ರಾಮನಗರದ ಎಪಿಎಂಸಿ ಮಾರುಕಟ್ಟೆಯಲ್ಲಿರುವ ರೈತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕ ಕುಮಾರಸ್ವಾಮಿ, ಫೆಬ್ರವರಿ.4ರಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ‘ಜಿಲ್ಲಾಧಿಕಾರಿ ಹಠಾವೋ, ರೈತ ಬಚಾವೋ’ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ರೈತರ ಬದುಕು ಅತಂತ್ರವಾಗಿದ್ದು ಸರ್ಕಾರ ವಿರೋಧಿ ನೀತಿಗಳಿಂದ ಸಂಕಷ್ಟಕ್ಕೆ ದೂಡಿದೆ. ಕೊಟ್ಟ ಭರವಸೆ ಈಡೇರಿಸದೆ ಭೂ ಕಬಳಿಕೆ ನಡೆಸುತ್ತಿರುವ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದು ಜಿಲ್ಲಾಧಿಕಾರಿಯವರು ಸೆಕ್ಷನ್ 144 ವಿಧಿಸಿ ಹೋರಾಟ ಹತ್ತಿಕ್ಕುವ ಯತ್ನದಲ್ಲಿದ್ದಾರೆ ಎಂದು ಆರೋಪಿಸಿದರು.
ಜನಪರ, ರೈತಪರ ಎಂದ ಸರ್ಕಾರ ಬದುಕನ್ನೇ ಅಸ್ಥಿರಗೊಳಿಸುವ ಮಟ್ಟಿಗೆ ಮುಂದಾಗಿದೆ. ಕೊಟ್ಟ ಭರವಸೆಗಳು ಈಡೇರಿಲ್ಲ, ಇದುವರೆಗೆ ರೈತ ವಿರೋಧಿ ಕಾಯ್ದೆ ವಾಪಸ್ ಪಡೆದಿಲ್ಲ, ಕಾರ್ಪೋರೆಟ್ ಕುಳಗಳಿಗೆ ಮಣೆ ಹಾಕಿದೆ. ರೈತರ ಸಂಕಷ್ಟಗಳು ಬಗೆ ಹರಿದಿಲ್ಲ, ವಿನಾಕಾರಣ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಇದರ ಜೊತೆಗೆ ಬೆಲೆ ಏರಿಕೆ ಜನಸಾಮಾನ್ಯರ ಬದುಕನ್ನು ಹಾಳುಗೆಡವಿದೆ. ಬಿಡದಿ ಹೋಬಳಿಯ ಹಲವೆಡೆ ಜಿಲ್ಲಾಧಿಕಾರಿಗಳ ಸಂಬಂಧಿಕರ ಹೆಸರಿನಲ್ಲಿ ಬೇನಾಮಿ ಭೂಮಿ ನೋಂದಣಿಯಾಗಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಉಪಾಧ್ಯಕ್ಷ ಕೆ. ಮಲ್ಲಯ್ಯ ಮಾತನಾಡಿ, ಬಿಡದಿ ಹೋಬಳಿಯ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಿ ಸುಮಾರು 9600 ಎಕರೆ ಭೂಮಿಯನ್ನು ಎಐಸಿಟಿಗಾಗಿ ಸ್ವಾಧೀನ ಮಾಡಿಕೊಳ್ಳಲು ಮುಂದಾಗಿದೆ. ಈ ಸಂಬಂಧ ಸರ್ಕಾರ, ಜಿಲ್ಲಾಡಳಿತ ಈಗಾಗಲೇ 2600 ಎಕರೆ ಸರ್ಕಾರಿ ಭೂಮಿ ಯೋಜನೆಯ ಉದ್ದೇಶಕ್ಕೆ ಮೀಸಲಿಡಲಾಗಿದೆ ಎಂದು ಹೇಳಿತ್ತು. ಆದರೀಗ, 720 ಎಕರೆ ಮಾತ್ರ ಇದೆ ಎಂದು ಹೇಳುತ್ತಿದೆ. ಸಾರ್ವಜನಿಕವಾಗಿ ಗೊಂದಲ ಮೂಡಿಸಿರುವುದರಿಂದ ಕೂಡಲೇ ಯೋಜನಾ ಪ್ರದೇಶದ ಭೂಮಿ ಮಾಹಿತಿಯನ್ನು ಅಂಕಿ ಅಂಶ ಸಮೇತ ಸ್ಪಷ್ಟಪಡಿಸಬೇಕು ಈ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮ ದಿನೋತ್ಸವ
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ತಿಮ್ಮೆಗೌಡ, ಕಾರ್ಯಧ್ಯಕ್ಷ ಪುಟ್ಟಸ್ವಾಮಿ, ಬೆಂಗಳೂರು ವಿಭಾಗದ ಅಧ್ಯಕ್ಷ ಚಂದ್ರಶೇಖರ್, ಹೋರಾಟಗಾರ ಪ್ರಶಾಂತ್ ಹೊಸದುರ್ಗ, ಜೈ ಭೀಮ್ ಸಂಘಟನೆಯ ಕಿರಣ್ ಸಾಗರ್, ಚೆಲುವರಾಜು, ಭೂ ಹಿತ ರಕ್ಷಣಾ ವೇದಿಕೆ ನಾಗರಾಜ್, ಶಿವು ಸೇರಿದಂತೆ ಇನ್ನಿತರರು ಇದ್ದರು.





