ಬೆಳಗಾವಿಯಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳು ಮಾತ್ರ ಪಕ್ಷ ಆಧಾರಿತವಾಗಿ ನಡೆಯುತ್ತವೆ. ಕೆಲವು ಕ್ಷೇತ್ರಗಳಲ್ಲಿ ಕೆಲವೊಮ್ಮೆ ಒಳ ಒಪ್ಪಂದಗಳು ಮೇಲುಗೈ ಸಾಧಿಸಿ, ಪಕ್ಷ ರಾಜಕಾರಣ ಮಕಾಡೆ ಮಲಗಿದ್ದೂ ಇದೆ. ಇನ್ನು ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರಕ್ಕೆ ಬಂದರೆ ಇಲ್ಲಿ ಪಕ್ಷಗಳು ಲೆಕ್ಕಕ್ಕೆ ಬರುವುದಿಲ್ಲ.
ಜಿಲ್ಲೆಯ ರಾಜಕೀಯ ವಲಯದೊಳಗೆ ರಾಜ್ಯದ ಗಮನ ಸೆಳೆದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿಯ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಮ್ಮತದಿಂದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಅಧ್ಯಕ್ಷ ಸ್ಥಾನಕ್ಕೆ, ರಾಜು ಕಾಗೆ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಬಳಿಕ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಮೂರನೇ ಸ್ಪರ್ಧಾಳು ಇಲ್ಲದ ಕಾರಣಕ್ಕೆ ಬಳಿಕ ನೂತನ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಯಾರ ಅಳತೆಗೂ ಸಿಗದಂತೆ ಮುಗಿದಿದೆ. ಇಲ್ಲಿ ಬಿಜೆಪಿ ಮೇಲುಗೈ ಸಾಧಿಸಿತೇ? ಅಥವಾ ಕಾಂಗ್ರೆಸ್ ಮೇಲುಗೈ ಸಾಧಿಸಿತೇ? ಎಂಬುದಕ್ಕೆ ಉತ್ತರವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿಯೇ ಸಭೆ ನಡೆದು, ಬಿಜೆಪಿಯ ನಾಯಕ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಅಧ್ಯಕ್ಷ ಸ್ಥಾನ ನೀಡಿಲಾಗಿದೆ.
ಬೆಳಗಾವಿ ರಾಜಕಾರಣ ಎಂಬುದೇ ಒಂದು ತರ ವಿಚಿತ್ರವಾದ ಪಾಲಿಟಿಕ್ಸ್. ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಚುನಾವಣೆಯೇ ಒಂದು ದಿಕ್ಕಾದರೆ, ಬೆಳಗಾವಿಯದ್ದೇ ಮತ್ತೊಂದು ದಿಕ್ಕು. ಇಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳು ಮಾತ್ರ ಪಕ್ಷ ಆಧಾರಿತವಾಗಿ ನಡೆಯುತ್ತವೆ. ಕೆಲವು ಕ್ಷೇತ್ರಗಳಲ್ಲಿ ಕೆಲವೊಮ್ಮೆ ಒಳ ಒಪ್ಪಂದಗಳು ಮೇಲುಗೈ ಸಾಧಿಸಿ, ಪಕ್ಷ ರಾಜಕಾರಣ ಮಕಾಡೆ ಮಲಗಿದ್ದೂ ಇದೆ. ಇನ್ನು ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರಕ್ಕೆ ಬಂದರೆ ಇಲ್ಲಿ ಪಕ್ಷಗಳು ಲೆಕ್ಕಕ್ಕೆ ಬರುವುದಿಲ್ಲ.
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕರ್ನಾಟಕ ರಾಜ್ಯದ ಅತ್ಯಂತ ಹಳೆಯ ಮತ್ತು ಪ್ರಮುಖ ಸಹಕಾರಿ ಸಂಸ್ಥೆಗಳಲ್ಲಿ ಒಂದು. ಇದು ರಾಜ್ಯದ ಗ್ರಾಮೀಣ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ, ವಿಶೇಷವಾಗಿ ರೈತರಿಗೆ ಸಾಲ ನೀಡುವ ವಿಚಾರದಲ್ಲಿ. 1919ರಲ್ಲಿ ಸ್ಥಾಪನೆಯಾದ ಈ ಬ್ಯಾಂಕ್, ಬ್ರಿಟಿಷ್ ಕಾಲದಲ್ಲಿ ಸಹಕಾರಿ ಚಳವಳಿಯ ಭಾಗವಾಗಿ ರೂಪುಗೊಂಡಿತು. ಶತಮಾನ ಪೂರೈಸಿರುವ ಈ ಬ್ಯಾಂಕ್ ಕರ್ನಾಟಕದ ಅತ್ಯಂತ ಹಳೆಯ ಸಹಕಾರಿ ಬ್ಯಾಂಕ್ಗಳಲ್ಲಿ ಒಂದು.
ಬೆಳಗಾವಿ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಗ್ರಾಮೀಣ ಸಹಕಾರಿ ಪತ್ತಿನ ಬ್ಯಾಂಕ್ಗಳಲ್ಲಿ ವಿಶೇಷ ಹಿಡಿತವೊಂದಿದೆ. ವಾರ್ಷಿಕವಾಗಿಯೇ ಸುಮಾರು 8 ಸಾವಿರ ಕೋಟಿ ರೂ. ವಹಿವಾಟು ಈ ಬ್ಯಾಂಕ್ನಿಂದ ನಡೆಯುತ್ತದೆ ಎಂದರೆ ಊಹಿಸಿಕೊಳ್ಳಿ ಎಂದು ಎಷ್ಟು ಶ್ರೀಮಂತ ಬ್ಯಾಂಕ್ ಎಂದು.
ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 50 ಲಕ್ಷಕ್ಕಿಂತಲೂ ಹೆಚ್ಚು ಜನರಿದ್ದಾರೆ. 10 ಲಕ್ಷ ರೈತರು ಸಹಕಾರಿ ಸಂಘದ ಬ್ಯಾಂಕ್ನಲ್ಲಿ ನೋಂದಾಯಿತರಾಗಿದ್ದಾರೆ. ಸುಮಾರು 3-4 ಲಕ್ಷ ರೈತರಿಗೆ ಡಿಸಿಸಿ ಬ್ಯಾಂಕ್ನಿಂದ ಸಾಲ ವಿತರಣೆಯಾಗುತ್ತದೆ. ಇದು ಸುಮಾರು 3,500 ಕೋಟಿ ರೂ. ನಷ್ಟು.
ರಮೇಶ್ ಕತ್ತಿ ಮತ್ತು ಉಮೇಶ್ ಕತ್ತಿ ಹಿಡಿತದಲ್ಲೇ ಇರುತ್ತಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಈಗ ಕೈ ತಪ್ಪಿದೆ. ಹಿಂದೆ ಲಕ್ಷ್ಮಣ ಸವದಿ ಅವರು ಬೆಳಗಾವಿ ಡಿಸಿಸಿ ಬ್ಯಾಂಕ್ನ ಅಧ್ಯಕ್ಷರಾದ ಮೇಲೆಯೇ ಜಾರಕಿಹೊಳಿ ಮತ್ತು ಸವದಿ ಕುಟುಂಬದ ನಡುವೆ ಬಿರುಕು ಬಿಟ್ಟಿದ್ದು. ಇದೇ ಕಾರಣಕ್ಕೆ ಈ ವೈಮನಸ್ಸು ಈಗಲೂ ಮುಂದುವರಿದಿದೆ. ಈಗ ಕಾಂಗ್ರೆಸ್ನಲ್ಲಿರುವ ಲಕ್ಷ್ಮಣ ಸವದಿ ಅಧ್ಯಕ್ಷ ಸ್ಥಾನಕ್ಕೆ ಏರಲು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಧಾರಣೆಯಾಗಬೇಕಾದದ್ದು ಜೈಲುಗಳೋ, ರಾಜ್ಯ ಸರ್ಕಾರವೋ?
ಬಿಜೆಪಿಯ ಹಿರಿಯ ನಾಯಕ ಮತ್ತು ಸತೀಶ್ ಜಾರಕಿಹೊಳಿ ಸಹೋದರ ಬೆಳಗಾವಿ ಹಾಲು ಒಕ್ಕೂಟ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಈ ಬಗ್ಗೆ ಪ್ರತಿಕ್ರಿಯಿಸುತ್ತ, “ಚುನಾವಣೆಗೆ ಮೊದಲು ನಾವು ಹೇಳಿದಂತೆ ನಮಗೆ ಬಹುಮತ ಸಿಕ್ಕಿದೆ. ಅದೇ ರೀತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ಲಿಂಗಾಯತರಿಗೆ ಕೊಡುತ್ತೇವೆ ಅಂತಾ ಮಾತು ಕೊಟ್ಟಿದ್ದೇವೆ. ಈಗ ಕೊಟ್ಟಿದ್ದ ಮಾತನ್ನು ಈಡೇರಿಸಿದ್ದೇವೆ. ಮುರಗೋಡ ಮಹಾಂತ ಅಜ್ಜನವರ ಆಶೀರ್ವಾದಿಂದ ಬ್ಯಾಂಕ್ ನೂರು ವರ್ಷ ದಾಟಿ ಮುನ್ನಡೆಯುತ್ತಿದೆ. ನಮ್ಮ ದೇಶಕ್ಕೆ 2004ರಲ್ಲಿ ವಿಶ್ವದ ಅತ್ಯುತ್ತಮ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿ ಸಿಕ್ಕರು. ಇವತ್ತು ದೇವರ ಇಚ್ಛೆ ಅನುಸಾರ ನಮ್ಮ ಬ್ಯಾಂಕಿಗೆ ಓರ್ವ ಆರ್ಥಿಕ ತಜ್ಞ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಅಧ್ಯಕ್ಷರಾಗುವ ಅವಕಾಶ ಸಿಕ್ಕಿದೆ. ಇವರು ನಮ್ಮ ಭಾಗದ ಮನಮೋಹನ್ ಸಿಂಗ್” ಎಂದು ಬಣ್ಣಿಸಿದ್ದಾರೆ.
“ಅಣ್ಣಾಸಾಹೇಬ ಜೊಲ್ಲೆಯವರು ನಮ್ಮನ್ನು ನಂಬಿ ಬಂದಿದ್ದರು. ಹೀಗಾಗಿ ಜೊಲ್ಲೆಯವರನ್ನು ಗೆಲ್ಲಿಸಿ, ಅಧ್ಯಕ್ಷರಾಗಿ ಮಾಡಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಬ್ಯಾಂಕ್ಗೆ ಅಣ್ಣಸಾಹೇಬ್ ಜೊಲ್ಲೆ ಅವರ ಅಗತ್ಯವಿದೆ. ಪ್ರತಿ ವರ್ಷವೂ ಬ್ಯಾಂಕ್ನಿಂದ ಠೇವಣಿ ಹೋಗುತ್ತೆ, ಬರುತ್ತೆ. ನಮ್ಮ ಪರ ಸದಸ್ಯರನ್ನು ಸೆಳೆಯಲು ಬೆಂಗಳೂರು, ಬೆಳಗಾವಿಯಲ್ಲಿ ಇದ್ದುಕೊಂಡು ನವರತ್ನ ತೈಲ ಹಚ್ಚಿ ಮಸಾಜ್ ಮಾಡಿದರು. ಆದರೆ, ಅದು ವರ್ಕೌಟ್ ಆಗಲಿಲ್ಲ. ಆದರೆ, ನಾವು ಆಯುರ್ವೇದಿಕ್ ಡಾಕ್ಟರ್ ಇದ್ದೇವೆ ಸರಿಯಾದ ಔಷಧ ಕೊಟ್ಟಿದ್ದೇವು. ಹೀಗಾಗಿ ನಮ್ಮ ಗೆಲುವು ಆಗಿದೆ” ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ.





