ಕೋಲಾರ: ಚಿಕ್ಕಹಸಾಳ ಮತ್ತು ದೊಡ್ಡಹಸಾಳ ಗ್ರಾಮದಲ್ಲಿ ಶೀಘ್ರವೇ 60 ಲಕ್ಷ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ತಾಲೂಕಿನ ದೊಡ್ಡಹಸಾಳ ಗ್ರಾಮ ಪಂಚಾಯಿತಿಯಿಂದ ನರೇಗಾದಲ್ಲಿ ಚಿಕ್ಕಹಸಾಳ ಗ್ರಾಮದಲ್ಲಿ ನಿರ್ಮಿಸಿರುವ ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟನೆ, ಅಂಗನವಾಡಿ ಕೇಂದ್ರ ಉದ್ಘಾಟನೆ ಮತ್ತು ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿ, ಕಳೆದ ಎರಡೂವರೆ ವರ್ಷದಲ್ಲಿ ಕೋಲಾರ ಕ್ಷೇತ್ರದಲ್ಲಿ 1041 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು ಅನುಮಾನ ಇರುವವರು ದಾಖಲೆಗಳನ್ನು ಪರಿಶೀಲಿಸಬಹುದೆಂದು ಶಾಸಕರು ಸವಾಲು ಹಾಕಿದರಲ್ಲದೆ ಸರ್ಕಾರದಿಂದ ಅನುದಾನ ಬರುತ್ತಿಲ್ಲವೆಂದು ಅಪಪ್ರಚಾರ ಮಾಡುವುದು ಸರಿಯಲ್ಲ ಎಂದರು.
ಎಂಎಲ್ಸಿ ಅನಿಲ್ ಕುಮಾರ್ ಮಾತನಾಡಿ, 19 ಕೋಟಿ ರೂ.ವೆಚ್ಚದಲ್ಲಿ ಮೂರಾಂಡಹಳ್ಳಿ ಕ್ರಾಸ್ನಿಂದ ಡಿಂಬ ಗೇಟ್ವರೆಗೆ ಚತುಷ್ಪಥ ರಸ್ತೆ ಮಾಡಲಾಗುತ್ತಿದ್ದು ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಚಿಕ್ಕಹಸಾಳದಿಂದ ಗಾಜಲದಿನ್ನೆ ಹಾಗೂ ಛತ್ರಕೋಡಳ್ಳಿ ಯಿಂದ ಚಿಕ್ಕಹಸಾಳವರೆಗೆ 3 ಕೋಟಿ ರೂ.ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು ಶೀಘ್ರವೇ ವರ್ಕ್ ಆರ್ಡರ್ ನೀಡಲಾಗುತ್ತದೆಂದು ತಿಳಿಸಿದರು.
ದಳಪತಿ ಸಿಎಂಆರ್ ಶ್ರೀನಾಥ್ ಮಾತನಾಡಿ, ದೊಡ್ಡಹಸಾಳ ಪಂಚಾಯತಿಗೆ ಎರಡು ಬಾರಿ ಗಾಂಧಿಗ್ರಾಮ ಪುರಸ್ಕಾರ ಸಿಕ್ಕಿರುವುದು ಅಭಿವೃದ್ಧಿ ಪರ ಚಿಂತನೆಗೆ ಸಾಕ್ಷಿಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ನುಡಿದರು.
ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್ ಮಾತನಾಡಿ, ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಸಾಧಿಸಿರುವ ದೊಡ್ಡಹಸಾಳ ಗ್ರಾಮಪಂಚಾಯತಿ ಆಡಳಿತ ಮಂಡಳಿ ಅಭಿನಂದನಾರ್ಹ ಎಂದು ಶ್ಲಾಘಿಸಿದರು.
ಇದನ್ನು ಓದಿದ್ದೀರಾ..? ರಸ್ತೆಗೆ ಚರಂಡಿಯ ಕೊಳಚೆ ನೀರು ವಿಜಯನಗರ ಬಡಾವಣೆಯ ಸ್ಥಳೀಯರ ಆಕ್ರೋಶ
ಎಂಎಲ್ಸಿ ಇಂಚರಗೋವಿಂದರಾಜು, ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಚಲಪತಿ, ಪಿಡಿಓ ಮೋಹನ್ ಕುಮಾರ್, ಬೆಳಮಾರನಹಳ್ಳಿಆನಂದ್ ಇದ್ದರು.





