ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳು ಭರ್ತಿ ಸೇರಿದಂತೆ ಪ್ಯಾಸೆಂಜರ್ ರೈಲು, ಸ್ಲಿಪ್ಪರ್ ಕೋಚಗಳ್ ಸಂಖ್ಯೆ ಹೆಚ್ಚಿಸಲು ಒತ್ತಾಯಿಸಿ ಶಹಾಬಾದ್ ರೈಲು ನಿಲ್ದಾಣ ಎದುರುಗಡೆ ಎಐಡಿಸ್ಒ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಪ್ರತಿಭಟನೆ ನಡೆಸಿದ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಬರೆದ ಹಕ್ಕೋತ್ತಾಯ ಪತ್ರವನ್ನು ಶಹಾಬಾದ ರೈಲ್ವೆ ಸ್ಟೇಷನ್ ಮ್ಯಾನೇಜರ್ ಅವರಿಗೆ ಸಲ್ಲಿಸಿದರು.
ಈ ವೇಳೆ ಎ.ಐ.ಡಿ.ವೈ.ಓ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್.ಹೆಚ್ ಮಾತನಾಡಿ, “ಪ್ರಯಾಣವು ಜೀವನದ ಅನಿವಾರ್ಯ ಮೂಲಭೂತ ಅವಶ್ಯಕತೆಯಾಗಿದೆ. ಈಗಿನ ಕಾಲದಲ್ಲಿ ಜೀವನೋಪಾಯಕ್ಕಾಗಿ ಗ್ರಾಮೀಣ ಭಾಗದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ನಮ್ಮ ದೇಶದ ಆರ್ಥಿಕ ಸ್ಥಿತಿ ಹೇಗಿದೆ ಎಂದರೆ ಹೆಚ್ಚಿನ ಜನರು ಕಾಯ್ದಿರಿಸದ ಸಾಮಾನ್ಯ ದರ್ಜೆ(UR) ಮತ್ತು 2ನೇ ದರ್ಜೆಯ ಸ್ವೀಪರ್ ಕೋಚ್ ಗಳು (SL) ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಆದರೆ ಕ್ರಮೇಣ ಸಾಮಾನ್ಯ ಮತ್ತು ಸ್ವೀಪರ್ ಕೋಚ್ ಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ. ಮತ್ತೊಂದೆಡೆ ಎಸಿ ಕೋಚ್ಗಳನ್ನು ಹೆಚ್ಚಿಸಲಾಗುತ್ತಿದೆ. ಇದರಿಂದಾಗಿ ಸಾಮಾನ್ಯ ಕಾರ್ಮಿಕ ವರ್ಗದ ಜನರಿಗೆ ಅನ್ಯಾಯವಾಗುತ್ತಿದೆ” ಎಂದು ದೂರಿದರು.
“ದೇಶದಲ್ಲಿ ಕೋಟ್ಯಾಂತರ ಯುವಕರು ಹುದ್ದೆಗಾಗಿ ಕಾಯಿತಿದ್ದಾರೆ. ಇನ್ನೊಂದು ಕಡೆ ರೈಲ್ವೆಯಲ್ಲಿ 3 ಲಕ್ಷಕ್ಕೂ ಅಧಿಕ ಹುದ್ದೆ ಖಾಲಿ ಇವೆ. ಈ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿ ಸಾಮಾನ್ಯ ಜನರಿಗೆ ಅನೂಕುಲವಾಗುವ ರೀತಿಯಲ್ಲಿ ರೈಲ್ವೆ ಸೌಲಭ್ಯ, ರೈಲ್ವೆ ಸುರಕ್ಷತೆ ಹೆಚ್ಚಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? 400 ಸೀಟು ಗೆಲ್ಲುವುದಾದರೆ ಬೇರೆ ಪಕ್ಷಗಳ ಸಂಪರ್ಕಿಸುವುದೇಕೆ? – ಬಿಜೆಪಿಗೆ ತೆಲಂಗಾಣ ಸಿಎಂ ಪ್ರಶ್ನೆ
ಪ್ರತಿಭಟನೆಯಲ್ಲಿ ಎಐಡಿಎಸ್ಒ ನಗರ ಅಧ್ಯಕ್ಷ ರಘು ಪವಾರ, ಕಾರ್ಯದರ್ಶಿ ರಮೇಶ ದೇವಕರ್, ಸದಸ್ಯರಾದ ದೇವರಾಜ ಮೀರಲಕರ್, ಆನಂದ ದಂಡಗುಲಕರ್, ಶಾಮರಾವ್ ಪವಾರ್, ಕಿರಣ ಮಾನೆ, ಶಿವುಕುಮಾರ ಪವಾರ ಸೇರಿದಂತೆ ಇತರರಿದ್ದರು.




