ಬಂಗಾರಪೇಟೆ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮೇಲೆ ನ್ಯಾಲಯಲದ ಕಲಾಪದಲ್ಲೇ ವಕೀಲರೊಬ್ಬರು ಶೂ ಎಸೆದಿರುವ ಘಟನೆ ಖಂಡಿಸಿ ದಲಿತ ಸಮಾಜ ಸೇನೆಯ ಮುಖಂಡರು ಬಂಗಾರಪೇಟೆ ನಗರದ ಕುವೆಂಪು ವೃತ್ತದಲ್ಲಿ ರಸ್ತೆ ಮೇಲೆ ಕೂತು ಪ್ರತಿಭಟನೆ ನಡೆಸಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿರುವ ಘಟನೆಯು ಇತಿಹಾಸದಲ್ಲಿ ಇದೇ ಮೊದಲಾಗಿದ್ದು, ತಪ್ಪಿತಸ್ಥ ವಕೀಲನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ದಲಿತ ಸಮಾಜಸೇನೆ ರಾಜ್ಯಾಧ್ಯಕ್ಷ ಸೂಲಿಕೂಂಟೆ ಆನಂದ್ ಮಾತನಾಡಿ ನ್ಯಾಯಮೂರ್ತಿಗಳ ಮೇಲೆ ನ್ಯಾಯಾಲಯದಲ್ಲೇ ಶೂ ಎಸೆದಿರುವುದು ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಮಾಡಿದ ದೊಡ್ಡ ಅಪಮಾನ ಮತ್ತು ಕಳಂಕವಾಗಿದೆ. ಸನಾತನ ಧರ್ಮಕ್ಕೆ ಸಿಜೆಐ ಗವಾಯಿ ಅವರು ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಆರೋಪಿ ರಾಕೇಶ್ ಕಿಶೋರ್ ಗವಾಯಿ ಅವರ ಮೇಲೆ ಶೂ ಎಸೆಯಲು ಮುಂದಾಗಿದ್ದು ಆನಾಗರಿಕವಾಗಿ ನಡೆದುಕೊಂಡಿದ್ದು ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೆ ಅಪಮಾನ ಮಾಡಿದ್ದಾನೆ ಎಂದು ಆಕ್ರೋಶ ಹೊರಹಾಕಿದರು.
ನ್ಯಾಯ ಮೂರ್ತಿ ಗವಾಯಿ ಅವರು ಘಟನೆಯನ್ನು ನಿರ್ಲಕ್ಷಿಸಬೇಕು ಎಂದು ಹೇಳಿರುವುದು ಅವರ ದೊಡ್ಡತನ. ನ್ಯಾ. ಗವಾಯಿ ತೋರಿದ ತಾಳ್ಮೆ ಪ್ರಶಂಶನೀಯ. ಇದು ನಮ್ಮ ನ್ಯಾಯಿಕ ಮೌಲ್ಯಗಳ ಸಂಕೇತ. ನ್ಯಾಯಮೂರ್ತಿಗಳ ಮೇಲಿನ ಈ ದಾಳಿಯು ಸಮಸ್ತ ಭಾರತೀಯರಲ್ಲಿ ಕ್ರೊಧವನ್ನುಂಟು ಮಾಡಿದೆ. ಇಂಥ ಘಟನೆಗಳಿಗೆ ಭಾರತದಲ್ಲಿ ಅವಕಾಶವಿಲ್ಲ. ಆರೋಪಿ ವಕೀಲನ ವಿರುದ್ಧ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ..? ನಾಳೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಮೃತ ಹಸ್ತದಿಂದ ಸೇತುವೆಗಳ ಲೋಕಾರ್ಪಣೆ: ಶಾಸಕಿ ಎಂ.ರೂಪಕಲಾ
ಈ ಸಂದರ್ಭದಲ್ಲಿ ವೆಂಕಟೇಶ್, ಮುನಿರಾಜು, ದೇವಗಾನಹಳ್ಳಿ ನಾಗೇಶ್, ರಾಜೇಂದ್ರ, ಅಯ್ಯಪ್ಪ, ಆಟೋಕರ್ಣ, ರಾಜು, ರವಿ, ಪ್ರದೀಪ್, ಮಹೇಂದ್ರ ಭಾಗವಹಿಸಿದ್ದರು.





