ಕೋಲಾರ: ನಗರದ ಮಹಿಳಾ ಸರ್ಕಾರಿ ಕಾಲೇಜು ಹಾಗೂ ಕೋಲಾರಮ್ಮ ದೇವಸ್ಥಾನದ ಮುಂದಿರುವ ಜಾಗಕ್ಕೆ ಖಾತೆ ಮಾಡಿಕೊಡಲಾಗಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ಸೋಮವಾರ ಕೋಲಾರಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ದಾಖಲೆಗಳನ್ನು ಹಸ್ತಾಂತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರಮ್ಮ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದ ದಾಖಲೆಗಳೇ ಇರಲಿಲ್ಲ. ನಗರಸಭೆ ಜಾಗವನ್ನು ಕೋಲಾರಮ್ಮ ದೇವಸ್ಥಾನಕ್ಕೆ ನೀಡಲಾಗಿತ್ತು. ಈಗ ಅದಕ್ಕೆ ಖಾತೆ ಮಾಡಿ ಕೊಡಲಾಗಿದೆ. ದೇಗುಲದ ಮುಂದಿರುವ ಈ ಜಾಗದಲ್ಲಿ ಅನ್ನಸಂತರ್ಪಣೆ, ದೇವರ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮ ಮಾಡಬಹುದಾಗಿದೆ ಎಂದರು.
ಮಹಿಳಾ ಕಾಲೇಜಿಗೆ ಹಲವು ವರ್ಷಗಳ ಇತಿಹಾಸವಿದೆ. ಅಂಥ ಕಾಲೇಜಿನ ಆಸ್ತಿ ಸಂಬಂಧ ದಾಖಲೆಗಳೇ ಇರಲಿಲ್ಲ. ಈಗ ಹೊಸದಾಗಿ 42 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಬೇಕು. ದಾಖಲೆ ಇಲ್ಲದ ಕಾರಣ ನಿರ್ಮಾಣಕ್ಕೆ ತೊಂದರೆ ಆಗಿತ್ತು. ನಗರಸಭೆ ಅಧ್ಯಕ್ಷರಾಗಿದ್ದ ಲಕ್ಷ್ಮಿದೇವಮ್ಮ, ಉಪಾಧ್ಯಕ್ಷರಾಗಿದ್ದ ಸಂಗೀತಾ, ಪೌರಾಯುಕ್ತ, ತಹಶೀಲ್ದಾರ್ ಗಮನಕ್ಕೆ ತಂದು ನಾನು, ಎಂ.ಎಲ್.ಅನಿಲ್ ಕುಮಾರ್ ಹಾಗೂ ಪ್ರಾಂಶುಪಾಲರು ಪ್ರಯತ್ನ ಮಾಡಿ ಕಾಲೇಜಿಗೆ ಇ–ಖಾತೆ ಮಾಡಿಕೊಟ್ಟಿದ್ದೇವೆ ಎಂದು ಹೇಳಿದರು.
ನಮಗೆ ಒಳ್ಳೆಯ ಅಧಿಕಾರಿಗಳೇ ಸಿಕ್ಕಿದ್ದಾರೆ. ಹೀಗಾಗಿ, ಇಂಥ ಒಳ್ಳೆಯ ಕೆಲಸಗಳನ್ನು ಮುಂದುವರಿಸುತ್ತೇವೆ. ದೇಗುಲದ ಎದುರು ನಾವು ಈ ಮಾತು ಹೇಳಿದ್ದು, ಸುಳ್ಳು ಹೇಳುವುದಿಲ್ಲ ಎಂದರು.
ಇದನ್ನು ಓದಿದ್ದೀರಾ..? ಮಾಲೂರಿನ ಯುಕೆನ್ ಇಂಡಿಯಾ ಕಂಪನಿಯಿಂದ ಕಾರ್ಮಿಕರಿಗೆ ಕಿರುಕುಳ
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ತಹಶಿಲ್ದಾರ್ ನಯನ, ಕಂದಾಯ ನೀರಿಕ್ಷಕ ರಾಜೇಂದ್ರ ಪ್ರಸಾದ್, ನಗರಸಭೆ ಮಾಜಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಮಾಜಿ ಉಪಾಧ್ಯಕ್ಷೆ ಸಂಗೀತಾ, ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಶ್ರೀನಿವಾಸಗೌಡ, ನಗರಸಭೆ ಪೌರಾಯುಕ್ತ ನವೀನ್ ಚಂದ್ರ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ,ನಗರ ಅಧ್ಯಕ್ಷ ಅಫ್ಸರ್, ಕಾಂಗ್ರೆಸ್ ಎಸ್ಟಿ ಘಟಕದ ಜಿಲ್ಲಾ ಅಧ್ಯಕ್ಷ ಎನ್.ಅಂಬರೀಷ್, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ ವೀರೇಂದ್ರ ಪಾಟೀಲ್ ಯಲವಾರ ರಾಜಕುಮಾರ್, ಕುರಿಗಳ ರಮೇಶ್ ಮುಂತಾದವರು ಇದ್ದರು.





