ಚಿಂತಾಮಣಿ:ನಗರದ ಹೊರಭಾಗದಲ್ಲಿ ಸುಮಾರು 500-600 ಎಕರೆ ಪ್ರದೇಶದಲ್ಲಿ ಚಿಂತಾಮಣಿಯ ಉಪನಗರವನ್ನು ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ನಗರದ ನೆಕ್ಕುಂದಿ ಪೇಟೆ ಅಗ್ರಹಾರದ ಬಳಿಯ ಪಟಾಲಮ್ಮ ದೇವಾಲಯದ ಬಳಿಯ ವೃತ್ತದಲ್ಲಿ ನಗರಸಭೆ ನಿಧಿಯಿಂದ ಸ್ಥಾಪಿಸಿರುವ ಶುದ್ದ ಕುಡಿಯುವ ನೀರಿನ ಘಟಕ ಮತ್ತು ಹೈ ಮಾಸ್ಟ್ ದೀಪವನ್ನು ಉದ್ಘಾಟಿಸಿ ಮಾತನಾಡಿದರು.
ನಗರದ ನೆಕ್ಕುಂದಿ ಕೆರೆಯ ಅಭಿವೃದ್ಧಿಗೆ 74 ಕೋಟಿ ರೂ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಲಾಗುವುದು. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಚಿಂತಾಮಣಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಜನರ ಬೇಡಿಕೆ ಮತ್ತು ನಿರೀಕ್ಷೆಗಳು ಹೆಚ್ಚಾಗಿವೆ. ಹೀಗಾಗಿ ಎಲ್ಲರಿಗೂ ವಸತಿ ಮತ್ತಿತರ ಸೌಲಭ್ಯಗಳನ್ನು ಒದಗಿಸುವುದು ಕಷ್ಟವಾಗಿದೆ. ಹಾಗಾಗಿ ಉಪನಗರ ನಿರ್ಮಾಣದ ಯೋಜನೆ ರೂಪಿಸಲಾಗುತ್ತಿದೆ ಎಂದರು.
ನೆಕ್ಕುಂದಿ ಕೆರೆಯ ಸುತ್ತಮುತ್ತಲಿನ ಪ್ರದೇಶ, ಮುಂತಕದಿರೇನಹಳ್ಳಿ, ನಾಯನಹಳ್ಳಿ, ಧನಮಿಟ್ಟೇನಹಳ್ಳಿ ಪ್ರದೇಶಗಳಲ್ಲಿ ಈಗಾಗಲೇ ಅಧಿಕಾರಿಗಳು ಸರ್ವೆ ನಡೆಸುತ್ತಿದ್ದಾರೆ. ಸುಮಾರು 400-500 ಎಕರೆ ಪ್ರದೇಶ ಲಭ್ಯವಾಗುತ್ತದೆ. ಮದ್ಯದಲ್ಲಿ ಬರುವ ರೈತರ ಜಮೀನುಗಳಿಗೆ ಹೆಚ್ಚಿನ ಪರಿಹಾರವನ್ನು ಕೊಡಿಸಲಾಗುವುದು, ಸುಮಾರು 10 ಸಾವಿರ ನಿವೇಶನಗಳು ದೊರೆಯುವ ಅಂದಾಜಿದೆ. ಆಧುನಿಕ ಕಾಲಕ್ಕೆ ತಕ್ಕಂತೆ ಎಲ್ಲ ಸೌಲಭ್ಯಗಳುಳ್ಳ ಉಪನಗರವನ್ನು ನಿರ್ಮಾಣ ಮಾಡುವುದಾಗಿ ಹೇಳಿದರು.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಚಿಂತಾಮಣಿಯಲ್ಲಿ ಒಳಚರಂಡಿ ಯೋಜನೆಯನ್ನು ಅಂದಿನ ಶಾಸಕ ಚೌಡರೆಡ್ಡಿ ಮಂಜೂರು ಮಾಡಿಸಿದ್ದರು. ನಗರದ ಹೊಸ ಬಡಾವಣೆಗಳಲ್ಲಿ ಹಾಗೂ ಹಾಳಾಗಿರುವ ಕೆಲವು ಪ್ರದೇಶಗಳ ಹಳೆಯ ಒಳಚರಂಡಿ ವ್ಯವಸ್ಥೆಯನ್ನು ಬದಲಿಸಲು 52 ಕೋಟಿ ರೂ ಮಂಜೂರಾಗಿದ್ದು ಕಾಮಗಾರಿ ಚಾಲನೆಯಲ್ಲಿದೆ. ನಗರೋತ್ಥಾನ ಯೋಜನೆಯಲ್ಲಿ ರಸ್ತೆಗಳ ಕಾಮಗಾರಿ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದರು.
ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ 5 ಕೋಟಿ ರೂ ವೆಚ್ಚದಲ್ಲಿ ಸಿಮೆಂಟ್ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ 10-15 ಕೋಟಿ ಅವಶ್ಯಕತೆ ಇದ್ದು, ಪ್ರಸ್ತಾವನೆ ಸಲ್ಲಿಸಲಾಗಿದೆ. ಚೊಕ್ಕರೆಡ್ಡಿಹಳ್ಳಿ ಸಮೀಪ 10 ಮಕೋಟಿ ರೂ ವೆಚ್ಚದಲ್ಲಿ ಎಸ್.ಸಿ.ಪಿ ಟ್ರೀಟ್ ಮೆಂಟ್ ಪ್ಲಾಂಟ್ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ರಸ್ತೆಯ ಎಂಜನಿಯರಿಂಗ್ ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ಒಕ್ಕಲಿಗ ಸಂಘ, ಬಲಿಜಿಗ ಸಂಘ, ಯಾದವ ಸಂಘ, ವಿಶ್ವಕರ್ಮ ಸಂಘ, ಕನ್ನಡ ಸಂಘ , ಮುಸ್ಲಿಂ ಸಮುದಾಯ ಸೇರಿದಂತೆ ವಿವಿಧ ಜನಾಂಗ ಮತ್ತು ಸಂಸ್ಥೆಗಳ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ಸ್ಥಳವನ್ನು ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ..? ಮಾಲೂರಿನ ಯುಕೆನ್ ಇಂಡಿಯಾ ಕಂಪನಿಯಿಂದ ಕಾರ್ಮಿಕರಿಗೆ ಕಿರುಕುಳ
ಈ ಸಂದರ್ಭದಲ್ಲಿ ನಗರ ಸಭೆ ಪೌರಾಯುಕ್ತ ಜಿ ಎನ್ ಚಲಪತಿ , ಮುಖಂಡರಾದ ಶೇಕ್ ಸಾಧಿಕ್ ರಜ್ವಿ , ಇಂತಿಯಾಜ್ ಪಾಷಾ , ಅಮುನ್ , ಮಾಲಿಕ್ ಪಾಷಾ, ನಗರಸಭೆಯ ಮಾಜಿ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಅಮರ್ , ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.





