ಕೋಲಾರ: ರಾಜ್ಯ ಒಕ್ಕಲಿಗರ ಸಂಘದಲ್ಲಿ ಸುಮಾರು ₹ 738 ಕೋಟಿ ಹಣವಿದ್ದು, ಸಮುದಾಯದ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರಲ್ಲಿ ವೈದ್ಯಕೀಯ ಕಾಲೇಜು ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಹೆಸರಲ್ಲಿ ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ತುಮಕೂರಿನ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಂಜಾವಧೂತ ಸ್ವಾಮೀಜಿ ರಾಜ್ಯ ಒಕ್ಕಲಿಗರ ಸಂಘಕ್ಕೆ ಸಲಹೆ ನೀಡಿದರು.
ನಗರ ಹೊರವಲಯದ ನಂದಿನಿ ಪ್ಯಾಲೇಸ್ ನಲ್ಲಿ ರಾಜ್ಯ ಒಕ್ಕಲಿಗರ ಸಂಘದ (ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರ) ಆಶ್ರಯದಲ್ಲಿ ನಡೆದ ಬಾಲಕಿಯರ ಹಾಸ್ಟೆಲ್ ಶಂಕುಸ್ಥಾಪನಾ ಸಮಾರಂಭ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮುದಾಯದ ಸಾಧಕರಿಗೆ ಸನ್ಮಾನ, ನೂತನ ಸದಸ್ಯರಿಗೆ ಗುರುತಿನ ಚೀಟಿ ವಿತರಿಸುವ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.
ಹಲವರು ಸಂಘಕ್ಕಾಗಿ ಜೀವ ಒತ್ತೆ ಇಟ್ಟು ದುಡಿಯುತ್ತಿದ್ದಾರೆ. ಆದರೆ ಪ್ರಗತಿ ತೋರಬೇಕು. ಕೇವಲ ಪುರಸ್ಕಾರ, ಸನ್ಮಾನ ಕ್ಕೆ ಸೀಮಿತವಾಗಬಾರದು. ಒಕ್ಕಲಿಗರ ಸಂಘ ಸಮುದಾಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ನೆರವಿಗೆ ನಿಲ್ಲಬೇಕು. ಬಡ ವೈದ್ಯಕೀಯ ವಿದ್ಯಾರ್ಥಿಗಳಿಗೆ ₹ 5 ಲಕ್ಷದಿಂದ ₹10 ಲಕ್ಷ ರಿಯಾಯಿತಿ ಕೊಡಬೇಕು. ಎಸ್.ಎಂ.ಕೃಷ್ ಹೆಸರಲ್ಲಿ ಎಂಜಿನಿಯರಿಂಗ್ ಕಾಲೇಜು ಮಾಡಿ, ದೇವೇಗೌಡರ ಹೆಸರಲ್ಲಿ ವೈದ್ಯಕೀಯ ಕಾಲೇಜು ತೆರೆಯಿರಿ ಎಂಬುದಾಗಿ ಬಹಳ ಹಿಂದೆಯೇ ಹೇಳಿದ್ದೆ. ಬೆಂಗಳೂರಿಗೆ ಇವರ ಕೊಡುಗೆ ಬಹಳಷ್ಟಿದೆ. ಆದರೆ ಆ ಕೆಲಸ ಆಗಿಲ್ಲ. ಇದು ದುರ್ದೈವ ಎಂದು ಬೇಸರ ವ್ಯಕಪಡಿಸಿದರು
ಒಕ್ಕಲಿಗರ ಸಂಘಕ್ಕೆ ಆಡಳಿತಾಧಿಕಾರಿ ಹಾಕುವುದನ್ನು ಸಮುದಾಯವು ಅವಮಾನ ಎಂದು ಭಾವಿಸುತ್ತದೆ. ಆ ರೀತಿ ಆಗಬಾರದು. ಮೇಲಾಟ ನಡೆಯಬಾರದು. ಹಿಂದೆ ಕಾರ್ಯಕಾರಿ ಸಮಿತಿ ನಡೆಯುವಾಗ ಹೊರಗಡೆ ಪೊಲೀಸರನ್ನು ಇಟ್ಟುಕೊಂಡು ನಡೆಸಬೇಕಾದ ಪರಿಸ್ಥಿತಿ ಇತ್ತು. ಅಂಥ ವಾತಾವರಣ ನಿರ್ಮಿಸಬೇಡಿ. ರಾಜ್ಯ ಸಂಘದಲ್ಲಿ ಗುಂಪುಗಾರಿಕೆ ಕಡಿಮೆ ಆಗಬೇಕು ಎಂದು ಸಲಹೆ ನೀಡಿದರು.
₹ 10 ಕೋಟಿ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಮಾಡುತ್ತಿರುವುದು ಸಂತಸದ ವಿಚಾರ. ಸಂಘದಿಂದ ಕೈಗೊಳ್ಳುವ ಕಾಮಗಾರಿಗಳನ್ನು ಟೆಂಡರ್ ಕರೆದು ಸಮುದಾಯದ ಅರ್ಹರಿಗೆ ಕೊಡಿ. ಮಾದರಿ ಸಂಘವಾಗಿ ಕಟ್ಟಬೇಕು ಎಂದರು.
ಜಾತಿವಾರು ಸಮೀಕ್ಷೆಯಲ್ಲಿ ಸಮುದಾಯಕ್ಕೆ ತೊಂದರೆ ಆದರೆ, ಏನಾದರೂ ಹೆಚ್ಚು ಕಮ್ಮಿಯಾದರೆ ಸುಮ್ಮನೇ ಕೂರಲ್ಲ. ಏಕಿಷ್ಟು ಆತುರ? ವಿವೇಚನ ಮಾಡಿ ವರದಿ ಕೊಡಬೇಕು. ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು. ಕೋಲಾರದಲ್ಲಿ ನಿರ್ಮಿಸುತ್ತಿರುವ ವಾಣಿಜ್ಯ ಸಂಕೀರ್ಣಕ್ಕೆ ರಾಜ್ಯ ಸಂಘದ ಸಭೆಯಲ್ಲಿ ಚರ್ಚೆಸಿ ೫೦ ಲಕ್ಷ ಕೊಡಿ ಎಂದು ಸ್ವಾಮೀಜಿ ತಿಳಿಸಿದರು.
ಜಾನಪದ ಗಾಯಕ ಗೋ.ನಾ.ಸ್ವಾಮಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.ಕಾರ್ಯಕ್ರಮಕ್ಕೂ ಮುನ್ನ ಸಿ.ಬೈರೇಗೌಡ ನಗರದಲ್ಲಿ ನಡೆದ ಹಾಸ್ಟೆಲ್ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಾಸಕ ಕೆ.ವೈ.ನಂಜೇಗೌಡ, ಎಂಎಲ್ಸಿ ಅನಿಲ್ ಕುಮಾರ್ ಭಾಗವಹಿಸಿದ್ದರು.
ಇದನ್ನು ಓದಿದ್ದೀರಾ..? ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಖಾಜಿಕಲ್ಲಹಳ್ಳಿ ಮುನಿರಾಜು ಆಯ್ಕೆ
ವೇದಿಕೆಯಲ್ಲಿ ವಿಶ್ವ ಮಾನವ ಮಹಾಸಂಸ್ಥಾನದ ಡಾ.ನಿಶ್ಚಲಾನಂದನಾಥಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ, ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ, ಗೌರವಾಧ್ಯಕ್ಷ ಯಲುವಳ್ಳಿ ರಮೇಶ್, ನಿರ್ದೇಶಕ ಡಾ.ಡಿ.ಕೆ.ರಮೇಶ್, ಧರ್ಮೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ಮುಖಂಡರಾದ ವಿ.ಕೃಷ್ಣಾರೆಡ್ಡಿ, ಡೆಕ್ಕನ್ ರಾಮಕೃಷ್ಣ, ಬಿಸಪ್ಪಗೌಡ, ಅ.ಮು.ಲಕ್ಷ್ಮಿನಾರಾಯಣ, ಸಿಎಂಆರ್ ಶ್ರೀನಾಥ್, ಲಕ್ಷ್ಮಣ್ ಗೌಡ, ಸೀತಿಹೊಸೂರು ಮುರಳಿಗೌಡ, ಪ್ರಭಾಕರ್, ಪವನ್ ನಾರಾಯಣಸ್ವಾಮಿ, ಮಾಗೇರಿ ನಾರಾಯಣಸ್ವಾಮಿ, ನಗರಸಭೆ ಸದಸ್ಯರಾದ ಮುರಳಿಗೌಡ, ಪ್ರವೀಣಗೌಡ ಇದ್ದರು





