ಶಿಡ್ಲಘಟ್ಟ: ಶಿಡ್ಲಘಟ್ಟ ನಗರದಲ್ಲಿ ಚಲನಚಿತ್ರವೊಂದರ ಪ್ರಚಾರಕ್ಕಾಗಿ ಕಟ್ಟಿದ್ದ ಪ್ಲೆಕ್ಸ್ ಗಳನ್ನು ತೆರವುಗೊಳಿಸಿರುವ ವಿಚಾರಕ್ಕಾಗಿ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಅವರು ನಗರಸಭೆಯ ಆಯುಕ್ತೆ ಅಮೃತಾ ಗೌಡ ಅವರಿಗೆ ದೂರವಾಣಿಯ ಮೂಲಕ ಅಶ್ಲೀಲವಾಗಿ ನಿಂದನೆ ಮಾಡಿ ಬೆದರಿಕೆ ಹಾಕಿರುವ ಘಟನೆಯ ಹಿನ್ನೆಲೆಯಲ್ಲಿ ನಗರಸಭೆಯ ಪೌರಕಾರ್ಮಿಕರೂ ಸೇರಿದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸದೆ ಪ್ರತಿಭಟನೆ ನಡೆಸಿದರು.
ಶಿಡ್ಲಘಟ್ಟ ನಗರದಲ್ಲಿ ಟಿ.ಬಿ.ರಸ್ತೆಯಲ್ಲಿ ಕಲ್ಟ್ ಸುನಿಮಾ ಕುರಿತು ಶುಭಾಶಯ ಕೋರಲು ಕಟ್ಟಿದ್ದ ಬ್ಯಾನರ್ ತೆರವುಗೊಳಿಸಲಾಗಿದೆ ಎನ್ನುವ ಕಾರಣಕ್ಕೆ, ನಗರಸಭೆ ಆಯುಕ್ತೆ ಅಮೃತಾಗೌಡ ಅವರಿಗೆ ಕರೆ ಮಾಡಿರುವ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ರಾಜೀವ್ ಗೌಡ ಅವರು ಆಯುಕ್ತೆಯೊಂದಿಗೆ ಅಶ್ಲೀಲ ಶಬ್ದಗಳು ಬಳಕೆ ಮಾಡಿ ಮಾತನಾಡಿರುವುದರ ಜೊತೆಗೆ ಪ್ರತಿಯೊಂದು ವಾರ್ಡಿನಿಂದ ಜನರನ್ನು ರೊಚ್ಚಿಗೆಬ್ಬಿಸಿ ಕಳುಹಿಸಿ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ಬೆಂಕಿ ಹಚ್ಚಿಸುತ್ತೇನೆ. ಎಂದೆಲ್ಲಾ ಮಾತನಾಡಿರುವುದು ಮೊಬೈಲ್ ನಲ್ಲಿ ರೆಕಾರ್ಡ್ ಆಗಿದ್ದು ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದರ ಜೊತೆಗೆ ಬೆದರಿಕೆ ಹಾಕಿದ್ದಾರೆ ಎಂದು ನಗರಸಭೆಯ ಅಧಿಕಾರಿಗಳು ಪೌರಕಾರ್ಮಿಕರೆಲ್ಲರೂ ಕೆಲಸ ಬಿಟ್ಟು ನಗರಸಭೆಯ ಮುಂದೆ ಪ್ರತಿಭಟಿಸಿದರು.
ಶಾಸಕ ಬಿ.ಎನ್.ರವಿಕುಮಾರ್ ವಿರುದ್ಧವೂ ಅಶ್ಲೀಲ ಪದ ಬಳಕೆ: ಶಿಡ್ಲಘಟ್ಟದ ಶಾಸಕ ಬಿ.ಎನ್.ರವಿಕುಮಾರ್ ಅವರ ಬಗ್ಗೆಯೂ ಅಶ್ಲೀಲ ಪದಗಳಿಂದ ನಿಂದಿಸಿರುವ ರಾಜೀವ್ ಗೌಡ ಅವರು ಶಾಸಕ ಬಿ.ಎನ್.ರವಿಕುಮಾರ್ ಅವರ ಅಣತಿಯಂತೆ ಕೆಲಸ ಮಾಡುತ್ತಿದ್ದೀರಿ ಎಂದು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ.
ಈ ಕುರಿತು, ನಗರಸಭೆ ಆಯುಕ್ತೆ ಅಮೃತಾಗೌಡ ಅವರು ನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಪಟ್ಟಣದಲ್ಲಿ ಕಟ್ಟಿದ್ದ ಬ್ಯಾನರ್ ನಿಂದಾಗಿ ಸಾರ್ವಜನಿಕರಿಗೆ ಅಪಾಯವಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಬ್ಯಾನರ್ ಬಿಚ್ಚಿ ಕಚೇರಿಯ ಬಳಿಯಲ್ಲಿ ಇದ್ದೇವೆ. ರಾಜೀವ್ ಗೌಡ ಅವರು ಕರೆ ಮಾಡಿದಾಗಲೂ ಸಮಾಧಾನದಿಂದಲೇ ಉತ್ತರಿಸುತ್ತಿದ್ದೆ ಆದರೆ ಅವರು ಅವ್ಯಾಚವಾಗಿ ಅಶ್ಲೀಲವಾಗಿ ಮಾತನಾಡುವಾಗಲೂ ಹಾಗೆಲ್ಲಾ ಮಾತನಾಡಬೇಡಿ ಸರ್ ಅಧಿಕೃತವಾಗಿ ಅನುಮತಿ ಪಡೆದುಕೊಂಡಿಲ್ಲ ಎಂದು ಹೇಳುತ್ತಿದ್ದರೂ ಅವರು ಕೇಳಿಸಿಕೊಳ್ಳಲಿಲ್ಲ. ನಾನು ಗೊಂದಲದಲ್ಲೆ ಇದ್ದೆ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ಬೆಂಕಿ ಹಚ್ಚಿಸುತ್ತೇನೆ ಎಂದೆಲ್ಲಾ ಬೆದರಿಕೆ ಹಾಕಿದರು. ಆದ್ದರಿಂದ ಪೌರಕಾರ್ಮಿಕರು ಸಿಬ್ಬಂದಿಯೆಲ್ಲರೂ ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆಯುಕ್ತೆ ಅಮೃತಾಗೌಡ ಹೇಳಿದರು.
ಸಾರ್ವಜನಿಕರ ಆಕ್ರೋಶ: 2023 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ವಿರುದ್ಧವಾಗಿ ಪರಾಜಿತರಾಗಿರುವ ರಾಜೀವ್ ಗೌಡ ಅವರು, ಹತಾಶರಾಗಿದ್ದಾರೆ. ಒಬ್ಬ ಮಹಿಳಾ ಅಧಿಕಾರಿಯೊಂದಿಗೆ ಹೇಗೆ ಮಾತನಾಡಬೇಕು ಎನ್ನುವ ಸಭ್ಯತೆಯಿಲ್ಲದ ವ್ಯಕ್ತಿ ಶಿಡ್ಲಘಟ್ಟಕ್ಕೆ ಬರಬಾರದು. ಅವರು ಬೆಂಗಳೂರಿನಿಂದ ಶಿಡ್ಲಘಟ್ಟಕ್ಕೆ ಬಂದು, ಈಗ ನಮ್ಮ ಶಿಡ್ಲಘಟ್ಟದ ಗೌರವ ಕಳೆಯುವಂತಹ ಕೆಲಸ ಮಾಡಿದ್ದಾರೆ. ಶಿಡ್ಲಘಟ್ಟದ ರಾಜಕೀಯ ಇತಿಹಾಸದಲ್ಲಿ ಯಾವೊಬ್ಬ ರಾಜಕಾರಣಿಯೂ ಇಷ್ಟು ಕೀಳು ಮಟ್ಟದ ರಾಜಕಾರಣ ಮಾಡಲಿಲ್ಲ. ಇವರು ಎಲ್ಲಿಂದಲೂ ಬಂದು ಇಲ್ಲಿನ ಜನರ ಸ್ವಾಭಿಮಾನಕ್ಕೆ ದಕ್ಕೆಯುಂಟು ಮಾಡಿದ್ದಾರೆ ಎಂದು ಸ್ಥಳೀಯ ಸಾರ್ವಜನಿಕರು, ಅವರ ಭಾವಚಿತ್ರಕ್ಕೆ ಮಸಿ ಬಳಿ ಪ್ರತಿಭಟನಾ ಮೆರವಣಿಗೆ ಮಾಡಿದರು.
ಇದನ್ನು ಓದಿದ್ದೀರಾ..? ಭೋವಿ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಬೇಕು: ಸಂಸದ ಎಂ.ಮಲ್ಲೇಶ್ ಬಾಬು
ಬಿಜೆಪಿ ಮುಖಂಡರಿಂದ ದೂರು: ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿರುವ ಕಾಂಗ್ರೆಸ್ ಮುಖಂಡನನ್ನು ಕೂಡಲೇ ಬಂಧಿಸಬೇಕು. ಸರಕಾರದ ರಕ್ಷಣೆಯಿದೆ ಎನ್ನುವ ಕಾರಣಕ್ಕೆ ಈ ರೀತಿಯಾಗಿ ನಡೆದುಕೊಳ್ಳುವುದು ಸರಿಯಲ್ಲ.ತಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮಾದರಿಯಾಗಬೇಕಾಗಿದ್ದ ಮುಖಂಡ ಜನಪ್ರತಿನಿಧಿಯ ಬಗ್ಗೆಯೂ ಇಂತಹ ಕೀಳು ಭಾಷೆಯನ್ನು ಮಾತನಾಡುವ ಮೂಲಕ ಅಸಂವಿಧಾನಿಕವಾಗಿ ನಡೆದುಕೊಂಡಿದ್ದು, ಅವರನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾಜಿ ಶಾಸಕ ಎಂ.ರಾಜಣ್ಣ ಅವರು ಸೇರಿದಂತೆ ಮುಖಂಡರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.





