ಕೋಲಾರ: ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಬಡವರು, ದಲಿತರು, ಅಲ್ಪಸಂಖ್ಯಾತರ ಬಗ್ಗೆ ಬಹಳ ಕಾಳಜಿಯನ್ನು ಹೊಂದಿದ್ದರು. ಅವರು ತಮ್ಮ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ದೇಶಕ್ಕೆ ಅನೇಕ ಕೊಡುಗೆ ನೀಡಿದ್ದಾರೆ ಎಂದು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಶುಕ್ರವಾರ ಪಕ್ಷದಿಂದ ಹಮ್ಮಿಕೊಳ್ಳಲಾದ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯವರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಪಕ್ಷದ ಮೂಲೆ ಮೂಲೆಯಲ್ಲಿ ಸಂಘಟನೆಗೊಳ್ಳಲು ಇಂದಿರಾಗಾಂಧಿಯವರೇ ಕಾರಣವಾಗಿದ್ದಾರೆ ದೇಶಕ್ಕೆ ಸಮರ್ಥ ನಾಯಕತ್ವ ಕೊಟ್ಟಿದ್ದರು. ಇಂದಿರಾಗಾಂಧಿ ಅವರು ಕೊನೆಯ ಉಸಿರಿನವರೆಗೂ ಪಕ್ಷಕ್ಕಾಗಿ, ರಾಷ್ಟ್ರಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡು ದೇಶಕ್ಕೆ ಪ್ರಾಣವನ್ನೆ ಬಲಿಕೊಟ್ಟು ಮಹಾತ್ಮರಾಗಿದ್ದಾರೆ. ವಿಧವಾ ವೇತನ, ಬ್ಯಾಂಕ್ ರಾಷ್ಟ್ರೀಕರಣಗಳಂತಹ ಮುಖ್ಯವಾದ ನಿರ್ಧಾರಗಳನ್ನು ಕೈಗೊಂಡ ಮಹಾನ್ ನಾಯಕಿ ಎಂದರು.
ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್ ಮಾತನಾಡಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಜಾರಿಗೆ ತಂದಿರುವ ಗರೀಬಿ ಹಠಾವೋ, ವೃದ್ಯಾಪ್ಯ ವೇತನ, ಬಡವರಿಗಾಗಿ ಸೂರು, ರಾಜಧನ ರದ್ದು, ಜೀತ ವಿಮುಕ್ತಿ ಕಾನೂನು ಜಾರಿ, 20 ಅಂಶಗಳ ಕಾರ್ಯಕ್ರಮ, ಇನ್ನಿತರ ಯೋಜನೆಗಳು ಇಂದಿಗೂ ಜನ-ಮನದಲ್ಲಿ ಉಳಿದು ಪ್ರಚಲಿತದಲ್ಲಿದ್ದು, ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ…? ಹೊನ್ನೇನಹಳ್ಳಿ ಪಿಡಿಒ ಹರೀಶ್ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಕೆ.ಆರ್.ಎಸ್ ಸಂಘಟನೆಯಿಂದ ಪ್ರತಿಭಟನೆ
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆಂಕಟಪತಿಯಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ಸರ್, ಹಿರಿಯ ಕಾಂಗ್ರೆಸ್ ಮುಖಂಡರಾದ ಶ್ರೀಕೃಷ್ಣ, ಬೆಳಗಾನಹಳ್ಳಿ ಮುನಿವೆಂಕಟಪ್ಪ,, ಕುಡಾ ಸದಸ್ಯ ಬಿ.ಟಿ ಚಂದ್ರಶೇಖರ್, ಮುಖಂಡರಾದ ಉಮಾಶಂಕರ್, ವೀರೇಂದ್ರ ಪಾಟೀಲ್, ದಿಂಬಚಾಮನಹಳ್ಳಿ ನಾರಾಯಣಸ್ವಾಮಿ, ಚಿನ್ನಾಪುರ ನಾರಾಯಣಸ್ವಾಮಿ, ಜಗನ್, ನವೀನ್, ಸೋಮಣ್ಣ, ಮುದುವತ್ತಿ ಮುನಿವೆಂಕಟಪ್ಪ, ಮುರಳಿ, ಮುಂತಾದವರು ಇದ್ದರು.





