ಚಿಕ್ಕಬಳ್ಳಾಪುರ: ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿ ಮಾಡಿ- ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು ಡಿಸೆಂಬರ್ 6 ರಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಸಾಮಾಜಿಕ ನ್ಯಾಯಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳ ಊರಾದ ಸಿದ್ದರಾಮನ ಹುಂಡಿಯಿಂದ ಕಾಲ್ನಡಿಗೆ ಜಾಥಾ ಆರಂಭಿಸಿ, ಡಿಸೆಂಬರ್ 11ಕ್ಕೆ ಮೈಸೂರಿನ ಟೌನ್ ಹಾಲ್ ಮುಂಭಾಗದಲ್ಲಿ ಬೃಹತ್ ರಾಜ್ಯ ಮಟ್ಟದ ಪ್ರತಿಭಟನಾ ಸಮಾವೇಶವನ್ನು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ನಡೆಸಲಾಗುವುದು ಎಂದು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಹಾಗೂ ಮಾದಿಗ ಸಮುದಾಯಗಳ ಒಕ್ಕೂಟದ ರಾಜ್ಯ ಸಂಚಾಲಕ ಕೇಶವ ಮೂರ್ತಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, 2024ರ ಆಗಸ್ಟ್ 1 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ಇಂದಿಗೆ 14 ತಿಂಗಳು ಗತಿಸಿದವು. ಪಂಜಾಬ್, ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ರಾಜ್ಯಗಳು ಒಳಮೀಸಲಾತಿಯನ್ನು ಜಾರಿಗೆ ಮಾಡಿ 3 ತಿಂಗಳು ಕಳೆದು ತಮ್ಮ ಆಡಳಿತಾತ್ಮಕ ಕಾರ್ಯಗಳನ್ನು ಪೂರ್ಣಗೊಳಿಸಿವೆ. ಆದರೆ ಆಗಸ್ಟ್ 2025ರವರೆಗೆ ಕರ್ನಾಟಕ ರಾಜ್ಯ ಸರಕಾರ ಒಳಮೀಸಲಾತಿ ವಿಷಯದಲ್ಲಿ ಇನ್ನೂ ಮೀನಾಮೇಷ ಮಾಡುತ್ತಿತ್ತು. ಸರ್ಕಾರದ ಈ ವಿಳಂಬ ದೋರಣೆಯನ್ನು ಖಂಡಿಸುತ್ತೇವೆ ಎಂದರು.
ಕಳೆದ ಆಗಸ್ಟ್ 11 ರಿಂದ ಆರಂಭಗೊಂಡ ಸಾಮಾಜಿಕ ನ್ಯಾಯದ ಪ್ರತೀಕವಾದ ಮತ್ತು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ದಾಸ್ ಆಯೋಗದ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಲು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 2ನೇ ಹಂತದ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಆಹೋರಾತ್ರಿ, ಅನಿರ್ಧಿಷ್ಟಾವಧಿ ಹೋರಾಟದ ಒತ್ತಡಕ್ಕೆ ಮಣಿದ ಸರ್ಕಾರ ಆಗಸ್ಟ್ 19 ರಂದು ವಿಶೇಷ ಸಚಿವ ಸಂಪುಟದಲ್ಲಿ ಒಲ್ಲದ ಮನಸ್ಸಿನಿಂದ ಕೆಲವು ಮಾರ್ಪಾಡುಗಳೊಂದಿಗೆ ಪರಿಶಿಷ್ಟ ಜಾತಿಗಳನ್ನು 5 ಪ್ರವರ್ಗಗಳ ಬದಲಾಗಿ 3 ಪ್ರವರ್ಗಗಳನ್ನಾಗಿ ವಿಂಗಡಿಸಿತು. ಪ್ರವರ್ಗ-ಎ, ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳಿಗೆ ಶೇ.6, ಪ್ರವರ್ಗ-ಬಿ ಹೊಲೆಯ ಮತ್ತು ಹೊಲಯ ಸಂಬಂಧಿತ ಜಾತಿಗಳಿಗೆ ಶೇ.6, ಮತ್ತು ಪ್ರವರ್ಗ-ಸಿ ಸ್ಪರ್ಶ ಜಾತಿಗಳಾದ ಬಂಜಾರ, ವಡ್ಡರ್, ಕೊರಮ-ಕೊರಚ ಮತ್ತು 59 ಅಲೆಮಾರಿ ಸಮುದಾಯಿಗಳಿಗೆ ಶೇ.5, ಒಟ್ಟು ಶೇ.17 ಮೀಸಲಾತಿಯನ್ನು ಹಂಚಿಕೆ ಮಾಡಲು ತೀರ್ಮಾನಿಸಿ, ಅತ್ಯಂತ ಹಿಂದುಳಿದ ಅಲೆಮಾರಿಗಳಿಗೆ ಶೇ.1 ಒಳ ಮೀಸಲಾತಿಯನ್ನು ಬಲಾಡ್ಯ ಕೋಮುಗಳಾದ ಪ್ರವರ್ಗ-ಸಿ ಗೆ ಸೇರಿಸಿ ಅವರನ್ನು ಶಾಶ್ವತವಾಗಿ ಮೀಸಲಾತಿಯಿಂದ ವಂಚಿಸಿ ಆದೇಶವನ್ನು ಹೊರಡಿಸಿತು. ಈ ಆದೇಶದಲ್ಲಿನ ಪ್ಯಾರ-2 ರ ಗೊಂದಲವನ್ನು ಸರಿಪಡಿಸಲು ಆದಿಕರ್ನಾಟಕ, ಆದಿದ್ರಾವಿಡ ಮತ್ತು ಆದಿಆಂಧ್ರ ಜಾತಿಗಳ ಬದಲಿಗೆ ಮೂಲ ಜಾತಿಗಳ ಹೆಸರಿನಲ್ಲಿಯೇ ಜಾತಿ ಪ್ರಮಾಣ ಪತ್ರ ವಿತರಿಸಲು ಕಂದಾಯ ಇಲಾಖೆಗೆ ಆದೇಶಿಸಬೇಕಾಗಿದೆ ಆದರೆ ಪ್ರವರ್ಗ-ಎ ಜಾತಿ ಪ್ರಮಾಣ ಪತ್ರದ ಪರಿಶೀಲನೆಗೆ ಮೇಲ್ವಿಚಾರಣಾ ಸಮಿತಿ ರಚಿಸಬೇಕಿದೆ.
ಇದಲ್ಲದೇ ಪರಿಶಿಷ್ಟ ಜಾತಿ ಉಪಹಂಚಿಕೆಯ ಅನುದಾನ ಹಂಚಿಕೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಒಳಮೀಸಲಾತಿ ಅಸಾಧ್ಯವೆಂದು ಹೇಳಿದ ಮುಖ್ಯಮಂತ್ರಿಗಳ ಗಿಳಿಪಾಠವನ್ನು ನಮ್ಮ ಮಂತ್ರಿಗಳು ಹೋರಾಟಗಾರರಿಗೆ, ಸಮುದಾಯಕ್ಕೆಹೇಳುತ್ತಿದ್ದಾರೆ.ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ನವರು ಕಡತವನ್ನು ಮಂಡಿಸದೆ ಸಂಪುಟ ಸಭೆಗೆ ಗೈರಹಾಜರಾಗಿ ತಮ್ಮ ಉದ್ದಟತನವನ್ನು ತೋರಿಸಿದ್ದಾರೆ.ಇಂತಹ ನಿಷ್ಕ್ರಿಯ ಮತ್ತು ಒಳಮೀಸಲಾತಿ ವಿರೋಧಿ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಯಾವ ಪುರುಷಾರ್ಥಕ್ಕಾಗಿ ಇಲಾಖೆಯಲ್ಲಿ ಮುಂದುವರೆಯಬೇಕು? ಇಂತಹ ನಿಷ್ಕ್ರಿಯಗೊಂಡಿರುವವರನ್ನು ಮುಖ್ಯಮಂತ್ರಿಯವರು ಏಕೆ ಮುಂದುವರೆಸಿದ್ದಾರೆ? ಮೈಸೂರು ಜಿಲ್ಲೆಯವರಾದ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಸಚಿವರ ಮಧ್ಯ ಇರುವ ಒಳ ಒಪ್ಪಂದದಿಂದ ಮುಖ್ಯಮಂತ್ರಿಗಳ ತಲೆದಂಡ ಆಗುವ ದುಸ್ಥಿತಿ ನಿರ್ಮಾಣವಾಗಿದೆ. ಮತ್ತು ಸಮಾಜ ಕಲ್ಯಾಣ ಸಚಿವರು, ಇಲಾಖಾಧಿಕಾರಿಗಳನ್ನು ಕೂಡಲೇ ಬೇರೆ ಇಲಾಖೆಗೆ ವರ್ಗಾಯಿಸಬೇಕಾಗಿದೆ. ಅಥವಾ ಮುಖ್ಯಮಂತ್ರಿಗಳೇ ತಮ್ಮ ಕುರ್ಚಿಯನ್ನು ಖಾಲಿ ಮಾಡಬೇಕು. ನಮ್ಮ ಹಕ್ಕುಗಳು ಸಿಗುವ ವರೆಗೂ ಒಳ ಮೀಸಲಾತಿ ಹೋರಾಟ ಮುಂದುವರೆಸಲು ತೀರ್ಮಾನಿಸಲಾಗಿದೆ.
ಇದನ್ನು ಓದಿದ್ದೀರಾ..?ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಕುಪ್ಪಹಳ್ಳಿ ಗ್ರಾಮ ಪಂಚಾಯಿತಿ
ಸುದ್ದಿಗೋಷ್ಟಿಯಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಟಿ.ಮುನಿಕೃಷ್ಣಪ್ಪ, ಬಿ.ಎನ್.ಗಂಗಾಧರಪ್ಪ,ಸುರೇಶ್.ವಿ, ಮುನಿಕೃಷ್ಣಪ್ಪ, ಇದ್ದರು.
ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿ ಮಾಡಿ- ಇಲ್ಲವೇ ಕುರ್ಚಿ ಖಾಲಿ ಮಾಡಿ
Date:
ಪೋಸ್ಟ್ ಹಂಚಿಕೊಳ್ಳಿ:




