ಕೆಜಿಎಫ್ : ಕ್ಯಾಸಂಬಳ್ಳಿ ಹೋಬಳಿಯ ಮಿಟ್ಟಕೊತ್ತೂರು ಗ್ರಾಮದ ಸರ್ವೆ ನಂಬರ್ 63 ರಲ್ಲಿ ಆಂಧ್ರ ಮೂಲದ ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿದ್ದು ಈ ಕೂಡಲೇ ಸಮರ್ಪಕವಾಗಿ ದಾಖಲೆ ಪರಿಶೀಲಿಸಿ, ಖಾತೆ ರದ್ದುಗೊಳಿಸಬೇಕೆಂದು ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘಟನೆಯಿಂದ ಕ್ಯಾಸಂಬಳ್ಳಿ ಕಂದಾಯ ಇಲಾಖೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘಟನೆಯ ಕೆಜಿಎಫ್ ತಾಲೂಕು ಸಂಯೋಜಕ ಕಳ್ಳಿಕುಪ್ಪ ಮುನಿವೆಂಕಟಪ್ಪ ಮಾತನಾಡಿ, ಕ್ಯಾಸಂಬಳ್ಳಿ ಹೋಬಳಿಯಲ್ಲಿ ವಿವಿಧ ಗ್ರಾಮಗಳಲ್ಲಿ ಅಧಿಕಾರಿಗಳು ಸಮರ್ಪಕವಾಗಿ ದಾಖಲೆ ಪರಿಶೀಲಿಸದೆ ಸುಳ್ಳು ದಾಖಲೆಗಳಿಗೆ ಖಾತೆಗಳನ್ನು ಮಾಡಿದ್ದು ಈ ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಖಾತೆಗಳನ್ನು ರದ್ದುಗೊಳಿಸಬೇಕು ಎಂದು ಹೇಳಿದರು.
ಕ್ಯಾಸಂಬಳ್ಳಿ ಹೋಬಳಿಯ ಮಿಟ್ಟಕೊತ್ತೂರು ಗ್ರಾಮದ ಸರ್ವೆ ನಂಬರ್ 63 ರಲ್ಲಿ 9.36 ಎಕರೆ ಜಮೀನನ್ನು ಗಾಯಿತ್ರಿ ಅವರಿಗೆ ಅಕ್ರಮ ಖಾತೆ ಮಂಜೂರು, ಇದೇ ಗ್ರಾಮದ ಸರ್ವೆ ನಂಬರ್ 39 ರಲ್ಲಿ 2.23 ಎಕರೆ ನಾರಾಯಣ ರೆಡ್ಡಿ ಅವರಿಗೆ ಮಂಜೂರಾಗಿದೆ.
ಖಾಸಗಿ ವ್ಯಕ್ತಿಗಳು ಅಕ್ರಮ ಕಟ್ಟಡಗಳ ನಿರ್ಮಾಣ, ಹಾಗೂ ಕರಡಿಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 49 ರಲ್ಲಿ ಕೆಲವರು ಅಕ್ರಮ ಬೇರೆ ನಿರ್ಮಿಸಿ ಕೊಂಡು ಕೃಷಿ ಕೆಲಸಗಳನ್ನು ಮಾಡುತ್ತಿರುವ ಬಗ್ಗೆ ಸೇರಿದಂತೆ ವಿವಿಧ ಗ್ರಾಮಗಳ ಸರ್ವೆ ನಂಬರ್ ಗಳಲ್ಲಿ ನಡೆಯುತ್ತಿರುವ ಅಕ್ರಮ ಬಗ್ಗೆ ಪ್ರತಿಭಟನೆ ನಡೆಸಿ ಕಂದಾಯ ಅಧಿಕಾರಿ ಮಂಜುನಾಥ್ ಅವರ ಮೂಲಕ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಆಂಧ್ರಪ್ರದೇಶಕ್ಕೆ ಸೇರಿದ ಗಾಯಿತ್ರಿ ಅವರು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹಲವಾರು ಸುಳ್ಳು ದಾಖಲೆಗಳನ್ನು ಸಲ್ಲಿಸಿ ಅಕ್ರಮವಾಗಿ ಮಂಜೂರಾತಿ ಮಾಡಿಕೊಂಡಿರುತ್ತಾರೆ.
ಆದ್ದರಿಂದ ಭೂ ಮಂಜೂರಾತಿ ಮತ್ತು ಅದಕ್ಕಾಗಿ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ಅಕ್ರಮ ಕಂಡುಬಂದಲ್ಲಿ ಖಾತೆಯನ್ನು ರದ್ದುಗೊಳಿಸಿ ಸದರಿ ಜಾಗವನ್ನು ಅರ್ಹ ವ್ಯಕ್ತಿಗಳಿಗೆ ಮಂಜೂರಾತಿ ಮಾಡಬೇಕೆಂದು ಒತ್ತಾಯಿಸಿದರು.
ಬೇಡಿಕೆಗಳು
ಆಂಧ್ರಪ್ರದೇಶದ ನಾರಾಯಣ ರೆಡ್ಡಿ ಅವರೂ ಸಹ ಸರ್ಕಾರಿ ಗೋಮಾಳ ಜಾಗದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಸ್ವಂತ ಕಟ್ಟಡ ನಿರ್ಮಿಸುತ್ತಿದ್ದಾರೆ.
ಕ್ಯಾಸಂಬಳ್ಳಿ ಹೋಬಳಿಯ ಕರಡಿಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 49ರಲ್ಲಿ 1.14 ಎಕರೆ ಸರ್ಕಾರಿ ಬಿಡು ಜಾಗವಿದ್ದು, ಆಂಧ್ರಪ್ರದೇಶಕ್ಕೆ ಸೇರಿದ ಕೆಲವು ವ್ಯಕ್ತಿಗಳು ಈ ಜಾಗದಲ್ಲಿ ತಂತಿ ಮೇಲೆ ಹಾಕಿಸಿಕೊಂಡು ಕೃಷಿ ಕೆಲಸಗಳನ್ನು ಮಾಡುತ್ತಿರುವುದು ಕೂಡಲೇ ತೆರವುಗೊಳಿಸುವುದು.
ಈ ಕೂಡಲೇ ಕಂದಾಯ ಅಧಿಕಾರಿಗಳು ಆಂಧ್ರ ಗಡಿಭಾಗದಲ್ಲಿರುವ ಅನೇಕ ಗ್ರಾಮಗಳಲ್ಲಿ ಸರ್ಕಾರಿ ಗೋಮಾಳ ಜಮೀನನ್ನು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದು ಕೆಲವರಿಗೆ ಅಕ್ರಮ ಖಾತೆಗಳಾಗಿದ್ದು, ಈ ಬಗ್ಗೆ ವಿಶೇಷ ತಂಡ ರಚಿಸಿ ಆಂಧ್ರಪ್ರದೇಶದ ಖಾಸಗಿ ವ್ಯಕ್ತಿಗಳ ಖಾತೆಗಳನ್ನು ರದ್ದುಗೊಳಿಸಿ ನಮ್ಮ ಕೆಜಿಎಫ್ ತಾಲೂಕಿನ ಬಡ ಕಾರ್ಮಿಕರಾದ ಅರ್ಹರಿಗೆ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಸರ್ಕಾರಿ ಗೋಮಾಳ ಜಮೀನನ್ನ ಕೆಲವೇ ದಿನಗಳಲ್ಲಿ ತನಿಖೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು ಇಲ್ಲದಿದ್ದರೆ ತಾಲೂಕು ಕಚೇರಿ ಮುಂಭಾಗದಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದರು.
ಇದನ್ನು ಓದಿದ್ದೀರಾ..? ೧.೫೦ ಲಕ್ಷ ಬಹುಮಾನ ಗೆದ್ದು ಬೀಗಿದ ತಮಿಳುನಾಡು, ಲಕ್ನೋ, ಪುಣೆ ತಂಡಗಳು
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘಟನೆಯ ಸಂಯೋಜಕ ಕಳ್ಳಿಕುಪ್ಪ ಮುನಿವೆಂಕಟಪ್ಪ, ಸಂಘಟನಾ ಸಂಯೋಜಕ ಕಣ್ಣೂರು ರಾಜೇಶ್, ಕ್ಯಾಸಂಬಳ್ಳಿ ಕೆ.ವಿ ಶ್ರೀನಿವಾಸ್, ಖಜಾಂಚಿ ರಾಮಸಾಗರ ಮಂಜುನಾಥ್, ಕಲಾಮಂಡಳಿ ಬೇತಮಂಗಲ ಮುನಿವೆಂಕಟಪ್ಪ, ಕಾರ್ಮಿಕ ಘಟಕ ಸಂಯೋಜಕ ಬೊಮ್ಮಾಂಡಹಳ್ಳಿ ಅಂಬರೀಶ್, ಹುಲ್ಕೂರು ಕೃಷ್ಣಮೂರ್ತಿ, ಅಲ್ಪಸಂಖ್ಯಾತರ ಘಟಕ ಅಕ್ಯೂಬ್, ನಗರ ಘಟಕ ಕುಮಾರನ್ , ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.





