2023ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಹೆಸರು ಅಳಿಸಲು ಅರ್ಜಿ ಸಲ್ಲಿಸಿದ್ದ ಅರ್ಜಿದಾರರಿಗೆ ಪ್ರತಿ ಅರ್ಜಿಗೂ 80 ರೂ. ನೀಡಲಾಗಿದೆ ಎಂಬ ಸಂಗತಿಯನ್ನು ಎಸ್ಐಟಿ ಕಂಡುಹಿಡಿದೆ. ಒಟ್ಟು 6,018 ಮತದಾರರ ಹೆಸರನ್ನು ಅಳಿಸಲು ಅರ್ಜಿ ಸಲ್ಲಿಸಲಾಗಿದ್ದು, ಈ ಅರ್ಜಿ ಹಾಕಿದ್ದಕ್ಕಾಗಿ ಸುಮಾರು 4.8 ರೂ. ಪಾವತಿಸಲಾಗಿದೆ ಎಂದು ತನಿಖೆಯಿಂದ ಬಹಿರಂಗವಾಗಿದೆ.
2022ರ ಡಿಸೆಂಬರ್ ಮತ್ತು 2023ರ ಫೆಬ್ರವರಿ ನಡುವೆ ಆಳಂದ ಕ್ಷೇತ್ರದಲ್ಲಿ ಮತದಾರರ ಹೆಸರು ಅಳಿಸಲು ಕೋರಿ 6,018 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಅರ್ಜಿಗಳನ್ನು ಕಲಬುರಗಿ ಜಿಲ್ಲಾ ಕೇಂದ್ರದಲ್ಲಿರುವ ಡೇಟಾ ಸೆಂಟರ್ನಿಂದ ಸಲ್ಲಿಸಲಾಗಿದೆ. ಇದರ ಹಿಂದೆ ಡೇಟಾ ಸೆಂಟರ್ ಮತ್ತು ಬಿಜೆಪಿ ನಾಯಕರೊಬ್ಬರ ಸಹಾಯಕರ ಕೈವಾಡವಿದೆ ಎಂದು ಎಸ್ಐಟಿ ಕಂಡುಕೊಂಡಿರುವುದಾಗಿ ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಆಳಂದ ಮತಗಳವು ಪ್ರಕರಣವು 2023ರಲ್ಲಿಯೇ ಬೆಳಕಿಗೆ ಬಂದಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಕರಣದ ತನಿಖೆಯನ್ನು ‘ಸಿಐಡಿ’ಗೆ ವಹಿಸಲಾಗಿತ್ತು. ಅಂದಿನಿಂದ, ಸಿಐಡಿ ತನಿಖೆ ನಡೆಸುತ್ತಿತ್ತು. ಆದರೆ, ತನಿಖೆಗೆ ಚುನಾವಣಾ ಆಯೋಗ ಅಗತ್ಯ ಮಾಹಿತಿಗಳನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಲಾಗಿತ್ತು. ಈ ನಡುವೆ, ಇತ್ತೀಚೆಗೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆಳಂದದಲ್ಲಿ ನಡೆದಿರುವ ಮತಗಳವು ಕುರಿತು ಗಮನ ಸೆಳೆದಿದ್ದರು. ಚುನಾವಣಾ ಆಯೋಗದ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಬೆನ್ನಲ್ಲೇ, ಮತಗಳವು ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರವು ಎಸ್ಟಿಐ ರಚಿಸಿತು.
ಸೆಪ್ಟೆಂಬರ್ 26ರಂದು ಪ್ರಕರಣದ ತನಿಖೆಯನ್ನು ಸಿಐಡಿಯಿಂದ ವಹಿಸಿಕೊಂಡ ಎಸ್ಐಟಿ, ತನಿಖೆಯನ್ನು ಚುರುಕುಗೊಳಿಸಿತ್ತು. ಅಕ್ಟೋಬರ್ 17ರಂದು ಬಿಜೆಪಿ ನಾಯಕ ಸುಭಾಷ್ ಗುತ್ತೇದಾರ್, ಅವರ ಪುತ್ರರಾದ ಹರ್ಷಾನಂದ ಮತ್ತು ಸಂತೋಷ್ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಮಲ್ಲಿಕಾರ್ಜುನ್ ಮಹಾಂತಗೋಲ್ ಅವರ ಮನೆ ಮೇಲೆ ದಾಳಿ ನಡೆಸಿದ್ದ ಎಸ್ಐಟಿ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದರು. 7 ಲ್ಯಾಪ್ಟಾಪ್ಗಳು ಮತ್ತು ಹಲವು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದರು ಎಂದು ವರದಿಯಾಗಿದೆ.




