ಕಲಬುರಗಿ ಜಿಲ್ಲೆಯ ಕೋಟನೂರ (ಡಿ) ಗ್ರಾಮದಲ್ಲಿ ಲುಂಬುಣಿ ಉದ್ಯಾನದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಕಿಡಿಗೇಡಿಗಳು ಅಪಮಾನಗೊಳಿಸಿದ ಕೃತ್ಯ ಅಸಂಖ್ಯ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ಔರಾದ ತಾಲೂಕು ದಲಿತ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ದಲಿತ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದ ಬಸ್ ನಿಲ್ದಾಣ ಎದುರಿನ ಮುಖ್ಯರಸ್ತೆ ಮೇಲೆ ಟೈರ್ ಗೆ ಬೆಂಕಿ ಹಚ್ಚಿ, ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ತಹಸೀಲ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಶೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಅವರಿಗೆ ಸಲ್ಲಿಸಿದರು
“ದೇಶಕ್ಕೆ ಸಂವಿಧಾನ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ ಮಾಡಿರುವ ಘಟನೆ ಹಾಗೂ ಜಿಲ್ಲೆಯ ಹುಮನಾಬಾದ ತಾಲೂಕಿನ ಹುಣಸಗೇರಾ ಗ್ರಾಮದ ದಲಿತ ವಿದ್ಯಾರ್ಥಿಗೆ ಕೋಮುವಾದಿ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಒತ್ತಾಯಪೂರ್ವಕವಾಗಿ ʼಜೈ ಶ್ರೀರಾಮʼ ಘೋಷಣೆ ಕೂಗುವಂತೆ ಒತ್ತಾಯ ಮಾಡಿದ ಘಟನೆಗಳು ಸಮಾಜಘಾತುಕ ಶಕ್ತಿಗಳಿಂದ ನಡೆದಿವೆ” ಎಂದು ಕಿಡಿಕಾರಿದರು.

ಒಕ್ಕೂಟದ ರಾಹುಲ್ ಖಂದಾರೆ, ಸುನೀಲ ಮಿತ್ರಾ, ರತ್ನದೀಪ ಕಸ್ತೂರೆ, ಶಿವು ಕಾಂಬಳೆ ಮಾತನಾಡಿ, “ಕೋಮುವಾದಿ ಶಕ್ತಿಗಳಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಪದೇ ಪದೇ ಅವಮಾನಿಸುವ ದುಷ್ಕೃತ್ಯ ಎಸಗಲಾಗುತ್ತಿದೆ. ಸಂವಿಧಾನದಿಂದಲೇ ಎಲ್ಲಾ ಹಕ್ಕುಗಳನ್ನು ಪಡೆಯುವ ಇವರು ಸಂವಿಧಾನ ಶಿಲ್ಪಿಯನ್ನೇ ಗುರಿಯಾಗಿಸಿ ಅವಮಾನಿಸುತ್ತಿರುವುದು ದೇಶಕ್ಕೆ ಮಾರಕವಾಗಿದೆ. ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಎಚ್ಚರವಹಿಸಬೇಕು. ಕೃತ್ಯದಲ್ಲಿ ಭಾಗಿಯಾದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು” ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕೇಸರಿ ಧ್ವಜಕ್ಕೆ ಅಪಮಾನ ಆರೋಪ; ಮುಸ್ಲಿಂ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಝರೆಪ್ಪಾ ವರ್ಮಾ, ಧನಾಜಿ ಕಾಂಬಳೆ, ಧನರಾಜ ಮುಸ್ತಾಪುರೆ, ಪ್ರಕಾಶ ಕಾಂಬಳೆ, ಆನಂದ ಕಾಂಬಳೆ, ದಿನೇಶ ಶಿಂಧೆ, ಗಣಪತಿ ವಾಸುದೇವ, ದಿಲೀಪ ಸೋನೆ, ಪಂಡರಿ ಕಸ್ತೂರೆ, ಪ್ರಕಾಶ ಕುಂದೆ, ತುಕರಾಮ ಹಸನ್ಮುಖಿ, ಜೈಪ್ರಕಾಶ ಅಷ್ಟೂರೆ, ಸೂರ್ಯಕಾಂತ ಕಾಂಬಳೆ, ವಿಲಾಸ ಹಸನ್ಮುಖಿ, ಪಂಡರಿ ವಾಸುದೇವ, ಮಾರುತಿ ಜಗದಾಳೆ, ವಿನೋದ ಡೋಳೆ, ಸಂತೋಷ ಕಾಂಬಳೆ ಸೇರಿದಂತೆ ಅನೇಕರಿದ್ದರು.





