ಚಿಂತಾಮಣಿ:ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸರು 8 ಜನ ಶ್ರೀಗಂಧದ ಕಳ್ಳತನದ ಆರೋಪಿಗಳನ್ನು ಬಂಧಿಸಿ,ಅವರಿಂದ 3.20 ಲಕ್ಷ ರೂ ಬೆಲೆ ಬಾಳುವ 32 ಕೆ.ಜಿಶ್ರೀಗಂಧದ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಲಗುಟ್ಟಹಳ್ಳಿ ಗ್ರಾಮದ ಸರ್ವೆ ನಂ 47 ರಲ್ಲಿರುವ ಶ್ರೀಗಂಧದ ಮರಗಳ ತೋಟದಲ್ಲಿ ಕಳ್ಳರು ಸುಮಾರು 1.5 ಲಕ್ಷ ರೂ ಬೆಲೆ ಬಾಳುವ 6 ಶ್ರೀಗಂಧದ ಮರಗಳನ್ನು ಕಟಾವು ಮಾಡಿ ಮರದ ಬುಡಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಜುಲೈ 22 ರಂದು ಮಾಲೀಕ ಖಲೀಲ್ ಬೇಗ್ ದೂರು ನೀಡಿದ್ದರು.
ಬೊಮ್ಮೆಪಲ್ಲಿ ಗ್ರಾಮದ ಸರ್ವೆ ನಂ 30/19 ರಲ್ಲಿರುವ ಶ್ರೀಗಂಧದ ಮರಗಳ ತೋಟದಲ್ಲಿ ಕಳ್ಳರು ಸುಮಾರು ಒಂದು ಲಕ್ಷ ರೂ ಬೆಲೆ ಬಾಳುವ 5 ಶ್ರೀಗಂಧದ ಮರಗಳನ್ನು ಕಟಾವು ಮಾಡಿ ಮರದ ಬುಡಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಮಾಲೀಕ ರಮೇಶ್ ಕಳೆದ ಜುಲೈ 24 ರಂದು ದೂರು ನೀಡಿದ್ದರು.
ಎರಡು ಪ್ರಕರಣಗಳು ದಾಖಲಾಗಿದ್ದವು. ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಕಳ್ಳರ ಪತ್ತೆಗಾಗಿ ಡಿವೈಎಸ್ಪಿ ಮುರಳೀಧರ್,ಕೆಂಚಾರ್ಲಹಳ್ಳಿ ವೃತ್ತ ನಿರೀಕ್ಷಕ ಜಿ.ಸಿ.ನಾರಾಯಣಸ್ವಾಮಿ ನೇತೃತ್ವದಲ್ಲಿ ಕಳ್ಳರ ಪತ್ತೆ ಮಾಡಲು ವಿಶೇಷ ಪತ್ತೆದಾರಿ ತಂಡವನ್ನು ರಚಿಸಲಾಗಿತ್ತು.
ವಿಶೇಷ ಪತ್ತೆದಾರಿ ತಂಡ ತೋಟಗಳಿಗೆ ಭೇಟಿ ನೀಡಿ ಸಮಗ್ರವಾಗಿ ಪರಿಶೀಲನೆ ನಡೆಸಿ ಮಾಹಿತಿಯನ್ನು ಕಲೆ ಹಾಕಿ ವೈಜ್ಞಾನಿಕವಾಗಿ ತನಿಖೆ ಕೈಗೊಂಡಿದ್ದರು. ಸುತ್ತಮುತ್ತಲ ಸಿಸಿ ಕ್ರಾಮರಾಗಳ ಪರಿಶೀಲನೆ ಮತ್ತು ಕಳ್ಳತನದ ಶ್ರೀಗಂಧದ ಮಾರಾಟ ದಂಧೆಯ ಮೇಲೂ ಕಣ್ಣಿರಿಸಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಕಸಬಾ ಹೋಬಳಿಯ ಎ.ಹೊಸಹಳ್ಳಿ ಗ್ರಾಮದ ತೀರ್ಥಕುಮಾರ್ ಮತ್ತು ಮೂರ್ತಿ, ಮಾಯಸಂದ್ರ ಗ್ರಾಮದ ಗೌಸ್ ಪಾಷಾ ಮತ್ತು ಅಪ್ಸರ್ ಪಾಷಾ, ಅದೇ ತಾಲ್ಲೂಕಿನ ಬ್ಯಾಟರಹಳ್ಳಿ ಗ್ರಾಮದ ಮನೋಜ್, ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಹೋಬಳಿಯ ಕರಿಮಾರನಹಳ್ಳಿ ಗ್ರಾಮದ ಭರತ್ ಮತ್ತು ಶಿವ, ವಿಜಯನಗರದ ಏಜಾಜ್ ಬಂಧಿತ ಆರೋಪಿಗಳು.
ಇದನ್ನು ಓದಿದ್ದೀರಾ..? ಜಮಾತೆ ಇಸ್ಲಾಮಿ ಹಿಂದ್ ಕೋಲಾರ ವತಿಯಿಂದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಸನ್ಮಾನ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗಬಂಧನಕ್ಕೆ ಒಪ್ಪಿಸಲಾಗಿದೆ. ಬಟ್ಲಹಳ್ಳಿ ಪಿ.ಎಸ್.ಐ ಶಿವಕುಮಾರ್, ಸಿಬ್ರಬಂದಿ ಮಂಜುನಾಥ್, ವೆಂಕಟೇಶ್, ಪ್ರವೀಣ್ ಕುಮಾರ್, ನವೀನ್ ಕುಮಾರ್ ಪತ್ತೆದಾರಿ ತಂಡದಲ್ಲಿದ್ದರು. ಬಟ್ಲಹಳ್ಳಿ ಪೊಲೀಸರ ಕಾರ್ಯಕ್ಕೆ ಎಸ್ಪಿ ಕುಶಾಲ್ ಚೌಕ್ಸೆ ಮತ್ತು ಹೆಚ್ಚುವರಿ ಎಸ್ಪಿ ಜಗನ್ನಾಥರೈ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





