ಉಡುಪಿಯ ಪ್ರಸಿದ್ಧ ಎಕೆಎಂಎಸ್ ಸಾರಿಗೆ ಸಂಸ್ಥೆಯ ಮಾಲೀಕ ಸೈಫುದ್ದೀನ್ (47) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ತನ್ನ ಒಡೆತನದ ಬಸ್ ಸಂಸ್ಥೆಯ ಡ್ರೈವರ್ಗಳಿಂದಲೇ ಅವರು ಕೊಲೆಯಾಗಿದ್ದಾರೆ ಎನ್ನುವ ಮಾಹಿತಿ ವ್ಯಕ್ತವಾಗಿದೆ.
ಮಲ್ಪೆ- ಕೊಡವೂರು ರಸ್ತೆ ಪ್ರದೇಶದಲ್ಲಿ ಘಟನೆ ನಡೆದಿದೆ. ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.
ಕೊಡವೂರಿನಲ್ಲಿ ಸೈಫುದ್ದೀನ್ ಇತ್ತೀಚೆಗೆ ಮನೆ ಖರೀದಿ ಮಾಡಿದ್ದು, ಮನೆಗೆ ನುಗ್ಗಿದ ಆರೋಪಿಗಳು ಕಡಿದು ಕೊಂದಿದ್ದಾರೆ. ಮನೆಯಲ್ಲಿ ರಕ್ತ ತುಂಬಿ ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಒಂದಿಷ್ಟು ಮಾಹಿತಿಗಳು ಹೊರಬರುತ್ತಿದ್ದು, ತನ್ನ ಒಡೆತನದ ಬಸ್ ಸಂಸ್ಥೆಯ ಡ್ರೈವರ್ ಗಳಿಂದಲೇ ಸೈಫುದ್ದೀನ್ ಕೊಲೆಯಾಗಿದ್ದಾರೆ ಎನ್ನಲಾಗಿದೆ. ಉಡುಪಿ ಎಸ್ ಪಿ ಹರಿರಾಮ್ ಶಂಕರ್ ಹೇಳಿಕೆ ನೀಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಇದು ಅವರ ಸಂಸ್ಥೆಯ ಸಿಬ್ಬಂದಿಯ ಕೃತ್ಯ ಎಂದು ಕಂಡುಬಂದಿದೆ ಎಂದಿದ್ದಾರೆ.

ಉಡುಪಿಯ ಕೊಡವೂರು ಸಾಲ್ಮರದಲ್ಲಿರುವ ಸೈಫುದ್ದೀನ್ ಮನೆಯಲ್ಲಿ ಶನಿವಾರ (ಸೆ.27) ಬೆಳಗ್ಗೆ 10ರಿಂದ 11 ಗಂಟೆ ಸುಮಾರಿಗೆ ಹತ್ಯೆ ಮಾಡಲಾಗಿದೆ. ಸೈಫುದ್ದೀನ್ ವಿರುದ್ಧ 18 ಕ್ರಿಮಿನಲ್ ಕೇಸುಗಳಿವೆ. ಹಿರಿಯಡ್ಕ ಠಾಣೆ ಮತ್ತು ಉಡುಪಿ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದೆ. ಸೈಫ್ ಎರಡು ಕೊಲೆ ಪ್ರಕರಣದ ಆರೋಪಿ ಎಂದು ಎಸ್ ಪಿ ಮಾಹಿತಿ ನೀಡಿದ್ದಾರೆ.
ಮೂವರು ದುಷ್ಕೃತ್ಯ ಕೃತ್ಯ ಎಸಗಿರುವ ಶಂಕೆಯಿದೆ. ಮೂರು ಜನ ಆರೋಪಿಗಳು ಏಕಕಾಲದಲ್ಲಿ ಅಟ್ಯಾಕ್ ಮಾಡಿದ್ದಾರೆ. ಎಲ್ಲಾ ಆರೋಪಿಗಳು ಅವರದೇ ಬಸ್ ಸಂಸ್ಥೆಯಲ್ಲಿ ಉದ್ಯೋಗಿಗಳು ಎಂದು ತಿಳಿದುಬಂದಿದೆ. ಕೊಲೆಗೆ ಕಾರಣ ಮತ್ತು ಆರೋಪಿಗಳ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ಎಸ್ ಪಿ ತಿಳಿಸಿದ್ದಾರೆ.





