ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ, ಸಹೋದರಿ ವಿಜಯಲಕ್ಷ್ಮಿ ಮತ್ತು ಗೋಪಾಲ್ ಅವರ ಪುತ್ರ ಅಜಯ್ ವಿರುದ್ಧ 2 ಕೋಟಿ ರೂಪಾಯಿ ವಂಚನೆ ದೂರು ದಾಖಲಿಸಿದ್ದ ಮಹಿಳೆ ಸುನೀತಾ ಚವ್ಹಾಣ್ (48) ಕೊನೆಗೂ ರಾಜಿ ಸಂಧಾನದ ಬಳಿಕ ತಾವು ದಾಖಲಿಸಿದ್ದ ಪ್ರಕರಣ ವಾಪಸ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ದೂರುದಾರರಾದ ಜೆಡಿಎಸ್ ಮಾಜಿ ಶಾಸಕ ದೇವಾನಂದ್ ಫುಲ್ಸಿಂಗ್ ಚವ್ಹಾಣ್ ಅವರ ಪತ್ನಿ ಸುನೀತಾ ಚವ್ಹಾಣ್ (48) ಅವರು ದಾಖಲಿಸಿದ್ದ ವಂಚನೆ ಪ್ರಕರಣವನ್ನು ಅವರು ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಯಶವಂತಪುರದ ನಿವಾಸಿ ಸುನೀತಾ, ಪ್ರಕರಣವನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಈ ವಂಚನೆ ಪ್ರಕರಣ ಸಂಬಂಧ ಈ ವರೆಗೂ ಮೂವರನ್ನು ಬಂಧಿಸಲಾಗಿತ್ತು. ಅಲ್ಲದೆ ಪೊಲೀಸರು ಮತ್ತೋರ್ವ ಆರೋಪಿ ಗೋಪಾಲ್ಗಾಗಿ ಶೋಧ ನಡೆಸುತ್ತಿದ್ದಾರೆ ಎಂಬ ಗೃಹ ಸಚಿವ ಡಾ ಜಿ ಪರಮೇಶ್ವರ ಅವರ ಹೇಳಿದ್ದರು. ಈ ಬಗ್ಗೆಯೂ ಪ್ರತಿಕ್ರಿಯಿಸಿರುವ ಸುನಿತಾ ಅವರು, ‘ಸಮಸ್ಯೆ ಬಗೆಹರಿದಿದ್ದರಿಂದ ಯಾರನ್ನೂ ಬಂಧಿಸಲಾಗಿಲ್ಲ’ ಎಂದು ಹೇಳಿದರು.
ಪೊಲೀಸರ ಸ್ಪಷ್ಟನೆ
ವಂಚನೆ ಪ್ರಕರಣ ಸಂಬಂಧ ಬಸವೇಶ್ವರನಗರ ಪೊಲೀಸರು ಗುರುವಾರ ಎಫ್ಐಆರ್ ದಾಖಲಿಸಿದ್ದು, ದೂರುದಾರರು ರಾಜಿ ಅರ್ಜಿ ಸಲ್ಲಿಸುವ ಮೂಲಕ ದೂರನ್ನು ಹಿಂಪಡೆಯಲು ನ್ಯಾಯಾಲಯವನ್ನು ಸಂಪರ್ಕಿಸಬೇಕು. ನಾವು ಸೆಕ್ಷನ್ 164 ಸಿಆರ್ಪಿಸಿಯಡಿಯಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.





