ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಎಐಡಿವೈಒ ಸಂಘಟನೆಯಿಂದ ವಿಜಯಪುರ ನಗರದಲ್ಲಿ ಸಹಿ ಅಭಿಯಾನ ಆರಂಭಿಸಲಾಯಿತು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಮಯ್ಯ ಹಿರೇಮಠ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ್ದು, “ಯುವಜನರು ನಿರುದ್ಯೋಗದಿಂದ ಕಂಗಾಲಾಗಿದ್ದಾರೆ. ಆಳುವ ಸರ್ಕಾರಗಳು ಬಿಕ್ಕಟ್ಟನ್ನು ಪರಿಹರಿಸುವ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಾರ್ಪೊರೇಟ್ ಪರ ನೀತಿಗಳನ್ನು ಜಾರಿಗೊಳಿಸುತ್ತ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿವೆ. ನಿರುದ್ಯೋಗ ಮತ್ತು ಭ್ರಷ್ಟಾಚಾರ ತೀವ್ರವಾಗಿ ಹೆಚ್ಚುತ್ತಿವೆ” ಎಂದು ಆರೋಪಿಸಿದರು.
“ಎಸ್ಎಸ್ಸಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಉದ್ಯೋಗ ಆಕಾಂಕ್ಷಿಗಳು ಉತ್ತರಾಖಂಡದ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿ ಯುವಜನರು ಬೀದಿಗಳಿದಿದ್ದಾರೆ. ಲಡಾಖ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿಯೂ ನಿರುದ್ಯೋಗ ಪ್ರಮುಖ ಸಮಸ್ಯೆಯಾಗಿದೆ” ಎಂದರು.
ಎಐಡಿವೈಒ ಜಿಲ್ಲಾಧ್ಯಕ್ಷ ಶ್ರೀಕಾಂತ್ ಕೊಂಡುಗುಳಿ ಮಾತನಾಡಿ, “ಕೇಂದ್ರ ಸರ್ಕಾರ 78 ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ 9.79 ಲಕ್ಷಕ್ಕೂ ಅಧಿಕ ಉದ್ಯೋಗಗಳು ಖಾಲಿ ಇರುವುದಾಗಿ ಹಣಕಾಸು ಸಚಿವಾಲಯದ ವರದಿ ಬಹಿರಂಗಪಡಿಸಿದೆ. ರೈಲ್ವೆ ಇಲಾಖೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎಲ್ಲ ರಾಜ್ಯಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಕರ್ನಾಟಕದಲ್ಲಿಯೂ ಹೀಗೆಯೇ ಇದೆ. ಆದರೂ ರಾಜ್ಯ ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ” ಎಂದು ದೂರಿದರು.
“ರಾಜ್ಯದ 43 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಬಿದ್ದಿವೆ. ಅವುಗಳ ನೇಮಕಕ್ಕೆ ಪ್ರಯತ್ನ ನಡೆದಿಲ್ಲ. ಒಂದಿಲ್ಲೊಂದು ನೆಪ ಹೇಳುತ್ತ ನೇಮಕಾತಿಗಳನ್ನು ಮುಂದೂಡಲಾಗುತ್ತಿದೆ. ಈ ಕೂಡಲೇ ಭರ್ತಿಗೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿದ್ದೀರಾ? ಐಕ್ಯತೆಗೆ ಸಾಕ್ಷಿಯಾದ ಗುರ್ಲಾಪೂರ: ಐತಿಹಾಸಿಕ ರೈತ ಹೋರಾಟಗಳ ಪಟ್ಟಿ ಸೇರಿದ ಕಬ್ಬು ಬೆಳೆಗಾರರ ಧರಣಿ
“ನಿರುದ್ಯೋಗಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಲೇ ಇವೆ. 2014ರಲ್ಲಿ ಎರಡು ಕೋಟಿ ಉದ್ಯೋಗಗಳ ಭರವಸೆ ನೀಡಿದ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ. ಅಸ್ತಿತ್ವದಲ್ಲಿರುವ ಉದ್ಯೋಗಗಳನ್ನು ವ್ಯವಸ್ಥಿತವಾಗಿ ತೆಗೆದು ಹಾಕಿದೆ. ಖಾಲಿ ಉದ್ಯೋಗಗಳನ್ನು ರದ್ದುಗೊಳಿಸಿದೆ” ಎಂದು ಕುಟುಕಿದರು.
ಈ ವೇಳೆ ಚೇತನ್ ರಾಠೋಡ, ಪ್ರದೀಪ ಕಂಠೀಕರ್, ಶಶಿಕುಮಾರ ತೋಟದ, ಅರವಿಂದ ರಾಠೋಡ್, ರವಿ ಹೊಸಮನಿ, ಶೋಭಾ ಬಿದರಿ, ಕಾವೇರಿ ಚೌಹಾಣ್, ಮಂಜುನಾಥ ಬಬಲೇಶ್ವರ, ರಿಯಾಜ್ ಹಿಪ್ಪರಗಿ, ದರ್ಶನ ಉಪ್ಪಾರ, ಸಚಿನ ದೊಡ್ಡಮನಿ ಸೇರಿದಂತೆ ನೂರಾರು ಯುವಜನರು ಸಹಿ ಮಾಡುವ ಮೂಲಕ ಅಭಿಯಾನದಲ್ಲಿ ಭಾಗವಹಿಸಿದ್ದರು.





