ಲೋಕೋಪಯೋಗಿ ಇಲಾಖೆಯಡಿ ರಾಜ್ಯದಲ್ಲಿ ಒಂದು ಕೋಟಿ ರೂ.ಗಿಂತ ಕಡಿಮೆ ಬಿಲ್ ಇದ್ದ 1054 ಸಣ್ಣ ಗುತ್ತಿಗೆದಾರರ ಒಟ್ಟು 600 ಕೋಟಿ ರೂ. ಬಾಕಿ ಬಿಲ್ಅನ್ನು ಲಂಚ ಪಡೆಯದೆ ಇಲಾಖೆ ಬಿಡುಗಡೆ ಮಾಡಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಲೋಕೋಪಯೋಗಿ ಇಲಾಖೆಯು ಯಾವುದೇ ಲಂಚ ಪಡೆಯದೆ, 600 ಕೋಟಿ ರೂ. ಬಿಲ್ ಬಿಡುಗಡೆ ಮಾಡಿದೆ. ಇದೇ ರೀತಿ ಎಲ್ಲ ಇಲಾಖೆಗಳೂ ಬಿಲ್ ಬಿಡುಗಡೆ ಮಾಡಲಿ” ಎಂದು ಅವರು ಹೇಳಿದರು.
“ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಹಕಾರ ನೀಡುತ್ತಿದ್ದಾರೆ. ಬಿಬಿಎಂಪಿಯಲ್ಲಿ ಬಾಕಿ ಉಳಿದಿರುವ ಬಿಲ್ಗಳ ಬಿಡುಗಡೆ ಮಾಡುವುದಾಗಿ ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ” ಎಂದು ಹೇಳಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ಪಡೆದು ಬಿಲ್ ಪಾವತಿ ಮಾಡಲಾಗುತ್ತಿದೆ. ಸಚಿವರು ಕಮಿಷನ್ ಪಡೆದು, ಬಿಲ್ ಬಿಡುಗಡೆ ಮಾಡುತ್ತಿದ್ದಾರೆ ಎಂದು ಕೆಂಪಣ್ಣ ಆರೋಪಿಸಿದ್ದರು. ಮಾತ್ರವಲ್ಲದೆ, ಇತ್ತೀಚೆಗೆ ಕಮಿಷನ್ ಬಗ್ಗೆ ಮಾತನಾಡಿದ್ದ ಕೆಂಪಣ್ಣ, ಇಂದಿನ ಕಾಂಗ್ರೆಸ್ ಸರ್ಕಾರದಲ್ಲಿಯೂ ಕಮಿಷನ್ ಇದೆ. ಬಿಜೆಪಿ ಸರ್ಕಾರದಲ್ಲಿ ಶಾಸಕರು, ಸಚಿವರು ಕಮಿಷನ್ ಕೇಳುತ್ತಿದ್ದರು. ಈಗ, ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದೀಗ, ಕಮಿಷನ್ ಪಡೆಯದೆ ಲೋಕೋಪಯೋಗಿ ಇಲಾಖೆ ಬಿಲ್ ಪಾವತಿ ಮಾಡಿದೆ ಎಂದು ಅವರು ಹೇಳಿದ್ದಾರೆ.




