ಅಂಕೋಲಾದ ಕೇಣಿ ವಾಣಿಜ್ಯ ಬಂದರು ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಹೋರಾಟಕ್ಕೆ ಇಂದು (ನ.25) ಒಂದು ವರ್ಷ ಪೂರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ, ಹೋರಾಟ ಸಮಿತಿಯು ಸಂಪೂರ್ಣ ಅಂಕೋಲಾ ಬಂದ್ ಜಾರಿಗೆ ಕರೆ ನೀಡಿದೆ. ಈ ದಿನವನ್ನು ಕರಾಳ ದಿನವೆಂದು ಗುರುತಿಸಿ, ಅಣಕು ಶವಯಾತ್ರೆ ಮೂಲಕ ಗಮನ ಸೆಳೆಯಲು ತಯಾರಿ ನಡೆಯುತ್ತಿದೆ.
ಕೇಣಿ ಪ್ರದೇಶದಲ್ಲಿ ಬಂದರು ನಿರ್ಮಾಣಕ್ಕೆ ಸರ್ಕಾರ ಮುಂದುವರೆದಿರುವ ಕ್ರಮಗಳನ್ನು ಸ್ಥಳೀಯರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಕಳೆದ 10 ದಿನಗಳಿಂದ ಹೋರಾಟಗಾರರು ನಿರಂತರ ಧರಣಿಯಲ್ಲಿ ತೊಡಗಿರುವುದು, ಹಾಗೂ ಹೋರಾಟದ ಒಂದು ವರ್ಷದ ನೆನಪಿಗಾಗಿ ಬಂದ್ ಆಯೋಜಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಅಕ್ರಮವಾಗಿ ಮದ್ಯ ಮಾರಾಟ ಹೆಚ್ಚಳ: ಅಬಕಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಬಡ ಕುಟುಂಬಗಳು ಬೀದಿಪಾಲು
ಬಂದರು ಯೋಜನೆಯ ವಿರುದ್ಧ ಸಾರ್ವಜನಿಕರಲ್ಲಿ ವ್ಯಾಪಕ ಅಸಮಾಧಾನ ಕಂಡುಬಂದಿದ್ದು, ಅಂಕೋಲಾ ಬಂದ್ಗೆ ವ್ಯಾಪಕ ಬೆಂಬಲ ದೊರಕುವ ಸೂಚನೆಗಳು ಗೋಚರಿಸುತ್ತಿವೆ. ಪಟ್ಟಣದ ಅನೇಕ ವ್ಯಾಪಾರ ಮಳಿಗೆಗಳು ಸ್ವಯಂಪ್ರೇರಿತವಾಗಿ ನಾಳೆ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲು ಒಪ್ಪಿಕೊಂಡಿವೆ.

ಬಂದ್ ಹಿನ್ನೆಲೆಯಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ನವೆಂಬರ್ 25 ರಂದು ತಾಲೂಕಿನಾದ್ಯಂತ ಎಲ್ಲಾ ಮದ್ಯಂಗಡಿಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ. ಕೇಣಿ ಬಂದರು ವಿರೋಧಿ ಹೋರಾಟ ಈಗ ಮತ್ತೊಂದು ಹಂತ ಪ್ರವೇಶಿಸಿದ್ದು, ನಾಳೆಯ ಬಂದ್ ಮೂಲಕ ಸರ್ಕಾರ ಮತ್ತು ಆಡಳಿತಕ್ಕೆ ಸಂದೇಶ ನೀಡಲು ಹೋರಾಟಗಾರರು ಸಜ್ಜಾಗಿದ್ದಾರೆ.





