ಶ್ರೀನಿವಾಸಪುರ: ಪಟ್ಟಣದ ಎಂ.ಜಿ. ರಸ್ತೆಯಲ್ಲಿ ನಡೆಯುತ್ತಿರುವ ಅವರೆಕಾಯಿ ವ್ಯಾಪಾರ ವಹಿವಾಟನ್ನು ಎಪಿಎಂಸಿ ಮಾರುಕಟ್ಟೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿ ಕನ್ನಡಪರ ಹಾಗೂ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಈಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಇಂದು ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್, ವ್ಯಾಪಾರಿಗಳ ಪರವಾಗಿ ನಿಂತು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನಾಕಾರರಿಗೆ ರಮೇಶ್ ಕುಮಾರ್ ಟಾಂಗ್ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ ರಮೇಶ್ ಕುಮಾರ್, ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು ಎಂದು ವ್ಯಂಗ್ಯವಾಗಿಯೇ ಪ್ರತಿಕ್ರಿಯಿಸಿದರು. “ಪ್ರಜಾಪ್ರಭುತ್ವದಲ್ಲಿ ಎಲ್ಲ ಸಂಘಗಳೂ ಇರುತ್ತವೆ, ಅವರು ಪ್ರತಿಭಟನೆ ಮಾಡಲಿ, ಫೋಟೋ ತೆಗೆಸಿಕೊಳ್ಳಲಿ, ಟಿವಿಗೆ ಕೊಡಲಿ ಅಥವಾ ಟೆಂಟ್ ಹಾಕಿಕೊಂಡು ಉಪವಾಸ ಕೂರಲಿ, ನಂದೇನು ಆಕ್ಷೇಪವಿಲ್ಲ. ಆದರೆ, ಕಾನೂನು ಸುವ್ಯವಸ್ಥೆ ಕಾಪಾಡುವುದು ನಿಮ್ಮ ಜವಾಬ್ದಾರಿ. ವ್ಯಾಪಾರಕ್ಕೆ ಅಡ್ಡಿಪಡಿಸಿ ಕಾನೂನು ಕೈಗೆತ್ತಿಕೊಂಡರೆ ಸಹಿಸಲು ಸಾಧ್ಯವಿಲ್ಲ,” ಎಂದು ಪೊಲೀಸರಿಗೆ ಸೂಚಿಸಿದರು.
ಇದನ್ನು ಓದಿದ್ದೀರಾ..? ಕೋಲಾರದ ಎಪಿಎಂಸಿ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಕಟ್ಟೆ: 100 ಎಕರೆ ಜಾಗ ನೀಡುವುದೇ ಸರ್ಕಾರ?
ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ತಹಶೀಲ್ದಾರ್ ಸುಧೀಂದ್ರ ಅವರೊಂದಿಗೆ ಮಾತನಾಡಿದ ರಮೇಶ್ ಕುಮಾರ್, ಮುನ್ಸಿಪಲ್ ಅಧಿಕಾರಿಗಳ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಯಾರ ಪ್ರಭಾವಕ್ಕೆ ಒಳಗಾಗಿ ಮುನ್ಸಿಪಲ್ ಅಧಿಕಾರಿಗಳು ವ್ಯಾಪಾರಿಗಳ ಮೂಟೆಗಳನ್ನು ಹಾಗೂ ತೂಕದ ಯಂತ್ರಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ನಾನು ಬಹಳ ಸಂಯಮದಿಂದ ಮಾತನಾಡುತ್ತಿದ್ದೇನೆ, ಅಧಿಕಾರಿಗಳು ಜಾಗರೂಕರಾಗಿರಲಿ. ಇಲ್ಲದಿದ್ದರೆ ಒಬ್ಬೊಬ್ಬರನ್ನೇ ಎಳೆದು ಹೊರಹಾಕಬೇಕಾಗುತ್ತದೆ,” ಎಂದು ಎಚ್ಚರಿಸಿದರು.ವ್ಯಾಪಾರಿಗಳ ರಕ್ಷಣೆಗೆ ಪಣ “ಈ ಅವರೆಕಾಯಿ ಸೀಸನ್ ಇರುವುದೇ ಒಂದು ಒಂದೂವರೆ ತಿಂಗಳು. ರೈತರು ಇಲ್ಲಿ ಬೆಳೆ ತಂದು ಮಾರುತ್ತಾರೆ, ವ್ಯಾಪಾರಿಗಳು ನಾಲ್ಕು ಕಾಸು ಸಂಪಾದಿಸಿ ಜೀವನ ಮಾಡುತ್ತಾರೆ. ನಾನು ಜೀವಂತವಾಗಿರುವವರೆಗೂ ಇಲ್ಲಿನ ವ್ಯಾಪಾರಿಗಳಿಗೆ ತೊಂದರೆಯಾಗಲು ಬಿಡುವುದಿಲ್ಲ. ಯಾರಾದರೂ ಬಂದು ಮೂಟೆ ಮುಟ್ಟಿದರೆ ಅಥವಾ ವ್ಯಾಪಾರಕ್ಕೆ ತೊಂದರೆ ಕೊಟ್ಟರೆ ಅವರಿಗೆ ‘ಗ್ರಾಚಾರ’ ಕಾದಿದೆ ಎಂದು ತಿಳಿದುಕೊಳ್ಳಲಿ,” ಎಂದು ಗುಡುಗಿದರು.
ಅವರೆಕಾಯಿ ವ್ಯಾಪಾರ ಸ್ಥಳಾಂತರ ವಿವಾದ; ವ್ಯಾಪಾರಿಗಳ ಪರ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬ್ಯಾಟಿಂಗ್
Date:
ಪೋಸ್ಟ್ ಹಂಚಿಕೊಳ್ಳಿ:




