ಚಿಕ್ಕಬಳ್ಳಾಪುರ : ನಾಗಾರ್ಜುನ ಕಾಲೇಜಿನಲ್ಲಿ ಸುಮಾರು ಒಂದು ವಾರದಿಂದ ಮನೆಮಾಡಿದ್ದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ – ೨೦೨೫ರ ಸಂಭ್ರಮಕ್ಕೆ ಮಂಗಳವಾರ ರಾತ್ರಿ ತೆರೆ ಬಿದ್ದಿತು.
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಕಾರ್ಯಕ್ರಮದ ಅಂಗವಾಗಿ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ತರಹೇವಾರಿ ತಯಾರಿಗಳು ನಡೆದಿದ್ದವು. ಸರಿಸುಮಾರು ೨೦ ಕಮಿಟಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದವು. ಸೋಮವಾರ ಬೆಳಗ್ಗೆ ೯.೩೦ಕ್ಕೆ ಕಾರ್ಯಕ್ರಮ ಚಾಲನೆ ಪಡೆದುಕೊಂಡಿತ್ತು. ದೇಶದ ೧೧ ರಾಜ್ಯಗಳಿಂದ ಸುಮಾರು ೧೮ ತಂಡಗಳು ಅತ್ಯುತ್ಸಾಹದಿಂದ ಭಾಗವಹಿಸಿದ್ದವು.
ಒಂದೊಂದು ರಾಜ್ಯದ ವಿದ್ಯಾರ್ಥಿಗಳು ಬಣ್ಣ ಬಣ್ಣದ ಸಮವಸ್ತ್ರ ಧರಿಸಿ, ಅಗತ್ಯ ಸಲಕರಣೆಗಳನ್ನೊತ್ತು ತಂದು ತಮ್ಮ ತಮ್ಮ ಕಾಲೇಜನ್ನು ಪ್ರತಿನಿಧಿಸಿದ್ದವು. ಸೋಮವಾರ ಬೆಳಗ್ಗೆ ೯.೩೦ರಿಂದ ಆರಂಭವಾದ ೩೬ ಗಂಟೆಯ ಕಾರ್ಯಕ್ರಮದಲ್ಲಿ ಎಲ್ಲಾ ತಂಡಗಳು ಶಿಸ್ತು ಸಂಯಮದಿಂದ ಪಾಲ್ಗೊಂಡವು.
ತಂಡಗಳಿಗೆ ಅಗತ್ಯವಿರುವ ನಿರಂತರ ಇಂಟರ್ನೆಟ್ ಸೌಲಭ್ಯ, ನೀರು, ವಸತಿ, ತಿಂಡಿ ತಿನಿಸುಗಳು, ಲವಲವಿಕೆಗಾಗಿ ಒಳಾಂಗಣ ಕ್ರೀಡೆಗಳಾದ ಚೆಸ್, ಟೇಬಲ್ ಟೆನಿಸ್, ಕೇರಂ ಬೋರ್ಡ್, ಜುಂಬಾ ಡ್ಯಾನ್ಸ್ ಮತ್ತು ಯೋಗ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಾಲೇಜು ಆಡಳಿತ ಮಂಡಳಿ ವತಿಯಿಂದ ಒದಗಿಸಲಾಗಿತ್ತು.
ಮಂಗಳವಾರ ರಾತ್ರಿ ೯.೩೦ರ ಸುಮಾರಿಗೆ ಆರಂಭವಾದ ಸಮಾರೋಪ ಸಮಾರಂಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಡಾ.ತಿಪ್ಪೇಸ್ವಾಮಿ ಹಾಗೂ ಇತರೆ ಪ್ರಮುಖರ ಸಮ್ಮುಖದಲ್ಲಿ ವಿಜೇತ ತಂಡಗಳ ಹೆಸರುಗಳನ್ನು ಘೋಷಿಸಲಾಯಿತು.
ವಿಜೇತ ತಂಡಗಳ ಪೈಕಿ ತಮಿಳುನಾಡಿನ ಟೆಕ್ಟ್ಸ್ಟೈಲ್ ನಗರ ಎಂದು ಖ್ಯಾತಿ ಪಡೆದಿರುವ ಎರೋಡೆ ಜಿಲ್ಲೆಯ ಬನ್ನಾರಿ ಅಮ್ಮನ್ ತಾಂತ್ರಿಕ ವಿದ್ಯಾಲಯದ ತಂಡ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮರಾಠ್ವಾಡ ಮಿತ್ರ ಮಂಡಳ್ಸ್ ಇಂಜಿನಿಯರಿಂಗ್ ಕಾಲೇಜು ಮತ್ತು ಜೆಎಸ್ಪಿಎಂ ವಿಶ್ವವಿದ್ಯಾಲಯದ ತಂಡಗಳು ಹಾಗೂ ಲಕ್ನೋ ನಗರದ ಬಿ.ಎನ್ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ತಂಡ ಸೇರಿದಂತೆ ಒಟ್ಟು ನಾಲ್ಕು ತಂಡಗಳು ತಲಾ ೧.೫ ಲಕ್ಷ ನಗದು ಬಹುಮಾನವನ್ನು ಪಡೆದು ಗೆಲುವಿನ ನಗೆ ಬೀರಿದವು.
ಇದೇ ವೇಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಐಸಿಟಿಇ ನಿರ್ದೇಶಕ ಡಾ.ಎನ್.ಎಚ್.ಸಿದ್ದಲಿಂಗಸ್ವಾಮಿ, ಎಐಸಿಟಿಇ ನೋಡಲ್ ಅಧಿಕಾರಿ ರಾಜೀವ್ ಕುಮಾರ್, ಡಿಆರ್ಡಿಒ ನೋಡಲ್ ಅಧಿಕಾರಿ ರಾಜೇಶ್ ಯಾದವ್ ಹಾಗೂ ಇತರರನ್ನು ಕಾಲೇಜು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಇದನ್ನು ಓದಿದ್ದೀರಾ..? ರಾಷ್ಟ್ರೀಯ ಪಲ್ಸ್ ಪೋಲಿಯೊ ಪೂರ್ವಭಾವಿ ಸಭೆ
ಕಾರ್ಯಕ್ರಮದಲ್ಲಿ ಎನ್ಜಿಐ ನಿರ್ದೇಶಕ ಎಸ್.ಜಿ.ಗೋಪಾಲಕೃಷ್ಣ, ಎನ್ಸಿಇಟಿ ಪ್ರಾಂಶುಪಾಲ ಡಾ.ತಿಪ್ಪೇಸ್ವಾಮಿ ಜಿ, ಡಾ.ಯೋಗೀಶ ಎಚ್ಸಿ, ಶಾರದಾ ಟಿ, ಡಾ.ಗೋಪಿನಾಥ್, ಡಾ.ಸಂಜೀವ್ ಕುಮಾರ್ ಸೇರಿದಂತೆ ಎಸ್ಐಎಚ್ ಕಮಿಟಿ ಸದಸ್ಯರು, ಕಾಲೇಜು ಸಿಬ್ಬಂದಿ ವರ್ಗ ಹಾಜರಿದ್ದರು.





