ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ 371(ಜೆ) ಕಲಂ ವಿರುದ್ಧ ಅಪಸ್ವರ ಎತ್ತಿರುವ ಬೆಂಗಳೂರಿನ ಹಸಿರು ಪ್ರತಿಷ್ಠಾನ ಖಂಡಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ನಡೆದ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಛತ್ರಪತಿ ಶಿವಾಜಿ ಮಹಾರಾಜ ವೃತ್ತದವರೆಗೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರಮುಖರು, ಸಾಮಾಜಿಕ ಕಾರ್ಯಕರ್ತರು, ಪ್ರಗತಿಪರ ಚಿಂತಕರು ಯುವಕರು, ಶಿಕ್ಷಣ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್ ಹಾಗೂ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಸಲ್ಲಿಸಿದರು.
“ದಶಕಗಳ ಹೋರಾಟದ ಫಲವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ 2013ರಲ್ಲಿ ಸಂವಿಧಾನದ 371ನೇ (ಜೆ) ಕಲಂ ಜಾರಿಯಾಗಿತ್ತು. ಹಲವು ನಿಯಮಗಳನ್ನು ರೂಪಿಸಿ ಶಿಕ್ಷಣ ಮತ್ತು ಸರಕಾರಿ ನೇಮಕಾತಿಗಳಲ್ಲಿ ಕೆಲವೊಂದು ಸ್ಥಾನಗಳನ್ನು ಪಡೆಯಲು ಸಹಕಾರಿಯಾಗಿದ್ದು, ಇದು ಮರುಭೂಮಿಯಲ್ಲಿ ಓಯಸಿಸ್ ಕಂಡಂತಾಗಿದೆ. ಆದರೆ ಹಸಿರು ಪ್ರತಿಷ್ಠಾನವೆಂಬ ವೇದಿಕೆಯ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹೋರಾಟವೆಂಬ ಹುನ್ನಾರ ನಡೆಸಿ 371ನೇ(ಜೆ) ಕಲಂ ನಿಷ್ಕ್ರಿಯಗೊಳಿಸಲು ಮುಂದಾಗಿದ್ದಾರೆ. ಇಂತಹ ಜನವಿರೋಧಿ, ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಹೋರಾಟ ರೂಪಿಸಿದ್ದೇವೆʼ ಎಂದು ಹೇಳಿದರು.
ʼಕಲ್ಯಾಣ ಕರ್ನಾಟಕ ರಚನೆಯಾದ ನಂತರ ಕೇವಲ ಶೇ 1ರಿಂದ ಶೇ4 ರಷ್ಟು ಅವಕಾಶ ಸಿಕ್ಕಿದೆ. ವಿಶೇಷ ಸ್ಥಾನಮಾನದ ನಂತರ ಶೇ 9ರಷ್ಟು ಸರಕಾರಿ ನೌಕರಿಗಳಲ್ಲಿ ನಮ್ಮ ಪ್ರಾತಿನಿಧ್ಯ ಆರಂಭವಾಗಿದ್ದರೂ ಜನಸಂಖ್ಯೆಗೆ ಅನುಗುಣವಾಗಿ ಇನ್ನೂ ನಮಗೆ ಸ್ಥಾನಮಾನಗಳೇ ಇಲ್ಲ. ಸಾವಿರಾರು ಹುದ್ದೆಗಳು ಖಾಲಿಯಿದ್ದು ಅಭಿವೃದ್ಧಿ ಆಮೆಗತಿಯಲ್ಲಿ ಸಾಗಿದೆ. ಇಂಥ ಪರಿಸ್ಥಿತಿಯಲ್ಲಿ ಕನ್ನಡಿಗರೆಲ್ಲರೂ ವಾಸ್ತವ ಸ್ಥಿತಿ ಅರ್ಥ ಮಾಡಿಕೊಳ್ಳದೇ ಇರುವುದು ದುರ್ದೈವದ ಸಂಗತಿಯಾಗಿದೆ. ರಾಜ್ಯ ಒಡೆಯುವ ಪಟ್ಟಭದ್ರ ಹಿತಾಸಕ್ತಿಗಳಿಗೆ ಕರ್ನಾಟಕದ 31 ಜಿಲ್ಲೆಯ ಜನ ಸರಿಯಾಗಿ ಅರ್ಥೈಸಿಕೊಂಡು ತಕ್ಕ ಉತ್ತರ ನೀಡಬೇಕಾಗಿದೆʼ ಎಂದರು.
ʼಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಾಂವಿಧಾನಿಕವಾಗಿ ವಿಶೇಷ ಸ್ಥಾನಮಾನ 371(ಜೆ) ಕಲಂ ವಿರೋಧಿಸುವುದೆಂದರೆ ಸಂವಿಧಾನ ವಿರೊಧಿಸಿದಂತೆ, ಇದು ಹೀಗೆ ಮುಂದುವರೆಸಿದರೆ ಕಲ್ಯಾಣ ಕರ್ನಾಟಕ ಬಂದ್ ಮಾಡುವ ಮೂಲಕ ಉಗ್ರ ಹೋರಾಟ ನಡೆಸಲಾಗುವುದುʼ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ʼ371ನೇ (ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಬೇಕು. ನೇಮಕಾತಿಯಲ್ಲಿ ಕೃಪಾಂಕ ಮತ್ತು ವಯೋಮಿತಿ ಸಡಿಲಿಕೆ ನೀಡಬೇಕು. ವ್ಯಾಜ್ಯಗಳ ನಿವಾರಣೆಗೆ ಪ್ರತ್ಯೇಕ ಟ್ರಿಬ್ರ್ಯುನಲ್ ರಚಿಸಬೇಕು. ಎಲ್ಲ ನೇಮಕಾತಿಗಳಿಗೆ ಮೆರಿಟ್ ಮೀಸಲಾತಿ ಪ್ರಕಟಿಸಬೇಕು. ಖಾಲಿ ಇರುವ ಎಲ್ಲ ಹುದ್ದೆಗಳನ್ನು ಕಾಲಮಿತಿಯಲ್ಲಿ ತುಂಬಬೇಕು. 1956 ರಿಂದ ಇಲ್ಲಿಯವರೆಗೆ ಕಕ ಭಾಗಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು. 371 ನೇ (ಜೆ) ಕಲಂ ಅನುಷ್ಠಾನಕ್ಕೆ ಸಲಹಾ ಸಮಿತಿ ರಚಿಸಬೇಕುʼ ಎಂದು ಬೇಡಿಕೆಗಳು ಮಂಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ʼರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಸಂಪುಟದ ಎಲ್ಲ ಸಚಿವರು ಕಲ್ಯಾಣ ಕರ್ನಾಟಕ ಭಾಗದ 371(ಜೆ) ಕಾಯ್ದೆಯ ಪರವಾಗಿದ್ದೇವೆ. ಅಪಪ್ರಚಾರ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ. 371(ಜೆ) ಕಲಂ ಪರಿಣಾಮಕಾರಿ ಅನುಷ್ಠಾನದ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದುʼ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ, ಬಸವರಾಜ ದೇಶಮುಖ, ಪೂರ್ಣಿಮಾ ಜಾರ್ಜ್ ಹಾಗೂ ಅಧ್ಯಕ್ಷತೆ ವಹಿಸಿದ ಡಾ.ರಜನೀಶ ವಾಲಿ ಮಾತನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪಾ ಜಲಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಮುಖರಾದ ಹುಲಸೂರಿನ ಶಿವಾನಂದ ಸ್ವಾಮೀಜಿ, ಬಸವ ಮಂಟಪದ ಸತ್ಯಾದೇವಿ ಮಾತಾಜಿ, ಬಸವಪ್ರಭು ಸ್ವಾಮೀಜಿ, ಡಾ.ಗಂಗಾಬಿಕೆ ಅಕ್ಕಾ, ಸಿದ್ದರಾಮ ಬೆಲ್ದಾಳ ಶರಣರು, ಆರ್.ಕೆ.ಹುಡುಗಿ, ಸರ್ದಾರ್ ಬಲಬೀರ್ ಸಿಂಗ್ ಬಸವರಾಜ ಜಾಬಶೆಟ್ಟಿ, ರಾಜೇಂದ್ರಕುಮಾರ್ ವಣಗೇರಿ, ಶಿವಶರಣಪ್ಪಾ ಪಾಟೀಲ್, ಅಬ್ದುಲ್ ಖದೀರ್, ಬಸವರಾಜ ಧನ್ನೂರ್, ಬಾಬು ವಾಲಿ, ಚಂದ್ರಶೇಖರ್ ಪಾಟೀಲ್, ಪಂಡಿತರಾವ್ ಚಿದ್ರಿ, ವಿರೂಪಾಕ್ಷ ಗಾದಗಿ, ಶಶಿ ಹೊಸಳ್ಳಿ, ಈಶ್ವರ ಸಿಂಗ್ ಠಾಕೂರ್, ಬಿ.ಜಿ.ಶೆಟಕಾರ್, ಶ್ರೀಕಾಂತ್ ಸ್ವಾಮಿ, ಅನೀಲ್ಕುಮಾರ್ ಬೆಲ್ದಾರ್, ಮಾರುತಿ ಬೌದ್ಧೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು. ಸಮಿತಿಯ ಪ್ರಧಾನ ಸಂಚಾಲಕ ಸುರೇಶ ಚನ್ನಶೆಟ್ಟಿ ಸ್ವಾಗತಿಸಿದರು, ಶಿವಶಂಕರ ಟೋಕರೆ ನಿರೂಪಿಸಿದರು. ಸಹ ಸಂಚಾಲಕ ವಿನಯ ಮಾಳಗೆ ವಂದಿಸಿದರು.





