ಆಗಸ್ಟ್ 15ರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಬ್ರಿಟಿಷರನ್ನು ಭಾರತದಿಂದ ಓಡಿಸಿದ ದಿನ ಅದು. 1947ರಲ್ಲಿ ಸ್ವಾತಂತ್ರ್ಯ ಪಡೆದು ಸ್ವತಂತ್ರರಾಗಿ ಜೀವಿಸಲು ಕಾಲಿಟ್ಟ ಮೊದಲ ದಿನ. ಇತ್ತ ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದಂತೆ ದೇಶದ ಎಲ್ಲಾ ಭಾಗದಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ನಾಳೆಯ (ಆ.15) ಸ್ವಾತಂತ್ರ್ಯ ದಿನಕ್ಕೆ ದೇಶದಾದ್ಯಂತೆ ಸಿದ್ಧತೆಗಳು ಭರದಿಂದ ಸಾಗಿವೆ.
ನಾಳೆ ಇಡೀ ದೇಶ ಒಟ್ಟಾಗಿ ಸ್ವಾತಂತ್ರ್ಯದ ಹಬ್ಬ ಆಚರಿಸುತ್ತದೆ. ಈ ವಾತಾವರಣ ಶಾಲೆಗಳಲ್ಲಿ ಮತ್ತಷ್ಟು ಮೆರುಗಿನಿಂದ ಕೂಡಿರುತ್ತದೆ. ಅವರು ಮಾಡುವ ಪೂರ್ವಸಿದ್ಧತೆಗಳನ್ನು ವಿದ್ಯಾರ್ಥಿಗಳ ಬಾಯಿಂದಲೇ ಕೇಳುವುದು ಮತ್ತೂ ಪುಳಕ… ವರ್ಷದಿಂದ ಶಾಲೆಯ ಯಾವುದೋ ಮೂಲೆಯಲ್ಲಿ ಸದ್ದಿಲ್ಲದೆ ಬಿದ್ದಿದ್ದ ತಾಳ, ತಪ್ಪಡಿ, ಕಹಳೆ, ಜಾಗಟೆ, ಕೊಳಲು, ಡೊಳ್ಳುಗಳು ಮೂಲೆಯಿಂದ ಎದ್ದು ಬಂದು ಶುಭ್ರವಾಗಿ ಶಾಲೆಯ ಮುಖ್ಯ ಕೊಠಡಿಗೆ ಅಲಂಕಾರದ ಸಮೇತ ಸೇರಿಕೊಳ್ಳುತ್ತವೆ. ಇತ್ತ ವಿದ್ಯಾರ್ಥಿಗಳು ಮಾತ್ರ ಆಗಸ್ಟ್ 15ರ ಕಾರ್ಯಕ್ರಮಕ್ಕೆ ಬರುವ ಪೋಷಕರು ಗಣ್ಯರ ಮತ್ತು ಸಾರ್ವಜನಿಕರ ಮೆಚ್ಚುಗೆ ಪಡೆಯಲು ನೃತ್ಯ, ಸಂಗೀತ, ಭಾಷಣ ಸೇರಿದಂತೆ ಹಲವು ಪ್ರದರ್ಶನಕ್ಕೆ ಕಸರತ್ತು ಮಾಡುತ್ತಿರುತ್ತಾರೆ. ಕೆಲವು ವಿದ್ಯಾರ್ಥಿಗಳ ಜವಾಬ್ದಾರಿ ಮಾತ್ರ ತುಂಬಾ ವಿಭಿನ್ನ. ಅವರು ಶಾಲೆಯ ಕೊಠಡಿ, ಆವರಣಗಳನ್ನು ಚಂದವಾಗಿ ಸ್ವಚ್ಛಗೊಳಿಸಿ, ಅಲಂಕಾರ ಮಾಡುವ ಹೊಣೆ ಹೊತ್ತು ಅದರಲ್ಲಿ ಹೆಚ್ಚು ತಲ್ಲೀನರಾಗಿರುತ್ತಾರೆ.
ಈ ತಂಡದೊಟ್ಟಿಗೆ ವಿದ್ಯಾರ್ಥಿನಿಯರ ಗುಂಪೊಂದು ಕೈಯಲ್ಲಿ ಕಸಬರಗಿ ಹಿಡಿದುಕೊಂಡು ದೂಳು ಕೊಡವಿ ಬಾಗಿಲು ಒರೆಸಿ ಮೇಜಿನ ಮೇಲೆ ಚಂದಾದ ಬಟ್ಟೆಯನ್ನು ತೊಡಿಸಿ ಅಲಂಕರಿಸುತ್ತಾರೆ. ಇತ್ತ ಶಾಲೆಯ ಶಿಕ್ಷಕರೆಲ್ಲರೂ ತಮ್ಮದೇ ಮನೆಯ ಅದ್ದೂರಿ ಶುಭ ಸಮಾರಂಭವೆಂಬಂತೆ ಮುತುವರ್ಜಿಯಿಂದ ಓಡಾಡುತ್ತಾರೆ.
ಕೊಠಡಿಯೊಳಗಿಂದ ಕೇಳಿ ಬರುವ ಸದ್ದಿಗೆ ತಕ್ಕಂತೆ ವಿದ್ಯಾರ್ಥಿನಿಯರ ಕಾಲ್ಗೆಜ್ಜೆ ಸದ್ದು ಕೇಳುತ್ತದೆ. ಆ ತಾಳಕ್ಕೆ ಅತ್ತ ಹೊರಗಡೆ ಕೆಲಸ ಮಾಡುತ್ತಿದ್ದ ವಿದ್ಯಾರ್ಥಿಗಳ ಕಿವಿ ನೆಟ್ಟಗಾಗುತ್ತವೆ. ತುರ್ತು ಕೆಲಸಗಳ ನಿಮಿತ್ತ ಪಿಟಿ ಮಾಸ್ಟರ್ ಎಕ್ಸ್ ಪ್ರೆಸ್ ಬಸ್ ನಂತೆ ಅತ್ತಿಂದಿತ್ತ ಓಡಾಡುತ್ತಾರೆ. ಶಾಲೆಯ ಎಲ್ಲಾ ಬೆಳವಣಿಗೆಗಳನ್ನು ಒಮ್ಮೆ ಕಣ್ಣು ಹಾಯಿಸಿ, ಅಗತ್ಯವಿರುವ ಕಡೆ ಜೋರು ಮಾಡಿ ಕೆಲಸ ಗೆಲ್ಲುತ್ತಾರೆ.
ಈ ಬೆಳೆವಣಿಗೆಗಳ ಮಧ್ಯೆ ಯಾರೋ ಕೊಠಡಿ ಕಡೆಗೆ ಧಪ್ ಧಪ್ ಅಂತ ಜೋರು ಹೆಜ್ಜೆ ಹಾಕುತ್ತಾ ಓಡಿ ಬರುತ್ತಿರುವ ಸದ್ದು. ಮುಖ್ಯ ಶಿಕ್ಷಕರ ಕುತೂಹಲದ ಕಟ್ಟೆಯೊಡೆದು ಯಾರೆಂದು ಬಾಗಿಲು ಕಡೆಗೆ ವಾಲಿ ನೋಡಿದರೆ, ಅದು ಇಂಗ್ಲೀಷ್ ಟೀಚರ್! ಇವರ ಧಾವಂತ ನೋಡಿದ ಪಿಟಿ, ಹೆಡ್ ಮಾಸ್ಟರ್, ಏನೋ ದೊಡ್ಡ ಸಮಸ್ಯೆಯಾಗಿರಬೇಕು ಅಂದಕೊಂಡಿರುವ ಹೊತ್ತಿಗೆ ಮೆಲ್ಲಗೆ ಮಾತು ಪ್ರಾರಂಭಿಸಿದ ಇಂಗ್ಲಿಷ್ ಟೀಚರ್, “ಸರ್ ಈ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಇಂಗ್ಲಿಷ್ ನಲ್ಲಿ ಭಾಷಣ ಮಾಡೋದಾ ಇಲ್ಲವೇ ಕನ್ನಡದಲ್ಲಿ ಮಾಡೋದಾ ಅನ್ನುವ ಪ್ರಶ್ನೆಯನ್ನು ಮುಂದಿಟ್ಟರು. ಇದನ್ನು ನೋಡಿ ಇಬ್ಬರು ಶಿಕ್ಷಕರು ನಸುನಕ್ಕು ಸುಮ್ಮನಾದರು. ಇದರ ಮಧ್ಯೆದಲ್ಲೇ ನಾಳಿನ ಕಾರ್ಯಕ್ರಮಕ್ಕೆ ಉಪಹಾರ, ಮಕ್ಕಳಿಗೆ ಯಾವ ಲಾಕೇಟ್ ನೀಡಬೇಕು, ಅತಿಥಿಗಳಿಗೆ ಯಾವ ಹೂವಿನಹಾರ ತರಬೇಕು.. ಹೀಗೆ ಹಲವು ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಚರ್ಚೆ ಮುಗಿಯುತ್ತಿದ್ದಂತೆ ಹೆಡ್ ಮಾಸ್ಟರ್ಗೆ ಒಮ್ಮೆಲೇ ನೆನಪಿಗೆ ಬಂದಿದ್ದು, ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ಫೋಟೋ. ಈ ಹಿಂದೆ ನಡೆದ ಶಾಲಾ ಸಭೆಯಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಒಂದು ಹೊಸ ಅಂಬೇಡ್ಕರ್ ಫೋಟೋ ತರಬೇಕೆಂದು ನಿರ್ಧಾರ ತೆಗೆದುಕೊಂಡಿರುವುದು.
ಶಾಲೆ ಸಮಯ ಮುಗಿಯುವ ಹೊತ್ತಿಗೆ ವಿದ್ಯಾರ್ಥಿನಿಯರು ಆವರಣವನ್ನು ಚೆಂದ ನೀರು ಹಾಕಿ ತೊಳೆದು ರಂಗೋಲಿ ಬಿಡಿಸಲು ಅಣಿಯಾದರೆ, ಹುಡುಗರು ಶಾಲೆ ಪಕ್ಕದ ತೋಟದಿಂದ ಮಾಲೀಕರಿಗೆ ಕಾಣದಂತೆ ಒಳ ನುಗ್ಗಿ ಬಾಳೆ ಗಿಡ, ತೆಂಗಿನ ಗರಿ, ಮಾವಿನ ಸೊಪ್ಪು ತಂದು ಶಾಲೆಯ ಕಂಬ, ಗೇಟ್ಗಳನ್ನು ಸಿಂಗರಿಸತೊಡಗುವುದು. ಶಾಲೆಯ ಮುಂಭಾಗಕ್ಕೆ ಮಾವಿನ ತಳಿರು ತೋರಣ ಕಟ್ಟಿ ಅಲಂಕಾರಗೊಳಿಸಿದರೆ ಶಾಲೆಗೆ ಹಬ್ಬದ ಕಳೆ ಬಂದೇ ಬಿಡುತ್ತೆ. ಜತೆಗೆ ಕೆಲವರು ಕೈಯಲ್ಲಿ ರಾಗಿ ಗಂಜಿ ಹಿಡಿದು ಬಣ್ಣ ಬಣ್ಣದ ಹಾಳೆಯನ್ನು ಉದ್ದನೇ ದಾರಕ್ಕೆ ಅಂಟಿಸಿ ಶಾಲೆ ಕಟ್ಟದ ಮೇಲಿನ ಗೂಟದಿಂದ ಶಾಲಾ ದ್ವಾರದವರೆಗೂ ಬಿಗಿಯುವರು. ಈ ಹರಸಾಹಸ ಮುಗಿಯುವ ಹೊತ್ತಿಗೆ ಶಾಲೆಯ ಸಮಯ ಮುಗಿಯುತ್ತದೆ. ನಾಳೆಗಾಗಿ ಎಲ್ಲರೂ ಕೆಲಸ ಮಾಡಿ ಹೊರಡುವಾಗ ಅವರ ಮುಖದಲ್ಲಿ ಆಯಾಸ ಇರದೇ ಸಂತೋಷ ಮಾತ್ರ ಉಕ್ಕಿ ಹರಿಯುತ್ತಿತ್ತು. ಫೋಟೋ ತರಲು ಪೇಟೆಗೆ ಹೋಗಿದ್ದ ಪಿಟಿ, ಹೆಡ್ ಮಾಸ್ಟರ್ ಶಾಲೆಗೆ ಬರುತ್ತಿದ್ದಂತೆಯೇ ಇಬ್ಬರಿಗೂ ಆಶ್ಚರ್ಯ! ತಮ್ಮ ಅನುಪಸ್ಥಿತಿಯಲ್ಲಿಯೂ ಶಾಲೆ ಸಕಲ ಸಿದ್ಧತೆಗಳೊಂದಿಗೆ ನಾಳಿನ ಅಂದರೆ ಸ್ವಾತಂತ್ರ್ಯ ದಿನದ ಹಬ್ಬಕ್ಕೆ ಅಲಂಕಾರಗೊಂಡು ಜಗಮಗಿಸುತ್ತಿದೆ. ಮಕ್ಕಳ ಪ್ರತಿ ಕಣದಲ್ಲೂ ದೇಶಪ್ರೇಮದ ಗಂಧ. ʼಸರ್ವಜನಾಂಗದ ಶಾಂತಿಯ ತೋಟದ ಹೂಗಳು ಅವರುʼ ಧರ್ಮ, ಜಾತಿಗಳ ಚಿಕ್ಕ ನೆರಳೂ ಇಲ್ಲದೆ ಒಟ್ಟಾಗಿ ರಾಷ್ಟ್ರೀಯ ಹಬ್ಬದ ತಯಾರಿಲ್ಲಿದ್ದ ಮಕ್ಕಳ ಕಂಡ ಶಿಕ್ಷಕರ ಉದ್ಘಾರ!





