ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಾಳೆ ಅಂದರೆ ಡಿಸೆಂಬರ್ 14ರಂದು ಚುನಾವಣೆ ನಡೆಯಲಿದೆ. ಸ್ತ್ರಿವಾದಿ ಲೇಖಕಿ ಆರ್ ಸುನಂದಮ್ಮ ಮತ್ತು ಲೇಖಕಿ, ಪ್ರಾಧ್ಯಾಪಕಿ ನಿರ್ಮಲಾ ಎಲಿಗಾರ್ ಕಣದಲ್ಲಿದ್ದು ಇಬ್ಬರೂ ಪ್ರಚಾರದಲ್ಲಿ ತೊಡಗಿದ್ದಾರೆ. ಬೆಂಗಳೂರು ನಿವಾಸಿಗಳಿಗೆ ಕರಪತ್ರಗಳನ್ನು ಹಂಚಿ ಪ್ರಚಾರ ನಡೆಸಿದರೆ, ಉಳಿದವರಿಗೆ ಫೇಸ್ಬುಕ್, ಕರೆ, ವಾಟ್ಸಾಪ್ ಮೊದಲಾದ ಆನ್ಲೈನ್ ಅಸ್ತ್ರಗಳನ್ನು ಬಳಸಿ ಪ್ರಚಾರ ನಡೆಸಿದ್ದಾರೆ.
ನಿಯಮ ಪ್ರಕಾರವಾಗಿ ಪ್ರತಿ ಮೂರು ವರ್ಷಕ್ಕೊಮ್ಮೆ ಕರ್ನಾಟಕ ಲೇಖಕಿಯರ ಸಂಘದ ಚುನಾವಣೆಯು ನಡೆಯುತ್ತದೆ, ಅದೇ ದಿನ ಫಲಿತಾಂಶವೂ ಹೊರಬೀಳಲಿದೆ. ಬೆಂಗಳೂರು ನಗರದಲ್ಲಿ ವಾಸವಿರುವವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಆಯ್ಕೆಯಾದವರು ಅವರೇ ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಬಳಿಕ ಸಂಘದ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸುತ್ತಾರೆ.
ಇದನ್ನು ಓದಿದ್ದೀರಾ? ಡಿ.14ರಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ
2022ರಲ್ಲಿ ನಡೆದ ಲೇಖಕಿಯರ ಸಂಘದ ಚುನಾವಣೆಯಲ್ಲಿ ಅಂದಿನ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಹಾಗೂ ಪುಷ್ಪ ಅವರ ನಡುವೆ ನೇರ ಸ್ಪರ್ಧೆ ನಡೆದಿತ್ತು. ಸಂಘದ 1,330 ಸದಸ್ಯರಲ್ಲಿ1,295 ಮಂದಿ ಮತದಾನದ ಅರ್ಹತೆ ಹೊಂದಿದ್ದರು. ಒಟ್ಟಾರೆಯಾಗಿ ರಾಜ್ಯದ ಎಲ್ಲೆಡೆಯಿಂದ ಒಟ್ಟಾರೆ 699 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ 44 ಮತಗಳು. ತಿರಸ್ಕರಿಸಲ್ಪಟ್ಟಿದ್ದವು. ಅಂತಿಮವಾಗಿ 62 ಮತಗಳ ಅಂತರದಿಂದ ಪುಷ್ಪ ಗೆಲುವು ಸಾಧಿಸಿದ್ದರು.
ಆದರೆ ಹಲವು ಬಾರಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡ ಆರೋಪ ಅವರ ಮೇಲಿತ್ತು ಮತ್ತು ಸೆಪ್ಟೆಂಬರ್ನಲ್ಲಿ ಪದಾಧಿಕಾರಿಗಳು ರಾಜೀನಾಮೆಯನ್ನೂ ನೀಡಿದ್ದರು. ಅದಾಗಲೇ ಅಧ್ಯಕ್ಷರು, ಸಮಿತಿಯ ಅವಧಿ ಮುಗಿದಿತ್ತು. ಇದೀಗ ಹೊಸ ಸಮಿತಿ ರಚನೆಗಾಗಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಪುಷ್ಪ ಅವರು ವೈಯಕ್ತಿಕ ಕಾರಣ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಸುನಂದಮ್ಮ ಮತ್ತು ನಿರ್ಮಲಾ ಎಲಿಗಾರ್ ಕಣದಲ್ಲಿದ್ದಾರೆ.
ಈ ಬಗ್ಗೆ ಈದಿನ ಡಾಟ್ ಕಾಮ್ಗೆ ಪ್ರತಿಕ್ರಿಯಿಸಿದ ಲೇಖಕಿ ಆರ್ ಸುನಂದಮ್ಮ, “ಪ್ರಚಾರ ಚೆನ್ನಾಗಿ ನಡೆಯುತ್ತಿದೆ. ಬೆಂಗಳೂರು ನಗರದಲ್ಲೇ ಅಧಿಕ ಮತಗಳಿದ್ದು, ಅವರು ಮತಗಟ್ಟೆಗೆ ಬಂದು ಮತ ಚಲಾಯಿಸಲಿದ್ದಾರೆ. ಗೆಲ್ಲುವ ಭರವಸೆಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ” ಎಂದು ತಿಳಿಸಿದರು.
ಇನ್ನು, “ಪ್ರಚಾರ ಭರ್ಜರಿಯಾಗಿ ನಡೆದಿದೆ. ಚುನಾವಣೆ ಎಂದಾಗ ಅದನ್ನು ಕೊಂಚ ಗಂಭೀರವಾಗಿಯೇ ತೆಗೆದುಕೊಳ್ಳಬೇಕಾಗುತ್ತದೆ. ಖಂಡಿತವಾಗಿಯೂ ಗೆಲ್ಲುವ ಭರವಸೆಯಿದೆ. ಜನರ ಪ್ರತಿಕ್ರಿಯೆ ಚೆನ್ನಾಗಿದೆ. ನಾಳೆಯವರೆಗೂ ಕಾಯಬೇಕು” ಎಂದು ಪ್ರತಿಸ್ಪರ್ಧಿ ಲೇಖಕಿ, ಪ್ರಾಧ್ಯಾಪಕಿ ನಿರ್ಮಲಾ ಎಲಿಗಾರ್ ಈದಿನ ಡಾಟ್ ಕಾಮ್ಗೆ ಹೇಳಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 1600 ಮತಗಳಿದ್ದು, ಈ ಪೈಕಿ 592 ಅಂದರೆ ಸರಿಸುಮಾರು 600ರಷ್ಟು ಮತವು ಬೆಂಗಳೂರಿನಲ್ಲಿದೆ. ಬೆಂಗಳೂರು ನಗರದ ಮತದಾರರು ಶಂಕರಪುರದಲ್ಲಿರುವ ಅಶೋಕ ಶಿಶುವಿಹಾರದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಉಳಿದ ಜಿಲ್ಲೆಯವರು ಅಂಚೆ ಮತದಾನ ಮಾಡುತ್ತಾರೆ.





