ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕಿ ಅನುಶ್ರೀ ಮಡಿವಾಳರ (7) ಭಾನುವಾರ ಶವವಾಗಿ ಪತ್ತೆಯಾಗಿದ್ದಾಳೆ.
ಕಿನ್ನಾಳ ಗ್ರಾಮದಲ್ಲಿ ವಾಸವಾಗಿದ್ದ ರಾಘವೇಂದ್ರ ಮಡಿವಾಳರ ದಂಪತಿಗಳು ಮಗಳು ಅನುಶ್ರೀಯನ್ನು ಅಜ್ಜಿ ಬಳಿ ಬಿಟ್ಟು ಕೂಲಿ ಕೆಲಸಕ್ಕೆ ಹೋಗಿದ್ದರು. ಏ.19ರಂದು ಮಧ್ಯಾಹ್ನ ಆಟವಾಟಲು ಅಂತ ಹೊರಗಡೆ ಹೋದ ಬಾಲಕಿ ಅನುಶ್ರೀ ಮರಳಿ ಮನೆಗೆ ಬರಲಿಲ್ಲ. ಗಾಬರಿಗೊಂಡ ಪೋಷಕರು ಕೊಪ್ಪಳ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು. ಭಾನುವಾರ (ಏ.21) ರಂದು ಅವರ ಮನೆ ಹತ್ತಿರದ ಪಾಳು ಜಾಗದಲ್ಲಿ ಚೀಲದಲ್ಲಿ ಶವವಾಗಿ ಬಾಲಕಿಯ ದೇಹ ಪತ್ತೆಯಾಗಿದೆ.
ಪಾಳು ಜಾಗದಲ್ಲಿ ಚೀಲದಿಂದ ವಾಸನೆ ಬರುತ್ತಿರುವುದನ್ನು ಗ್ರಹಿಸಿದ ಜನರಿಗೆ ಬಾಲಕಿ ಶವ ಕಂಡಿದೆ. ಬಾಲಕಿ ಶವ ಪತ್ತೆಯಾಗಿರುವ ಸ್ಥಳ ಕಿನ್ನಾಳದ ಗ್ರಾಮದ ಮಧ್ಯದಲ್ಲಿದೆ. ಅದರ ಸುತ್ತಲೂ ಮನೆಗಳಿವೆ. ಇಂಥ ಸ್ಥಳದಲ್ಲಿ ಶವ ಕಂಡಿದ್ದು ಜನರಲ್ಲಿ ಆಘಾತ ಮೂಡಿಸಿದೆ.
ಬಾಲಕಿ ಪತ್ತೆಗಾಗಿ ಕಿನ್ನಾಳ ಪಂಚಾಯಿತಿಯ ವಾಹನಗಳ ಮೈಕ್ನಲ್ಲಿ ವ್ಯಾಪಕ ಪ್ರಚಾರ ಮಾಡಲಾಗಿತ್ತು. ಗ್ರಾಮದಲ್ಲಿರುವ ಕೆಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗಿತ್ತು. ಆದರೂ ಬಾಲಕಿಯ ಸುಳಿವು ಸಿಕ್ಕಿರಲಿಲ್ಲ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಹೆಚ್ಚುವರಿ ಎಸ್.ಪಿ. ಹೇಮಂತಕುಮಾರ್, ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಸುರೇಶ ಡಿ. ಸೇರಿದಂತೆ ಹಲವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
“ಬಾಲಕಿ ಅನುಶ್ರೀಯನ್ನು ಕೊಲೆ ಮಾಡಿ ಚೀಲದಲ್ಲಿ ತುಂಬಿಡಲಾಗಿದೆ. ಪಾಳು ಮನೆಯೊಂದರಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಬಳ್ಳಾರಿಯಿಂದ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ತಡರಾತ್ರಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಈದಿನ ಸಂದರ್ಶನ | ಬದ್ಧತೆ ಮೈಗೂಡಿಸಿಕೊಂಡು ಓದಿದರೆ ಕೋಚಿಂಗ್ ಅಗತ್ಯವಿಲ್ಲ
ಘಟನೆ ಕುರಿತು ಪ್ರತಿಕ್ರಿಯಿಸಿದ ಎಸ್.ಪಿ. ಯಶೋಧಾ “ಕೊಲೆ ಬಗ್ಗೆ ಕೆಲವರ ಮೇಲೆ ಸಂಶಯವಿದ್ದು ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು. ಘಟನೆಗೆ ಕಾರಣವೇನು ಎನ್ನುವುದು ಸದ್ಯಕ್ಕೆ ಗೊತ್ತಾಗಿಲ್ಲ” ಎಂದು ತಿಳಿಸಿದರು.





