ಬಾಗೇಪಲ್ಲಿ:-ಮನರೇಗಾ ಯೋಜನೆ ಹೆಸರನ್ನು ‘ವಿಬಿ ಜೀ ರಾಮ್ ಜೀ’ ಎಂದು ಬದಲಾವಣೆ ಮಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಕ್ರಮವನ್ನು ವಿರೋಧಿಸಿ ಸಿಪಿಐಎಂ ಪಕ್ಷದ ವತಿಯಿಂದ ಸೋಮವಾರ ಪಟ್ಟಣದ ಬಸ್ ನಿಲ್ದಾಣದ ಜಿ.ವಿ.ಶ್ರೀರಾಮ ರೆಡ್ಡಿ ಪುತಳಿ ಮುಂದೆ ಮಸೂದೆ ಪತ್ರಗಳನ್ನು ಸುಡುವ ಮೂಲಕ ಪ್ರತಿಭಟನೆ ನಡೆಸಿದರು.
ಸಿಪಿಐಎಂ ಪಕ್ಷದ ಮುಖಂಡರು ಜಿ.ವಿ.ಶ್ರೀರಾಮ ರೆಡ್ಡಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಒಂದೆಡೆ ಸೇರಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಂ. ಪಿ.ಮುನಿವೆಂಕಟಪ್ಪ ಮಾತನಾಡಿ’ಕೇಂದ್ರ ಸರ್ಕಾರ ಮನರೇಗಾ ಹೆಸರು ಬದಲಾವಣೆ ಮಾಡುವ ಮೂಲಕ ರಾಜಕೀಯ ಮಾಡುತ್ತಿರುವುದು ಖಂಡನೀಯವಾಗಿದೆ.
ನರೇಗಾ ದುರ್ಬಲಗೊಳಿಸುವ ಮೂಲಕ ಮೋದಿ ಸರ್ಕಾರ ದೇಶಾದ್ಯಂತ ಕೋಟ್ಯಂತರ ರೈತರು, ಕಾರ್ಮಿಕರು ಮತ್ತು ಭೂಹೀನರ ಹಿತಾಸಕ್ತಿಗಳ ಮೇಲೆ ದಾಳಿ ಮಾಡಿದೆ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಹಾಗೂ ಬಡವರಿಗೆ ಅನುಕೂಲವಾಗಿದ್ದ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಹೆಸರು ಬದಲಾವಣೆ ಮಾಡಲು ಪ್ರಯತ್ನ ನಡೆಸಿದೆ. ಹೆಸರು ಬದಲಾವಣೆಯಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಹೇಳಿದರು
ನರೇಗಾ ಯೋಜನೆಯು ಗ್ರಾಮೀಣ ಜನರಿಗೆ ಆರ್ಥಿಕ ಶಕ್ತಿಯನ್ನು ನೀಡಿತ್ತು. ಶೋಷಣೆ, ಸಂಕಷ್ಟ ಮತ್ತು ವಲಸೆಯನ್ನು ಕಡಿಮೆಗೊಳಿಸಿತ್ತು. ಮೂಲಸೌಕರ್ಯ ವೃದ್ಧಿಗೂ ನೆರವಾಗಿತ್ತು. ಇದೀಗ ಕೇಂದ್ರ ಸರ್ಕಾರ ಇದನ್ನೆಲ್ಲ ಮುರಿಯಲು ಮುಂದಾಗಿದೆ’ ಎಂದು ದೂರಿದ್ದಾರೆ.
ಕಾರ್ಮಿಕ, ಬಡವರ ವಿರೋಧಿ
ಕೆಲಸಕ್ಕೆ ಮಿತಿ ಹೇರುವ ಮತ್ತು ಕೆಲಸವನ್ನು ನಿರಾಕರಿಸಲು ಹಲವು ಮಾರ್ಗಗಳನ್ನು ಸೃಷ್ಟಿಸುವ ಮೂಲಕ ‘ವಿಬಿ-ಜಿ ರಾಮ್ ಜಿ’ ಮಸೂದೆಯು ಗ್ರಾಮೀಣ ಬಡವರನ್ನು ದುರ್ಬಲಗೊಳಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರಘುರಾಮ ರೆಡ್ಡಿ ಮಾತನಾಡಿ 2005ರಲ್ಲಿ ಜಾರಿಗೆ ಬಂದಿದ್ದ ಈ ಯೋಜನೆಯು ಗ್ರಾಮೀಣ ಭಾಗದ ಜನರಿಗೆ ಮುಖ್ಯವಾಗಿ ಬಡವರು ಮತ್ತು ಸಣ್ಣ ರೈತರಿಗೆ ಉದ್ಯೋಗ, ಉಪ ಜೀವನಕ್ಕೆ ಅನುಕೂಲವಾಗಿತ್ತು. ಬರಗಾಲದಂತಹ ಸಂದರ್ಭದಲ್ಲಿ ಮಧ್ಯಮ ವರ್ಗದ ರೈತರು ಕೂಡ ಯೋಜನೆ ಫಲಾನುಭವಿಗಳಾಗಿ ಅನುಕೂಲ ಪಡೆಯುತ್ತಿದ್ದರು. ಇನ್ನು ಮುಂದೆ ಕೇಂದ್ರ ಸರ್ಕಾರದ ಮುಲಾಜಿಗೊಳಪಡುವ ರಾಜ್ಯಗಳಿಗೆ ಮಾತ್ರ ಯೋಜನೆ ದೊರೆಯುತ್ತದೆ’ ಎಂದರು.
ಕೇಂದ್ರದ ಹೊಸ ಕಾನೂನು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಸಂಪೂರ್ಣವಾಗಿ ಹಾಳುಗಡೆವಲಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹೆಸರನ್ನು ತೆಗೆದು ಹಾಕುವ ಮೂಲಕ, ಅವರ ಆಶಯಗಳನ್ನು ನಿರ್ಣಾಮ ಮಾಡುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ..? ಮಹಿಳಾ ಕಾಲೇಜು, ಕೋಲಾರಮ್ಮ ದೇಗುಲದ ಜಾಗಕ್ಕೆ ಖಾತೆ: ಕೊತ್ತೂರು ಮಂಜುನಾಥ್
ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಮುಖಂಡರಾದ ಚನ್ನರಾಯಪ್ಪ,ದೇವಿಕುಂಟೆ ಶ್ರೀನಿವಾಸ್, ಜಿ.ಕೃಷ್ಣಪ್ಪ,ವಾಲ್ಮೀಕಿ ಅಶ್ವತ್ಥಪ್ಪ,ಬಿಳ್ಳೂರು ನಾಗರಾಜು, ಡಿ.ಟಿ.ಮುನಿಸ್ವಾಮಿ ಮುನಿಯಪ್ಪ,ಸೋಮಶೇಖರ ಹಾಗೂ ಇತರೆ ಮುಖಂಡರು ಹಾಜರಿದ್ದರು.





