಉಕ್ಕು ಕಾರ್ಖಾನೆಗೆ ಭೇಟಿ ನೀಡಿದ್ದೆ. ಅಲ್ಲಿಯೂ ದಶಕಗಳ ಹಿಂದೆಯೇ ಉಕ್ಕು ಕಾರ್ಖಾನೆ ಕೆಲಸಕ್ಕೆ ಬಂದು ಉದ್ಯೋಗ ಮಾಡಿಕೊಂಡು ಅಲ್ಲಿಯೇ ಶಾಶ್ವತವಾಗಿ ನೆಲೆಸಿದ್ದಾರೆ. ಅಲ್ಲಿಯೂ ಕನ್ನಡ ಸಂಘದ ಸದಸ್ಯರನ್ನು ನಾನು ಭೇಟಿ ಮಾಡಿದ್ದೆ” ಎಂದರು.
ಗುಜರಾಜ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜಸ್ಟೀಸ್ ಎನ್. ಎಸ್. ಸಂಜಯ್ ಗೌಡ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತಾಡಿದರು. ಸಂಘದ ಅಧ್ಯಕ್ಷ ಹೆಚ್.ವಿ. ಬೆಣ್ಣೂರ, ಪ್ರಧಾನ ಕಾರ್ಯದರ್ಶಿ ಸುಮನಲಾಲ್ ಕೊಡಿಯಾಲ್ ಬೇಲ್, ಗಾಂಧಿನಗರ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಕಮಲೀಶ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.





