ಜಮೀನಿನ ಇಂಗು ಗುಂಡಿಯಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಅಂಡೆ ಕುರುಬನ ದೊಡ್ಡಿ ಗ್ರಾಮದ ಗುರುಸ್ವಾಮಿ (50) ಬಂಧಿತ ಆರೋಪಿ.
ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಡೆ ಕುರುಬನ ದೊಡ್ಡಿ ಗ್ರಾಮದ ಗುರುಸ್ವಾಮಿ ತನ್ನ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿರುವ ಬಗ್ಗೆ ಬಂದ ದೂರು ಆಧರಿಸಿ ಹನೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ಪ್ರಸಾದ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಜಮೀನಿನಲ್ಲಿ ಬೆಳೆದಿದ್ದ 25 ಗಾಂಜಾ (20 ಕೆಜಿ) ಗಿಡಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಪೇದೆಗಳಾದ ದೊಡ್ಡ ವೀರಶೆಟ್ಟಿ, ರಾಘವೇಂದ್ರ, ಮಂಜುನಾಥ್, ಮಣಿಕಂಠ, ರಾಜು, ಚಾಲಕ ಶಿವಕುಮಾರ್, ಲೊಕ್ಕನಹಳ್ಳಿ ವೈದ್ಯಾಧಿಕಾರಿ ಎಸ್ ಎಸ್ ಪ್ರಸಾದ್, ಬೈಲೂರು ಪಿಡಿಒ ರಾಜು ಇತರರು ಪಾಲ್ಗೊಂಡಿದ್ದರು.

ರಕ್ತ ಚಂದನ ಸಾಗಾಟ; ಮೂವರ ಬಂಧನ
ಅಕ್ರಮವಾಗಿ ರಕ್ತ ಚಂದನ ಸಾಗಾಣಿಕೆ ಮಾಡುತ್ತಿದ್ದ ಮೂವರನ್ನು ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದಲ್ಲಿ ಅರಣ್ಯ ಸಂಚಾರಿ ದಳದ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬೆಂಗಳೂರು ವಿಜಯನಗರ ಬಡಾವಣೆಯ ಅರುಣ್ ಕುಮಾರ್ (26), ನಾಯಂಡಳ್ಳಿಯ ಆನಂದ (46) ಹಾಗೂ ತುಮಕೂರು ಜಿಲ್ಲೆಯ ಸೋಮೇಶ್ವರಪುರಂನ ತ್ರಬುದುಲ್ ಮುನಾಫ್ (52) ಬಂಧಿತರು. ಇವರಿಂದ ಸುಮಾರು 284 ಕೆ.ಜಿ 14 ನಾಟ ರಕ್ತ ಚಂದನ, ಸ್ಯಾಂಟ್ರೋ ಕಾರು ಹಾಗೂ ಮೂರು ಮೊಬೈಲ್, 1,320 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಗೃಹಲಕ್ಷ್ಮಿ ಅರ್ಜಿಗೆ ಯಾರೂ ಹಣ ಕೊಡಬೇಡಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್
ರಕ್ತಚಂದನ ಮರದ ನಾಟಗಳನ್ನು ಸಾಗಾಣಿಕೆ ಮಾಡುತ್ತಿರುವ ಮಾಹಿತಿ ಆಧರಿಸಿ ಕೊಳ್ಳೆಗಾಲದ ಅರಣ್ಯ ಸಂಚಾರಿ ದಳದ ಪೊಲೀಸರು ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಮೇತ ಹಿಡಿದಿದ್ದಾರೆ. ಆರೋಪಿಗಳನ್ನು ಆರ್.ಎಫ್.ಒ ವಶಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಅರಣ್ಯ ಸಂಚಾರಿ ದಳದ (ಸಿ.ಐ.ಡಿ) ಸಬ್ ಇನ್ಸ್ಪೆಕ್ಟರ್ ವಿಜಯರಾಜ್, ಹೆಡ್ ಕಾನ್ಸ್ಟೆಬಲ್ಗಳಾದ ತಖೀಉಲ್ಲಾ, ರಾಮಚಂದ್ರ, ಶಂಕರ್, ಸ್ವಾಮಿ, ಬಸವರಾಜು, ಚಾಲಕ ಪ್ರಭಾಕರ್, ಪೇದೆ ಬಸವರಾಜು ಭಾಗವಹಿಸಿದ್ದರು.




