ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲೆಯ ವತಿಯಿಂದ ರಮಝಾನ್ ಸ್ವಾಗತ ಕಾರ್ಯಕ್ರಮವು ಇಂದು ಉಡುಪಿ ಜಾಮೀಯ ಮಸೀದಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ಉಪಾಧ್ಯಕ್ಷ ಎಸ್. ಅಮೀನುಲ್ ಹಸನ್ ಅವರು, ರಮಝಾನ್ ಮಹತ್ವವನ್ನು ವಿವರಿಸಿದರು. “ರಮಝಾನ್ ಆತ್ಮಶುದ್ಧಿ ಹಾಗೂ ಆತ್ಮಪರಿಶೀಲನೆಯ ತಿಂಗಳು. ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಮೊಬೈಲ್ ಅಥವಾ ಕಂಪ್ಯೂಟರ್ಗಳಿಗೆ ಸಾಫ್ಟ್ವೇರ್ ಅಪ್ಡೇಟ್ ಅಗತ್ಯವಿರುವಂತೆ, ನಮ್ಮ ಜೀವನಕ್ಕೂ ಆಧ್ಯಾತ್ಮಿಕ ಅಪ್ಡೇಟ್ ಅಗತ್ಯ. ಆ ಅಪ್ಡೇಟ್ ಆಗುವ ಪವಿತ್ರ ಕಾಲವೇ ರಮಝಾನ್” ಎಂದು ಹೇಳಿದರು.

ರಮಝಾನ್ ಕೇವಲ ಉಪವಾಸದ ಆಚರಣೆಯಷ್ಟೇ ಅಲ್ಲ, ಅದು ವ್ಯಕ್ತಿತ್ವ ಪರಿವರ್ತನೆಗೆ ದಾರಿ ತೋರಿಸುವ ಮಾಸವಾಗಿದ್ದು, “ಅಪ್ಡೇಟ್ ಮಾತ್ರವಲ್ಲ, ರಮಝಾನ್ ಅಪ್ಗ್ರೇಡ್ ಆಗುವ ತಿಂಗಳು ಕೂಡ ಹೌದು. ನಮ್ಮ ಈಮಾನ್, ನೈತಿಕತೆ ಮತ್ತು ವರ್ತನೆಯಲ್ಲಿ ಉನ್ನತಿ ಬರಬೇಕು” ಎಂದು ಅಭಿಪ್ರಾಯಪಟ್ಟರು.
ಸಮಾಜದ ಹಿತದೃಷ್ಟಿಯಿಂದ ಬಡವರು, ಅನಾಥರು ಹಾಗೂ ಅಗತ್ಯವಿರುವವರ ಕಡೆ ಹೆಚ್ಚಿನ ಕಾಳಜಿ ವಹಿಸುವುದು ರಮಝಾನ್ನ ಪ್ರಮುಖ ಪಾಠವಾಗಿದೆ. ಮಾನವೀಯತೆ, ಸಹೋದರತ್ವ ಹಾಗೂ ಸಹಾನುಭೂತಿ ಬೆಳೆಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಎಲ್ಲರೂ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಯುವಜನತೆ ಸಮಯವನ್ನು ಸದುಪಯೋಗಪಡಿಸಿಕೊಂಡು ಜ್ಞಾನಾರ್ಜನೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು ಆತ್ಮವಿಕಾಸದತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಮಲ್ಪೆ ಅಬೂಬಕ್ಕರ್ ಸಿದ್ದೀಕ್ ಮಸೀದಿಯ ಗುರುಗಳಾದ ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾಮೀಯ ಮಸೀದಿಯ ಗುರುಗಳಾದ ಮೌಲಾನ ಯೂನಸ್ ಕುರ್ಆನ್ ಪಠಿಸಿ ಅದರ ಅನುವಾದ ಮಾಡಿದರು. ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಘಟಕದ ಅಧ್ಯಕ್ಷ ನಿಸಾರ್ ಅಹಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಕಾಪು ಘಟಕದ ಅಧ್ಯಕ್ಷ ಅನ್ವರ್ ಅಲಿ ಧನ್ಯವಾದವಿತ್ತರು.





