ಶ್ರೀನಿವಾಸಪುರ: ರೈತರು ವಂಶಪಾರಂಪರ್ಯವಾಗಿ ನಂಬಿಕೊಂಡು ಬಂದಿರುವ ಕೃಷಿ ಭೂಮಿಯಲ್ಲಿ ಅರಣ್ಯ ಇಲಾಖೆಯು ದೌರ್ಜನ್ಯ ಎಸಗುತ್ತಿದ್ದು, ಗುರುವಾರದೊಳಗೆ ಈಗಾಗಲೇ ಹಾಕಿರುವ ಸಿಮೆಂಟ್ ಪಿಲ್ಲರ್ಗಳನ್ನು ತೆರವುಗೊಳಿಸದಿದ್ದರೆ ರೈತರೇ ಸ್ವಇಚ್ಛೆಯಿಂದ ಅವುಗಳನ್ನು ಕಿತ್ತೆಸೆಯಲಿದ್ದಾರೆ ಎಂದು ಕೆಪಿಆರ್ಎಸ್ ರಾಜ್ಯ ಉಪಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ ಎಚ್ಚರಿಸಿದರು.
ಭೂಸಂತ್ರಸ್ತ ಹೋರಾಟ ಸಮಿತಿ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಿಂದ ವಲಯ ಅರಣ್ಯ ಅಧಿಕಾರಿಗಳ ಕಚೇರಿಯವರೆಗೆ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಬೆಳೆ ನಾಶಕ್ಕೆ ಆಕ್ರೋಶ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ, “ಅರಣ್ಯ ಇಲಾಖೆಯು ರೈತರ ಜಮೀನುಗಳಿಗೆ ಅತಿಕ್ರಮವಾಗಿ ಪ್ರವೇಶಿಸಿ ಮಾವು, ಟೊಮ್ಯಾಟೋ, ಕೋಸು, ಕ್ಯಾರೆಟ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳನ್ನು ನಾಶಪಡಿಸಿದೆ. ಇದನ್ನು ತಡೆಯಲು ಹೋದ 24 ರೈತರ ಮೇಲೆ ಎಫ್.ಐ.ಆರ್ ದಾಖಲಿಸಿ, ರಾತೋರಾತ್ರಿ ಬಂಧಿಸಿರುವುದು ಅಮಾನವೀಯ. ಇಲಾಖೆಯ ಈ ಕ್ರಮವು ಭೂ ಸುಧಾರಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ,” ಎಂದು ಕಿಡಿಕಾರಿದರು.
ರೈತರ ಬೆನ್ನೆಲುಬು ಮುರಿಯದಿರಿ ಕೋಮುಲ್ ಅಡ್ಡಗಲ್ ಕ್ಷೇತ್ರದ ನಿರ್ದೇಶಕ ಕೆ.ಕೆ. ಮಂಜುನಾಥ್ ಮಾತನಾಡಿ, ದೇಶದ ಬೆನ್ನೆಲುಬಾದ ರೈತರಿಗೆ ತೊಂದರೆ ಕೊಟ್ಟರೆ ದೇಶ ಉದ್ದಾರವಾಗಲು ಸಾಧ್ಯವಿಲ್ಲ. ಅಧಿಕಾರಿಗಳು ಕೂಡಲೇ ಇಂತಹ ದೌರ್ಜನ್ಯ ನಿಲ್ಲಿಸಬೇಕು ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ಕುಮಾರ್ ಮಾತನಾಡಿ, ಸರ್ಕಾರಗಳು ಕಾರ್ಪೊರೇಟ್ ಕೃಷಿಗೆ ಮಣೆ ಹಾಕುತ್ತಾ ಅನ್ನದಾತರನ್ನು ಬೀದಿಪಾಲು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ಭರವಸೆಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಸಿಎಫ್ ಗಿರೀಶ್ ಮಾತನಾಡಿ, “ಇನ್ನು ಮುಂದೆ ಯಾವುದೇ ಕಾರಣಕ್ಕೂ ರೈತರ ಭೂಮಿಯನ್ನು ವಶಕ್ಕೆ ಪಡೆಯುವುದಿಲ್ಲ. ಇಲಾಖೆಗೆ ಸಂಬಂಧಿಸಿದ ಭೂ ದಾಖಲೆಗಳನ್ನು ಎಸ್ಐಟಿ (SIT) ಸಮಿತಿಗೆ ವರದಿ ಸಲ್ಲಿಸಲಾಗುವುದು,” ಎಂದು ಮಾಹಿತಿ ನೀಡಿದರು. ಪೊಲೀಸರ ಮಧ್ಯಸ್ಥಿಕೆಯಲ್ಲಿ ನಡೆದ ಅಧಿಕಾರಿಗಳು ಮತ್ತು ರೈತರ ನಡುವಿನ ಚರ್ಚೆಯ ನಂತರ ಪ್ರತಿಭಟನಾಕಾರರು ಶಾಂತರಾದರು.
ಇದಕ್ಕೂ ಮುನ್ನ ಪ್ರತಿಭಟನಾಕಾರರು ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಇದನ್ನು ಓದಿದ್ದೀರಾ…? ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ
ಪ್ರತಿಭಟನೆಯಲ್ಲಿ ಕೆಪಿಆರ್ಎಸ್ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಯಶ್ವಂತ್, ಜಿಲ್ಲಾಧ್ಯಕ್ಷ ಟಿ.ಎಂ. ವೆಂಕಟೇಶ್, ಮುಖಂಡರಾದ ಬಂದರ್ಲಹಳ್ಳಿ ಮುನಿಯಪ್ಪ, ಅಂಬೇಡ್ಕರ್ಪಾಳ್ಯ ನರಸಿಂಹಮೂರ್ತಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು. ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ. ಗೊರವನಕೊಳ್ಳ ಹಾಗೂ ಪಿಎಸ್ಐ ಜಯರಾಮ್ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.
ಅರಣ್ಯ ಇಲಾಖೆ ವಿರುದ್ಧ ರೈತರ ಬೃಹತ್ ಪ್ರತಿಭಟನೆ
Date:
ಪೋಸ್ಟ್ ಹಂಚಿಕೊಳ್ಳಿ:




