ಚಿಕ್ಕಬಳ್ಳಾಪುರ: ಬೆಂಗಳೂರಿನ ಜಿಕೆವಿಕೆ ವಿದ್ಯಾರ್ಥಿಗಳು ತಾಲ್ಲೂಕಿನ ಜಂಬಿಗೇಮರದಹಳ್ಳಿ ಗ್ರಾಮದಲ್ಲಿ ಕಳೆದ 90 ದಿನಗಳಲ್ಲಿ ಉತ್ತಮ ಇಳುವರಿ ಬರುವ ವಿವಿಧ ರೀತಿಯ ಬೆಳೆಗಳನ್ನು ಬೆಳೆಸಿದ್ದಾರೆ ಇದೇ ಮಾದರಿಯನ್ನು ಸ್ಥಳೀಯ ರೈತರು ತಮ್ಮ ಕೃಷಿಯಲ್ಲಿ ಬಳಸಿದರೆ ಆರ್ಥಿಕವಾಗಿ ಬದಲಾಗಬಹುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ತಾಲೂಕಿನ ಜಂಬಿಗೇಮರದಹಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಜಿ.ಕೆ.ವಿ.ಕೆ ಕೃಷಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕೃಷಿ ಸಾನಿಧ್ಯ ಎಂಬ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಜಂಬಿಗೇಮರದಲ್ಲಿ ಬೆಂಗಳೂರಿನ ಜಿ.ಕೆ.ವಿ.ಕೆ ಕೃಷಿ ವಿದ್ಯಾರ್ಥಿಗಳು ತುಂಬಾ ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಕೇವಲ 3 ತಿಂಗಳಲ್ಲಿ ಕೃಷಿಯಲ್ಲಿ ಆಧುನಿಕ ಪದ್ದತಿ, ಸಾವಯವ, ಯಂತ್ರೋಪಕರಣ ಸೇರಿದಂತೆ ಹಲವು ರೀತಿಯ ಪದ್ದತಿಗಳನ್ನು ಪರಿಚಯಿಸಿದ್ದಾರೆ. ವಿದ್ಯಾರ್ಥಿಗಳು 3 ತಿಂಗಳಲ್ಲಿ ಕೃಷಿ ಚಟುವಟಿಕೆಗಳನ್ನು ಹೇಗೆ ಕೈಗೊಳ್ಳಬೇಕು, ವೈಜ್ಞಾನಿಕ ಕೃಷಿ ಪದ್ದತಿಯ ಮೂಲಕ ಅಧಿಕ ಇಳುವರಿ ಪಡೆಯುವುದು, ಸಂಪ್ರದಾಯಿಕ ಕೃಷಿ ಪದ್ದತಿ, ಹೈನುಗಾರಿಕೆ ಹೀಗೆ ಎಲ್ಲಾ ಪದ್ದತಿಗಳನ್ನು ಸ್ಥಳೀಯ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ನಾನು ಸಹ ಸಂಪೂರ್ಣ ಸಹಕಾರ ಕೊಡುತ್ತೇನೆ. ಈ ರೀತಿಯ ಕಾರ್ಯಕ್ರಮಗಳಲ್ಲಿ ರೈತರು ಹೆಚ್ಚು ಹೆಚ್ಚು ಭಾಗವಹಿಸಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡ ಕಾರಕೂರಪ್ಪ ಮಾತನಾಡಿ, ಕೃಷಿ ವಿದ್ಯಾರ್ಥಿಗಳು ಸುಮಾರು 90 ದಿನಗಳ ಕಾಲ ನಮ್ಮ ಗ್ರಾಮದಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ರೈತರಿಗೆ ಅಗತ್ಯವಾಗಿ ಬೇಕಾದಂತಹ ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಇದರಿಂದ ನಮ್ಮ ರೈತರಿಗೆ ತುಂಬಾ ಅನುಕೂಲಕರವಾಗಿದೆ. ಈ ಕಾರ್ಯಾಗಾರದಲ್ಲಿ ಬೇರೆ ರಾಜ್ಯಗಳ ವಿದ್ಯಾರ್ಥಿಗಳೂ ಸಹ ಭಾಗವಹಿಸಿದ್ದಾರೆ. ತಮ್ಮ ಕುಟುಂಬ ಬಿಟ್ಟು ಇಷ್ಟು ದೂರ ಬಂದು ಗ್ರಾಮೀಣ ಭಾಗದ ರೈತರಿಗೆ ಅರಿವು ಮೂಡಿಸುವಂತಹ ಕೆಲಸ ಮಾಡಿರುವುದು ನಿಜಕ್ಕೂ ಶ್ಲಾಘನೀಯವಾದ ವಿಚಾರವಾಗಿದೆ ಎಂದರು.
ಬಳಿಕ ಸೋಮೇನಹಳ್ಳಿ ಗ್ರಾಪಂ ಅಧ್ಯಕ್ಷೆ ಸುಮಂಗಳಮ್ಮ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ತುಂಬಾ ಉಪಯುಕ್ತ. ಜಿಕೆವಿಕೆ ವಿದ್ಯಾರ್ಥಿಗಳು ತುಂಬಾ ಚುರುಕಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಗ್ರಾಮೀಣ ಭಾಗದ ಜನರೊಂದಿಗೆ ಸಾಮಾನ್ಯರಂತೆ ಬೆರೆತುಹೋಗಿರುವುದು ಮೆಚ್ಚುಗೆಯ ಸಂಗತಿ ಎಂದರು.
ಇನ್ನೂ ಕಾರ್ಯಕ್ರಮದಲ್ಲಿ ಜಿ.ಕೆ.ವಿ.ಕೆ ಕೃಷಿ ವಿಶ್ವ ವಿದ್ಯಾಲಯದ ವಿಸ್ತರಣಾ ನಿರ್ದೇಶಕ ಶಿವಲಿಂಗಯ್ಯ, ವಿದ್ಯಾರ್ಥಿಗಳಿಗೆ ನಾಯಕತ್ವ ಗುಣಗಳ ಬಗ್ಗೆ, ರೈತರಿಗೆ ಸೇವೆ ಮಾಡುವ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಿದರು. ಇದೇ ವೇಳೆ ರೈತರ ಹಲವು ಪ್ರಶ್ನೆಗಳಿಗೆ ಕೃಷಿ ವಿಜ್ಞಾನಿಗಳು ಉತ್ತರ ನೀಡಿದರು.
ಇದನ್ನು ಓದಿದ್ದೀರಾ..? ಕೆಜಿಎಫ್ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ-ಲೋಕೋಪಯೋಗಿ ಸಚಿವ ಸತೀಶ್ಜಾರಕಿಹೋಳಿ
ಕಾರ್ಯಕ್ರಮದ ಅಂಗವಾಗಿ ವಿವಿಧ ಇಲಾಖೆಗಳ ಮಾಹಿತಿ ಮಳಿಗೆಗಳನ್ನು ತೆರೆದು ರೈತರಿಗೆ ಮಾಹಿತಿ ನೀಡಲಾಯಿತು.
ಈ ವೇಳೆ ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮ ಸಹ ಸಂಯೋಜಕಿ ಎನ್.ಮಂಜುಳ, ಕೃಷಿ ವಿಜ್ಞಾನಿಗಳಾದ ಪಾಪಿರೆಡ್ಡಿ, ಸುಕನ್ಯ, ಸುನಿತಾ, ಪದ್ಮಜಾ, ಸೋಮೇನಹಳ್ಳಿ ಗ್ರಾಪಂ ಅಧ್ಯಕ್ಷೆ ಸುಮಂಗಳಮ್ಮ, ಸದಸ್ಯರಾದ ಸವಿತ, ನಾಗಪ್ಪ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಆದಿರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ, ತೋಟಗಾರಿಕೆ ಇಲಾಖೆಯ ದಿವಾಕರ್, ಬಾಲಾಜಿ, ರೇಷ್ಮೆ ಇಲಾಖೆಯ ಗಂಗರಾಜು, ಮುಖಂಡರಾದ ಅಶ್ವತ್ಥಪ್ಪ, ಎಂ.ವಿ.ಕೃಷ್ಣಪ್ಪ, ಕಸಾಪ ಅಧ್ಯಕ್ಷ ಬಿ. ಮಂಜುನಾಥ್, ರಮೇಶ್, ಯರ್ರಲಕ್ಕೇನಹಳ್ಳಿ ಮಂಜುನಾಥ, ಪ್ರಕಾಶ್ ಸೇರಿದಂತೆ ಗ್ರಾಮಸ್ಥರು ಮತ್ತು ಕೃಷಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಹಾಜರಿದ್ದರು.





