ಆಲೂರು ತಾಲೂಕಿನ ಕುಂದೂರು ಹೋಬಳಿಗೆ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯನ್ನು ಮಂಜೂರು ಮಾಡಿಸಿದ್ದು, ಶಾಲಾ ಕಟ್ಟಡದ ಅಲಭ್ಯತೆಯಿಂದಾಗಿ ಪ್ರಸ್ತುತ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ನಡೆಯುವ ತರಗತಿಗಳಿಗೆ ಶಾಸಕ ಸಿಮೆಂಟ್ ಮಂಜು ಅವರು ಚಾಲನೆ ನೀಡಿ ಉದ್ಘಾಟಿಸಿದರು. ಶೀಘ್ರವಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ನೂತನ ಕಟ್ಟಡದ ನಿರ್ಮಾಣ ಪ್ರಾರಂಭಿಸುವ ಭರವಸೆ ನೀಡಿದರು.
“ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು, ಶಿಕ್ಷಣವೇ ಶಕ್ತಿ ಎಂಬ ದಾರ್ಶನಿಕರ ಮಾತನ್ನು ಉಲ್ಲೇಖಿಸುತ್ತಾ ಜೀವನದಲ್ಲಿ ನಾವು ಪಡೆದ ಶಿಕ್ಷಣವು ಉನ್ನತಿಗೆ ಕಾರಣವಾಗಬೇಕೇ ಹೊರತು ಅವನತಿಗೆ ಮೂಲವಾಗಬಾರದು. ಶಿಕ್ಷಣವು ಕೇವಲ ಉದ್ಯೋಗ ಪಡೆಯಲು ಅಲ್ಲ, ಪ್ರಜ್ಞಾವಂತ, ಸುಶಿಕ್ಷಿತ ನಾಗರೀಕನಾಗಿ ಬದುಕಿ ಬಾಳಲು ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮಾಹಿತಿ ತುಂಬಿಸುವ ಕೆಲಸ ಮಾಡದೇ ಜೀವನದ ಪ್ರತಿ ಹಂತದಲ್ಲಿಯೂ ಸುಖ ದುಃಖಗಳನ್ನು ಸಮಾನವಾಗಿ ಎದುರಿಸುವ ತಾನು ಬದುಕಿ ಪರರನ್ನು ಬಾಳ ಬಿಡುವ ಯೋಗ್ಯ ಪ್ರಜೆಗಳನ್ನು ನಿರ್ಮಾಣ ಮಾಡಲಿ” ಎಂದರು.
ಇದನ್ನೂ ಓದಿ: ಹಾಸನ | ಕಾರ್ಮಿಕರ ಮೇಲಿನ ಶೋಷಣೆ ತೊಲಗಿಸುವುದೇ ಸಿಐಟಿಯುನ ಸಾಂವಿಧಾನಿಕ ಹೋರಾಟ: ರಾಷ್ಟ್ರೀಯ ಅಧ್ಯಕ್ಷೆ ಹೇಮಲತಾ
ಈ ಸಂದರ್ಭದಲ್ಲಿ ಹಾಸನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೌಸರ್ ಅಹಮದ್, ಬಿಇಒ ಕೃಷ್ಣೇಗೌಡ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ದೂತ್ ಪೀರ್, ಮೊರಾರ್ಜಿ ದೇಸಾಯಿ ಶಾಲೆ ಪ್ರಾಂಶುಪಾಲ ಪ್ರಕಾಶ್, ಸಿಬ್ಬಂದಿಗಳು, ಶಾಲಾಸ್ಥ ಳೀಯ ಮುಖಂಡರಾದ ಪ್ರತಾಪ್, ಶಿಕ್ಷಕ ಮಂಜುನಾಥ್, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.





