ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಅಂಬೇಡ್ಕರ್ ಯುವಸೇನೆ ಉಡುಪಿ ನಗರದ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿ, ವಕೀಲನ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದವರು, ನ್ಯಾಯಾಂಗದ ಗೌರವ ಹಾಳುಮಾಡಿದ ಆರೋಪಿಯನ್ನು ಭಾರತದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲಿನ ಶೂ ಎಸೆದ ಘಟನೆ ಅತ್ಯಂತ ಖಂಡನೀಯ ಹಾಗೂ ಸಂವಿಧಾನ ವಿರೋಧಿ ಮನೋಭಾವದ ನಿದರ್ಶನವಾಗಿದೆ ಎಂದು ಅಂಬೇಡ್ಕರ್ ಯುವಸೇನೆ ಸ್ಥಾಪಕಾಧ್ಯಕ್ಷ ಜಯನ್ ಮಲ್ಪೆ ಹೇಳಿದರು.
ಇತ್ತೀಚೆಗೆ ಆರ್ಎಸ್ಎಸ್ ಶತಮಾನೋತ್ಸವ ಕಾರ್ಯಕ್ರಮಕ್ಕೆ ನ್ಯಾಯಮೂರ್ತಿ ಗವಾಯಿ ಅವರ ತಾಯಿಯನ್ನು ಆಹ್ವಾನಿಸಿದ್ದಾಗ, “ನಾನು ಅಂಬೇಡ್ಕರ್ವಾದಿ, ಯಾವುದೇ ಕಾರಣಕ್ಕೂ ಇಂತಹ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ” ಎಂದು ಅವರು ಸ್ಪಷ್ಟವಾಗಿ ಹೇಳಿದ ವಿಷಯ ಸಂಘಪರಿವಾರಕ್ಕೆ ಅಸಹ್ಯವಾಗಿತ್ತು. ಅದರ ಪರಿಣಾಮವಾಗಿ ಸಂಘಪರಿವಾರದವರೇ ಈ ಪಿತೂರಿಯನ್ನು ರೂಪಿಸಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ಈ ಘಟನೆ ನಡೆದ ಸುಮಾರು ಎಂಟು ಗಂಟೆಗಳ ನಂತರ ದೇಶದ ಪ್ರಧಾನ ಮಂತ್ರಿ ನೀಡಿದ ಪ್ರತಿಕ್ರಿಯೆಯು ಸಹ ದುರಂತಕರವಾಗಿದೆ. ಸಂಘಪರಿವಾರದ ವ್ಯವಸ್ಥಿತ ಶಕ್ತಿ ದಲಿತರ ಮತ್ತು ಮಹಿಳೆಯರ ಉನ್ನತಿಯನ್ನು ಸಹಿಸದ ಸನಾತನವಾದಿ ಮನೋಭಾವದ ಪ್ರತಿಫಲವೇ ಈ ಘಟನೆ ಎಂದು ಹೇಳಿದರು.

ಈ ದೇಶ ಯಾವುದೇ ಧರ್ಮಗ್ರಂಥದ ಆಧಾರದ ಮೇಲೆ ಅಲ್ಲ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಬರೆದ ಭಾರತ ಸಂವಿಧಾನದ ಆಧಾರದ ಮೇಲೆ ನಡೆಯುತ್ತದೆ. ಹಿಂದು ಎಂಬುದು ಜೀವನ ಪದ್ದತಿ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೂ ಬ್ರಾಹ್ಮಣರ ಮತ್ತು ವೈದಿಕರ ಜೀವನ ಶೈಲಿಯೇ ಶ್ರೇಷ್ಠ ಎಂಬ ಮನೋಭಾವದಿಂದ ಈ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಇದು ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆಯಾಗಿದೆ ಎಂದು ಹೇಳಿದರು.
ನಮ್ಮಲ್ಲಿ ಕೂಡ ಚಪ್ಪಲಿ ಇದೆ, ನಾವು ಎಸೆಯಲು ಶುರು ಮಾಡಿದರೆ ನಿಮ್ಮ ಮುಖ ಮೂತಿ ಯಾವುದು ಕೂಡ ಇಲ್ಲಿ ಉಳಿಲಿಕ್ಕೆ ಸಾಧ್ಯವಿಲ್ಲ. ಆದರೆ ನಾವು ಹಾಗೇ ಮಾಡುವುದಿಲ್ಲ, ನಾವು ಬಾಬಾ ಸಾಹೇಬ್ ಅಂಬೇಡ್ಕರ್ ರವರ ದಾರಿಯಲ್ಲಿ ಇದ್ದೇವೆ ಮತ್ತು ಭಗವಾನ್ ಬುದ್ದರ ಸಂದೇಶದಲ್ಲಿ ಬದಕುತ್ತಿದ್ದೇವೆ ಎಂದು ಹೇಳೀದರು.
ಅಂಬೇಡ್ಕರ್ ಯುವಸೇನೆ ಈ ಘಟನೆಗೆ ಕಾರಣವಾದ ಸನಾತನವಾದಿ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ, ಅವನನ್ನು ಭಾರತದಿಂದ ಗಡಿಪಾರು ಮಾಡಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದು ಒತ್ತಾಯಿಸಿದರು.

ಸಾಹಿತಿ, ಚಿಂತಕ ಗಣನಾಥ ಎಕ್ಕಾರ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ನಡೆದ ದಾಳಿ ಪ್ರಯತ್ನವನ್ನು ಕೇವಲ ಅಂಬೇಡ್ಕರ್ ಯುವಸೇನೆ ಮಾತ್ರವಲ್ಲ, ಸಂವಿಧಾನವನ್ನು ಗೌರವಿಸುವ ಪ್ರತಿಯೊಬ್ಬ ಭಾರತೀಯ ನಾಗರಿಕರೂ ಖಂಡಿಸಲೇಬೇಕು. ನಮ್ಮ ದೇಶ ಕಳೆದ 78 ವರ್ಷಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಂಡು ಬಂದಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ಮುಂತಾದ ನೆರೆ ರಾಷ್ಟ್ರಗಳಲ್ಲಿ ಅರಾಜಕತೆ ಅಥವಾ ಸೈನಿಕ ಆಡಳಿತವನ್ನು ಕಂಡಿದ್ದರೂ, ಭಾರತದಲ್ಲಿ ಪ್ರಜಾಪ್ರಭುತ್ವ ಇಂದು ಜೀವಂತವಾಗಿದೆ. ಇದರ ಪ್ರಮುಖ ಕಾರಣ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ. ಆ ಸಂವಿಧಾನದ ಮೂರು ಪ್ರಮುಖ ಅಂಗಗಳಲ್ಲಿ ಒಂದಾದ ನ್ಯಾಯಾಂಗದ ಮೇಲೆ ಇತ್ತೀಚೆಗೆ ನಡೆದ ಹಲ್ಲೆ, ಕೇವಲ ನ್ಯಾಯಾಂಗದ ಮೇಲಿನ ದಾಳಿ ಮಾತ್ರವಲ್ಲ ಅದು ಸಂವಿಧಾನದ ಮೇಲಿನ ದಾಳಿ ಕೂಡ ಹೌದು. ಸಂವಿಧಾನವನ್ನು ಗೌರವಿಸುವ, ಪ್ರೀತಿಸುವ ಪ್ರತಿಯೊಬ್ಬರೂ ಈ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಬೇಕು. ಕಾರ್ಯಾಂಗ ಮತ್ತು ಶಾಸಕಾಂಗಗಳು ಈ ಘಟನೆಯ ವಿರುದ್ಧ ನಿಂತು ಪ್ರತಿಕ್ರಿಯಿಸಬೇಕಾಗಿತ್ತು. ಆದರೆ, ಅವುಗಳಿಂದ ಯಾವುದೇ ಧ್ವನಿ ಕೇಳಿಸದಿರುವುದು ವಿಷಾದನೀಯ. ನ್ಯಾಯಾಂಗದ ಮೇಲೆ ನಡೆದ ಈ ರೀತಿಯ ದಾಳಿಗಳನ್ನು ಖಂಡಿಸದಿದ್ದರೆ, ಸಂವಿಧಾನವೇ ಅಪಾಯದಲ್ಲಿರುವ ದಿನಗಳು ದೂರವಿಲ್ಲ ಎಂಬುದನ್ನು ನಾವು ಅರಿಯಬೇಕು. ಈ ಸಂದರ್ಭದಲ್ಲೂ, ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಶಾಂತ ಮನೋಭಾವದಿಂದ, ಯಾವುದೇ ಪ್ರತಿಕ್ರಿಯೆ ನೀಡದೆ ಕೋರ್ಟ್ ಕಲಾಪವನ್ನು ಮುಂದುವರೆಸಿದ ರೀತಿ ಬುದ್ಧನ ಆದರ್ಶವನ್ನು ನೆನಪಿಸುತ್ತದೆ. 2,500 ವರ್ಷಗಳ ಹಿಂದೆ ಬುದ್ಧನು ಬೋಧಿಸಿದ ಶಾಂತಿ, ಪ್ರೀತಿ ಮತ್ತು ಸಹನೆಗಳ ಮೌಲ್ಯಗಳನ್ನು ಅವರು ತಮ್ಮ ವರ್ತನೆಯ ಮೂಲಕ ಪ್ರತಿಬಿಂಬಿಸಿದ್ದಾರೆ. ಸಂವಿಧಾನದ ಘನತೆಯನ್ನು ತಮ್ಮ ವ್ಯಕ್ತಿತ್ವದ ಮೂಲಕ ಎತ್ತಿಹಿಡಿದಿರುವ ಗವಾಯಿ ಅವರನ್ನು ನಾವು ಎಲ್ಲರೂ ಅಭಿನಂದಿಸಬೇಕು. ಈ ಸಂದರ್ಭದಲ್ಲಿ ಸಂವಿಧಾನವನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂಬುದನ್ನು ಮತ್ತೊಮ್ಮೆ ಸ್ಮರಿಸುತ್ತದೆ ಎಂದು ಹೇಳಿದರು.

ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಮನುವಾದಿ ಪೀಡಿತ ಸನಾತನವಾದಿ ವಕೀಲ ರಾಕೇಶ್ ಕಿಶೋರ್ ಅವರು ಅದೇ ಸುಪ್ರೀಂ ಕೋರ್ಟ್ನಲ್ಲಿ ವಕಾಲತ್ತು ನಡೆಸುತ್ತಿದ್ದರೂ, ಇಷ್ಟು ದಿನ ಈ ರೀತಿಯ ಅಘಾತಕರ ಕೃತ್ಯಕ್ಕೆ ಮುಂದಾಗಿರಲಿಲ್ಲ. ಆದರೆ ಈಗ, ನಮ್ಮನ್ನಾಳುತ್ತಿರುವ ಸರ್ಕಾರದ ಪಿತೂರಿಯಿಂದಲೇ ಈ ಕೃತ್ಯ ನಡೆದಿದೆ. ಆರ್ಎಸ್ಎಸ್ನ ಶತಮಾನೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ಸಂಘಪರಿವಾರದ ನಿರ್ದೇಶನದಡಿ ಈ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಾಂಗದ ವಿರುದ್ಧ ನಡೆದ ಈ ಹಲ್ಲೆ ರಾಷ್ಟ್ರದ ಸಂವಿಧಾನದ ಮೇಲಿನ ಹಲ್ಲೆಯಾಗಿದೆ. ಇಂತಹ ಕೃತ್ಯವನ್ನು ನಾವು ಯಾವತ್ತೂ ಸಹಿಸುವುದಿಲ್ಲ ಎಂದು ಹೇಳಿದರು.

ದಸಂಸ ಭೀಮವಾದದ ರಾಜ್ಯ ಸಂಘಟನಾ ಸಂಚಾಲಕ ಶೇಖರ ಹಾವಂಜೆ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಈ ಘಟನೆಯನ್ನು ಇಡೀ ದೇಶವೇ ಖಂಡಿಸುತ್ತಿದೆ. ಆದರೆ, ಇದರ ಮೂಲ ಕಾರಣವನ್ನು ನಾವು ಆಳವಾಗಿ ಯೋಚಿಸಬೇಕು. ಇದು ಕೇವಲ ನ್ಯಾಯಮೂರ್ತಿ ಗವಾಯಿ ಅವರ ವಿರುದ್ಧದ ವೈಯಕ್ತಿಕ ದ್ವೇಷದಿಂದ ನಡೆದ ಹಲ್ಲೆಯಲ್ಲ, ಇದು ಸಂವಿಧಾನದ ತತ್ವಗಳ ವಿರುದ್ಧದ ದಾಳಿ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ತೋರಿಸಿದ ಬುದ್ಧನ ಮಾರ್ಗವನ್ನು ಇಡೀ ದೇಶ ಅನುಸರಿಸುತ್ತಿರುವಾಗ, ಅದು ಸಂಘಪರಿವಾರ ಹಾಗೂ ಮನುವಾದಿಗಳಿಗೆ ಅಸಹನೀಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಳ್ಳು ನೆಪವನ್ನು ಹಿಡಿದು ಇಂತಹ ಕೃತ್ಯ ಎಸಗಲಾಗಿದೆ.
ಕೇವಲ ಬಾಬಾ ಸಾಹೇಬ್ ಅಂಬೇಡ್ಕರ್ರನ್ನು ಗೌರವಿಸಿದರಷ್ಟೇ ಸಾಲದು, ಅವರ ಮಾರ್ಗವನ್ನು ಅನುಸರಿಸುವುದು ನಮ್ಮ ಕರ್ತವ್ಯ. ಇಂದಿನ ಪರಿಸ್ಥಿತಿಯಲ್ಲಿ ಸಂಘಪರಿವಾರದ ಯಾವುದೇ ಕುತಂತ್ರಗಳು ಯಶಸ್ವಿಯಾಗುವುದಿಲ್ಲ. ಈ ಕೃತ್ಯಕ್ಕೆ ನೇರವಾಗಿ ಬಿಜೆಪಿ, ಸಂಘಪರಿವಾರ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹೊಣೆಗಾರರು. ಘಟನೆ ನಡೆದ ಅನೇಕ ಗಂಟೆಗಳವರೆಗೂ ಪ್ರಧಾನಿ ಅಥವಾ ಗೃಹಸಚಿವರಿಂದ ಒಂದು ಮಾತು ಸಹ ಹೊರಬಂದಿಲ್ಲ. ಕ್ರಿಕೆಟ್ ಅಥವಾ ಕ್ರೀಡಾ ವಿಷಯಗಳಿಗೆ ತಕ್ಷಣ ಪ್ರತಿಕ್ರಿಯಿಸುವ ಪ್ರಧಾನಿಯವರು ಇಂತಹ ಗಂಭೀರ ಘಟನೆಗೆ ಬಾಯಿ ಬಿಚ್ಚದಿರುವುದು ದೇಶಕ್ಕೆ ಲಜ್ಜಾಸ್ಪದ. ಗೃಹ ಸಚಿವ ಅಮಿತ್ ಶಾ ಇವತ್ತಿಗೂ ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ.

ಇದೇ ರೀತಿ ಸಂವಿಧಾನದ ಆಶಯದಿಂದ ಆಯ್ಕೆಯಾದ ಪರಿಶಿಷ್ಟ ಪಂಗಡದ ಶಾಸಕರು ಸಹ ಮೌನವಾಗಿರುವುದು ನೋವಿನ ಸಂಗತಿ. ತಮ್ಮ ಸ್ವಾರ್ಥಕ್ಕಾಗಿ ಬಾಬಾ ಸಾಹೇಬ್ ಹಾಗೂ ಸಂವಿಧಾನವನ್ನು ಬಳಸಿಕೊಳ್ಳುತ್ತಿದ್ದಾರೆ. ಮನುವಾದಿಗಳು ಅರಿತುಕೊಳ್ಳಬೇಕು ಈ ದೇಶದ ಸಂವಿಧಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಸಂವಿಧಾನದ ಶಕ್ತಿಯೇ ರಾಷ್ಟ್ರದ ಶಕ್ತಿ. ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ ಯಾವತ್ತೂ ಯಶಸ್ವಿಯಾಗುವುದಿಲ್ಲ, ಎಂದು ಹೇಳಿದರು.

ಹಿರಿಯ ದಲಿತ ಮುಖಂಡ ಶೇಖರ ಹೆಜಮಾಡಿ ಮಾತನಾಡಿ, ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಮಹಾಬಲ ಕುಂದರ್, ಚಾರ್ಲ್ಸ್ ಅಂಬ್ಲರ್, ಇದ್ರಿಸ್ ಹೂಡೆ, ಕೃಷ್ಣ ಬಂಗೇರ, ಲಕ್ಷ್ಮಣ ಬೈಂದೂರು, ರಾಮ ಮಯ್ಯಾಡಿ, ಹರೀಶ್ ಸಲ್ಯಾನ್, ಯುವರಾಜ್ ಪುತ್ತೂರು, ವಸಂತ ಪಾದೆಬೆಟ್ಟು, ದಯಾಕರ್ ಮಲ್ಪೆ, ಮಾಧವ ಕರ್ಕೇರ, ಸಾಧು ಚಿಟ್ಪಾಡಿ, ಧನಂಜಯ, ರವಿರಾಜ್ ಲಕ್ಷ್ಮಿನಗರ, ವಿಶ್ವನಾಥ ಹಾಳೇಕಟ್ಟೆ, ಶೋಭಾ ನಾಯ್ಕ್, ಶರತ್ ಶೆಟ್ಟಿ ತೆಂಕನಿಡಿಯೂರು, ಕಮಲ್ ಮಲ್ಪೆ, ಪುಷ್ಪ ಆಂಚನ್, ಸತೀಶ್ ಕಪ್ಪೆಟ್ಟು, ಸಂತೋಷ್ ಮೂಡುಬೆಟ್ಟು ದಾಮೋದರ ನಾಯ್ಕ, ಧನಪಾಲ್, ವಿನಯ ಕೊಡಂಕೂರು ಮುಂತಾದವರು ಭಾಗವಹಿಸಿದ್ದರು.





