ಚಿಕ್ಕಬಳ್ಳಾಪುರ: ಗಡಿಯಲ್ಲಿ ಸೈನಿಕರು ದೇಶವನ್ನು ಕಾಯುವಂತೆ, ಪೊಲೀಸ್ ಇಲಾಖೆ ನಾಡಿನ ಜನರನ್ನು ಕಾಯುತ್ತಿರುವುದರಿಂದಲೇ ನಾವು ನೀವೆಲ್ಲಾ ಶಾಂತಿ ಸುಖ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ.ಇವರಿಬ್ಬರ ಸೇವೆಯೂ ಉನ್ನತವಾದ ನಾಗರೀಕ ಸೇವೆಯಾಗಿದ್ದು ಇದನ್ನು ನಾಗರೀಕರು ಮತ್ತು ಸಮಾಜ ಗೌರವಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎಸ್.ರಾಮಲಿಂಗೇಗೌಡ ಅಭಿಪ್ರಾಯಪಟ್ಟರು.
ನಗರ ಹೊರವಲಯ ಅಣಕನೂರು ಸಮೀಪದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ೨೦೨೫-೨೬ನೇ ಸಾಲಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಯಾವಕಾಶದ ಗೊಡವೆ ಇಲ್ಲದೆ ನಾಗರೀಕರ ಜೀವನ ಸುಗಮವಾಗಲು ಕಾರ್ಯಕತ್ಪರಾಗುವ ಪೊಲೀಸರು ಮತ್ತು ಇಲಾಖೆ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗಿಯಾಗಿ ಕ್ರೀಡಾ ಕೌಶಲ್ಯ ಪ್ರದರ್ಶನಕ್ಕೆ ಮುಂದಾಗಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದರು.
ಮೂರು ದಿನಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಆಡುವುದರಿಂದ ಮನಸ್ಸು ಮತ್ತು ದೇಹಕ್ಕೆ ಉಲ್ಲಾಸ ದೊರೆಯಲಿದೆ.ದೈಹಿಕ ಮತ್ತು ಮಾನಸಿಕ ಸದೃಡತೆಗೆ ಕ್ರೀಡೆಗಳು ಸಹಕಾರಿಯಾಗಿದ್ದು ಲವಲವಿಕೆಯಿಂದ ಕರ್ತವ್ಯದಲ್ಲಿ ತೊಡಗಲು ಸಾಧ್ಯ ಎಂಬುದನ್ನು ನಮ್ಮ ಪೂರ್ವಿಕರು ಹೇಳಿದ್ದಾರೆ ಇದನ್ನು ಪಾಲಿಸೋಣ ಎಂದರು.
ಹೀಗಾಗಿ ಕ್ರೀಡೆಗಳು ಎಂದ ಮೇಲೆ ಸೋಲು ಗೆಲುವು ಇದ್ದೇ ಇರುತ್ತವೆ.ಇವೆರಡನ್ನೂ ಮನಸ್ಸಿಗೆ ತಂದುಕೊಳ್ಳದೆ ಕ್ರೀಡಾಮನೋಭಾವದಿಂದ ಭಾಗವಹಿಸಿ ಬರುವ ಫಲಿತಾಂಶಕ್ಕೆ ತೃಪ್ತರಾಗಬೇಕು. ಇಲ್ಲಿ ಗೆಲ್ಲುವ ಅಭ್ಯರ್ಥಿಗಳು ರಾಜ್ಯ ಅಂತರಾಜ್ಯ ಮಟ್ಟದಲ್ಲಿ ಭಾಗಿಯಾಗುವ ಅವಕಾಶ ಪಡೆಯುತ್ತೀರೆಂದು ಎಸ್ಪಿ ಅವರು ಹೇಳಿದ್ದಾರೆ. ಹೀಗಾಗಿ ಉತ್ತಮ ಪ್ರದರ್ಶನ ತೋರಿ ರಾಷ್ಟ, ಅಂತರಾಷ್ಟ ಮಟ್ಟದಲ್ಲಿ ಜಿಲ್ಲೆಯ ಘನತೆ ಗೌರವ ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ ಕ್ರೀಡೆಗಳು ಪ್ರತಿಯೊಬ್ಬರಿಗೂ ಅಗತ್ಯವಾಗಿ ಬೇಕಾಗಿರುವ ಉತ್ತಮ ಅಭ್ಯಾಸಗಳ ಪಟ್ಟಿಗೆ ಸೇರಿವೆ. ನಮ್ಮ ಕಾರ್ಯದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ದೇಹಾರೋಗ್ಯ ಮುಖ್ಯ. ಹೀಗಾಗಿಯೇ ಶರೀರ ಮಾಧ್ಯಂ ಖಲು ಧರ್ಮ ಸಾಧನಂ ಎಂದು ಹೇಳಿದ್ದಾರೆ. ನಮ್ಮ ದೇಹ ಸದೃಢವಾಗಿದ್ದರೆ ಸದೃಢವಾಗಿರುವ ಕೆಲಸ ಮಾಡಲು ಸಾಧ್ಯ. ಹಾಗಾಗಿ ದೇಹವನ್ನು ಸದಾ ಸದೃಢವಾಗಿ ಇಟ್ಟುಕೊಳ್ಳಬೇಕಾದರೆ ಪ್ರತಿಯೊಬ್ಬರೂ ಕೂಡ ತಮಗಿಷ್ಟದ ಆಟೋಟಗಳಲ್ಲಿ ಭಾಗಿಯಾಗಬೇಕು ಎಂದರು.
ಯೋಗಭ್ಯಾಸವಿರಲಿ, ಲಘುವ್ಯಾಯಾಮ, ಇಲ್ಲವೇ ವಾಕಿಂಗ್ ಅಭ್ಯಾಸ ಇರಲೇಬೇಕು. ಕೆಲವರು ೪೦ ವಯೋಮಾನ ದಾಟಿದ ನಂತರ ದೃಷ್ಟಿ ಮಂಜಾಗುವುದು ಕಾಣುತ್ತದೆ ಎನ್ನುತ್ತಾರೆ. ಆದರೆ ಯುವಕರಾಗಿದ್ದಾಗ ಉತ್ತಮ ಹವ್ಯಾಸ ಹೊಂದಿದ್ದರೆ ಈ ಸಮಸ್ಯೆಗಳಿಂದ ಕೊಂಚಮಟ್ಟಿಗೆ ಪಾರಾಗಬಹುದು. ಕ್ರೀಡಾಕೂಟಗಳಲ್ಲಿ ಭಾಗಿಯಾಗಿ ಗುಂಪು ಚಟವಟಿಕೆಗಳಲ್ಲಿ ತೊಡಗುವುದರಿಂದ ಉತ್ತಮ ಆರೋಗ್ಯದ ಜೆತೆಗ ಉತ್ತಮ ದೇಹಸಿರಿ ಪಡೆಯಲು ಸಾಧ್ಯ ಎಂದರು.
ಪೊಲೀಸ್ ಇಲಾಖೆಯ ಉದ್ಯೋಗ ಎಂದರೆ ಒತ್ತಡದ ಉದ್ಯೋಗವೆಂದೇ ಭಾವಿಸಲಾಗಿದೆ.ಇಲ್ಲಿದ್ದು ಒತ್ತಡ ರಹಿತರಾಗಿದ್ದುಕೊಂಡು ನಮ್ಮ ಕಾರ್ಯದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಕ್ರೀಡೆಗಳಲ್ಲಿ ಭಾಗಿಯಾಗುವುದು ಬಹಳವೇ ಮುಖ್ಯ. ಇತ್ತೀಚೆಗಂತೂ ಸ್ಟೆçಸ್ ಮೇನೇಜ್ಮೆಂಟ್ ಒಂದು ಶಿಕ್ಷಣದಂತೆ ಬೆಳೆದಿದೆ.ಇಲ್ಲಿ ತರಬೇತಿ ಪಡೆದರೆ ಒತ್ತಡರಹಿತರಾಗಿ ಕಾರ್ಯದಲ್ಲಿ ತೋಡಗುವುದು ತಿಳಿಯಲಿದೆ ಎಂದರು.
ಕ್ರೀಡೆಗಳಲ್ಲಿ ಭಾಗಿಯಾಗುವುದರಿಂದ ಮನಸ್ಸು ಪ್ರಪುಲ್ಲವಾಗುವ ಜತೆಗೆ, ದಿಟ್ಟನಿಲುವಿನ ವ್ಯಕ್ತಿತ್ವ ಹೊಂದಲು ಸಾಧ್ಯ.ಹುಸೇನ್ ಬೋಲ್ಟ್ ಸಾಧನೆ ನಮ್ಮೆಲ್ಲರಿಗೂ ಮಾದರಿಯಾಗಲಿ.ಸ್ಪೂರ್ತಿಯ ಬದುಕಿನತ್ತ ನಮ್ಮ ಪ್ರಯಾಣವಿರಲಿ,ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಎಸ್ಪಿ ಕುಶಾಲ್ ಚೌಕ್ಸೆ ಮಾತನಾಡಿ ಪೊಲೀಸ್ ಇಲಾಖೆಯ ಕ್ರೀಡಾಕೂಟಕ್ಕೆ ತನ್ನದೇ ಆದ ಇತಿಹಾಸ ಮತ್ತು ವಿಶೇಷತೆಯಿದೆ.ಇದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಕೆಲಸವನ್ನು ನಾವು ನೀವೆಲ್ಲಾ ಮಾಡೋಣ. ಕ್ರೀಡಾ ಮನೋಭಾವದಿಂದಲೇ ಪ್ರತಿಯೊಬ್ಬ ಕ್ರೀಡಾಪಟುವೂ ಆಟೋಟಗಳಲ್ಲಿ ಭಾಗಿಯಾಗಿ ಉತ್ತಮ ಪ್ರದರ್ಶನ ತೋರಬೇಕು.ತೀರ್ಪುಗಾರರು ಕೊಡುವ ಫಲಿತಾಂಶವನ್ನು ಸ್ವೀಕರಿಸಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ನ್ಯಾಯಾಧೀಶರಿಗೆ, ಜಿಲ್ಲಾಧಿಕಾರಿಗಳಿಗೆ ಪೊಲೀಸ್ ಇಲಾಖೆಯಿಂದ ಗೌರವ ವಂಧನೆ ಸಲ್ಲಿಸಲಾಯಿತು.ಮುರಳಿ ಕ್ರೀಡಾ ಜ್ಯೋತಿಯನ್ನು ಅತಿಥಿಗಳಿಗೆ ಹಸ್ತಾಂತರಿಸಿದ ನಂತರ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು.
ಕ್ರೀಡಾಕೂಟಕ್ಕೆ ಪಾರಿವಾಳ ಮತ್ತು ಕೇಸರಿ ಬಿಳಿ ಹಸಿರು ಬಲೂನುಗಳನ್ನು ಹಾರಿಬಿಡುವ ಮೂಲಕ ನ್ಯಾಯಾಧೀಶ ರಾಮಲಿಂಗೇಗೌಡ,ಜಿಲ್ಲಾಧಿಕಾರಿ ರವೀಂದ್ರ, ಎಸ್ಪಿ ಕುಶಾಲ್ ಚೌಕ್ಸೆ, ಎಸ್ಪಿ ಜಗನ್ನಾಥರೈ ಚಾಲನೆ ನೀಡಿದರು.
ಈ ವೇಳೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎಸ್.ರಾಮಲಿಂಗೇಗೌಡ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಎಸ್ಪಿ ಕುಶಾಲ್ ಚೌಕ್ಸೆ, ಎ.ಎಸ್ಪಿ. ಜಗನ್ನಾಥರೈ, ಡಿವೈಎಸ್ಪಿ ಶಿವಕುಮಾರ್, ಮುರಳೀಧರ್ ಮತ್ತಿತರರು ಇದ್ದರು.




