ಬೇತಮಂಗಲ: ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಎಸ್ಸಿಪಿ ಯೋಜನೆ ಅಡಿಯಲ್ಲಿ ತಲಾ 12 ಲಕ್ಷ ದಲ್ಲಿ ಕಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5 ಗ್ರಾಮಗಳಲ್ಲಿ ಒಟ್ಟು 60 ಲಕ್ಷ ರೂಗಳ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕಿ ಎಂ ರೂಪಕಲಾ ಹೇಳಿದರು.
ಪಟ್ಟಣದ ಬಳಿಯ ಕಮ್ಮಸಂದ್ರ , ಬೊಮ್ಮಾಂಡ್ಲಳ್ಳಿ, ಗೊರ್ಲ ಚಿನ್ನಲ್ಲಿ, ಚೀಮ ಬಂಡಲಹಲ್ಲಿ, ಕಗ್ಗಲಹಳ್ಳಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕೆಜಿಎಫ್ ತಾಲೂಕಿನ ಪ್ರತಿ ಗ್ರಾಮದ ಪ್ರತಿಯೊಬ್ಬರು, ಉತ್ತಮ ಆರೋಗ್ಯದೊಂದಿಗೆ ಇರಲು ಶುದ್ಧ ನೀರಿನ ಘಟಕಗಳನ್ನು ಲೋಕಾರ್ಪಣೆಗೊಳಿಸಲಾಗಿದೆ. ಜೊತೆಗೆ ಗ್ರಾಮಸ್ಥರು ಆಯಾ ವ್ಯಾಪ್ತಿಯಲ್ಲಿನ ಮೂಲಸೌಕರ್ಯಗಳಾದ ಹೈ ಮಾಸ್ಟ್ ವಿದ್ಯುತ್ ದ್ವೀಪ, ಸಿಸಿ ರಸ್ತೆ, ಕೊಳವೆಬಾವಿ, ಇತರ ಯಾವುದೇ ಬೇಡಿಕೆಗಳನ್ನು ಇಟ್ಟಿದ್ದಲ್ಲಿ ತಕ್ಷಣ ಸ್ಪಂದಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯ ನಾಗರಾಜ್ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಗೂ ಗ್ರಾಮದಲ್ಲೇ ಶುದ್ಧ ಕುಡಿಯುವ ನೀರು ದೊರಕಿಸಬೇಕು ಎಂಬ ಉದ್ದೇಶದಿಂದ ಶಾಸಕರಿಗೆ ಮನವಿ ಸಲ್ಲಿಸಿದ್ದು ಅದರಂತೆ ಅಂತ ಹಂತವಾಗಿ ಪ್ರತಿ ಗ್ರಾಮದಲ್ಲಿ ಹಾಗೂ ಎಸ್ಸಿ ಕಾಲೋನಿಗಳಲ್ಲಿ ಬಡ ಕೂಲಿ ಕಾರ್ಮಿಕನು ಸಹ ತಮ ಆರೋಗ್ಯದಲ್ಲಿರಬೇಕು ಎಂಬ ಉದ್ದೇಶದಿಂದ ಸೂಕ್ತ ಸ್ಥಳ ಗುರುತಿಸಿ ಆರ್ ಓ ಪ್ಲಾಂಟ್ ಗಳನ್ನು ನಿರ್ಮಿಸಲಾಗಿದೆ ಎಂದರು.
ತಮ್ಮ ಮತ ಕ್ಷೇತ್ರವಾದ ಕಗ್ಗಿಲಹಳ್ಳಿ, ಗೊರ್ಲ ಚಿನ್ನಲ್ಲಿ ವ್ಯಾಪ್ತಿಯಲ್ಲಿ ಪ್ರತಿಯೊಬ್ಬ ಕುಟುಂಬಕ್ಕೂ ವಾಟರ್ ಕ್ಯಾನ್ ಸಹ ನೀಡಲಾಗಿದೆ. ನಮ್ಮ ಕ್ಷೇತ್ರದಲ್ಲಿ 1500 ಕ್ಕೂ ಅಧಿಕ ಅಡಿಗಳ ಆಲದವರೆಗೂ ಕೊಳವೆ ಕೊರೆದರು ನೀರು ಸಿಗದ ಪರಿಸ್ಥಿತಿ ಇದೆ ನೀರು ಸಹ ಫ್ಲೋರೈಡ್ ಯುಕ್ತ ನೀರು ಬರುತ್ತಿದ್ದು ಇದನ್ನು ಶುದ್ಧೀಕರಿಸಿ ಗ್ರಾಮಸ್ಥರಿಗೆ ಕುಡಿಯುವ ನೀರನ್ನು ಪೂರೈಸಲು ಆರ್.ಓ ಪ್ಲಾಂಟ್ ಸಹಕಾರಿಯಾಗಿದೆ ಎಂದರು.
ಚೀಮಬಂಡ್ಲಹಳ್ಳಿ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ ಇರುವ ಕೊಳವೆಬಾವಿ 3,4 ತಿಂಗಳಿಗೊಮ್ಮೆ ರಿಪೇರಿಯಾಗುತ್ತಿರುತ್ತದೆ. ಅವರಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿ ಗುಣಮಟ್ಟದ ಕೇಬಲ್ ಮೋಟರ್ ಮತ್ತು ಸಲಕರಣೆಗಳನ್ನು ಒದಗಿಸಲು ಕೋರಿದರು.
ಹಾಗೂ ಶಾಸಕ ಅನುದಾನದಲ್ಲಿ ಮತ್ತೊಂದು ಕೊಳವೆ ಬಾವಿ ಕೋರೆಸಿ ಶಾಶ್ವತ ನೀರಿನ ಸಮಸ್ಯೆ ನೀಗಿಸಬೇಕೆಂದು ಮನವಿ ಮಾಡಿದರು. ಶಾಸಕರು ತಕ್ಷಣ ಸ್ಪಂದಿಸುವ ಭರವಸೆ ನೀಡಿದರು.
ಇದನ್ನು ಓದಿದ್ದೀರಾ..?ವಿಶ್ವದ ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರದ ದೇವದಾಸ್ ಮೆನನ್ಗೆ ಸ್ಥಾನ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ ಸ್ವಾಮಿವೇಲ್, ಉಪಾಧ್ಯಕ್ಷ ದಾಮೋದರ್ ರೆಡ್ಡಿ, ಪಿಡಿಒ ವಸಂತ್ ಕುಮಾರ್, ಗ್ರಾಮ ಪಂಚಾಯತಿ ಸದಸ್ಯ ಚಲಪತಿ ,ಶಿವು ,ರಮೇಶ್, ಮುಖಂಡರಾದ ವಿನೋದ್, ಕೆ.ಜಿ ಕೋಟೆ ಆನಂದ, ಗೋಪಾಲ್, ರಾಜಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಧಾಕೃಷ್ಣಾರೆಡ್ಡಿ, ವಕೀಲ ಪದ್ಮನಾಭ ರೆಡ್ಡಿ, ಯರನಾಗನಹಳ್ಳಿ ವಿಜಯರಾಘವ ರೆಡ್ಡಿ, ಡೇರಿ ಶಿವಣ್ಣ, ಗೋಪಾಲಪ್ಪ, ಗೋವಿಂದ್, ಹಾಗೂ ಅನೇಕ ಸದಸ್ಯರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.





