ಬಸವಕಲ್ಯಾಣ ನಗರದಲ್ಲಿ ನ.29 ಮತ್ತು 30ರಂದು ನಡೆಯಲಿರುವ 46ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ಸಮಾರಂಭದಲ್ಲಿ ಜಿಲ್ಲೆಯ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಸದ ಸಾಗರ ಖಂಡ್ರೆ ಮನವಿ ಮಾಡಿದ್ದಾರೆ.
ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ವಿಶ್ವ ಬಸವಧರ್ಮ ಟ್ರಸ್ಟ್ ಬಸವಕಲ್ಯಾಣ ವತಿಯಿಂದ ಬುಧವಾರ ಆಯೋಜಿಸಿದ್ದ 46ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ-2025ರ ವಾಲ್ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ಸಮಾನತೆ ತತ್ವ ಸಾರಿದರು. ಅಂತಹ ಜಗತ್ತಿಗೆ ಮೊದಲ ಪ್ರಜಾಪ್ರಭುತ್ವ ಪರಿಕಲ್ಪನೆ ನೀಡಿದ ಅನುಭವ ಮಂಟಪದ ನೆಲದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಸಾನ್ನಿಧ್ಯದಲ್ಲಿ ಪ್ರತಿವರ್ಷ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ಅರ್ಥಪೂರ್ಣವಾಗಿ ನೆರವೇರುತ್ತಿವೆ. ಈ ವರ್ಷವೂ ಎರಡು ದಿನದ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆʼ ಎಂದರು.
ʼನಾಡಿನ ಮಠಾಧೀಶರು, ಸಚಿವರು, ಸಾಹಿತಿಗಳು ಬುದ್ಧಿಜೀವಿಗಳು, ಕಲಾವಿದರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಜಿಲ್ಲೆಯ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ 2 ದಿನದ ಉತ್ಸವ ಯಶಸ್ವಿಗೊಳಿಸಬೇಕು ಎಂದ ಅವರು, ಬಸವಕಲ್ಯಾಣ ನಗರದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪಕ್ಕೆ ಅನುದಾನದ ಕೊರತೆಯಿಲ್ಲ. ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಒಂದು ವರ್ಷದೊಳಗೆ ಕಟ್ಟಡ ಲೋಕಾರ್ಪಣೆವಾಗುವ ನಿರೀಕ್ಷೆಯಿದೆ’ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಅನುಭವ ಮಂಟಪ ನಮ್ಮೆಲ್ಲರ ಹೃದಯ ಇದ್ದಂತೆ, ಬಸವಾದಿ ಶರಣರು ಜಾತಿ ವ್ಯವಸ್ಥೆ ಧಿಕ್ಕರಿಸಿದ್ದರು. ಸಮಾನತೆಗಾಗಿ ಹೋರಾಡಿದರು. ಅಂತಹ ಬಸವಾದಿ ಶರಣರು ನಡೆದಾಡಿದ ನೆಲದ ಮೂಲಕ ಬಸವತತ್ವ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಆಗಬೇಕಿದೆ. ಆ ದಿಸೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹೆಸರಾಂತ ಗಣ್ಯರನ್ನು ಕರೆತಂದು ಪ್ರತಿವರ್ಷ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಡೆಯುವ ಅನುಭವ ಮಂಟಪ ಉತ್ಸವದಲ್ಲಿ ದೇಶದ ವಿದೇಶದ ಪ್ರತಿನಿಧಿಗಳು ಪಾಲ್ಗೊಳ್ಳವಂತಾಗಬೇಕೆನ್ನುವುದು ನಮ್ಮ ಆಶಯವಾಗಿದೆʼ ಎಂದು ತಿಳಿಸಿದರು.
ʼಬಸವಕಲ್ಯಾಣ ಬಸವಕಲ್ಯಾಣದಲ್ಲಿ ನ.29 ಮತ್ತು 30 ರಂದು ನಡೆಯಲಿರುವ ಎರಡು ದಿನದ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವದಲ್ಲಿ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಜತೆಗೆ ತನು, ಮನ, ಧನದಿಂದ ಸಹಕರಿಸಬೇಕುʼ ಎಂದು ಕೋರಿದರು.
ಇದನ್ನೂ ಓದಿ : ಬೀದರ್ | ₹12 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ
ಸಾಹಿತಿ ರಾಜು ಜುಬರೆ, ಪ್ರಮುಖರಾದ ನಾಗಶೆಟ್ಟಿ ಚೋಳಾ, ಬಾಬು ಬೆಲ್ದಾಳ, ಸಂತೋಷ ಹಡಪದ, ಮಹಾನಂದಾ ಮಾಶೆಟ್ಟೆ, ಪ್ರೇಮಲಾ ತೊಂಡಾರೆ ಸೇರಿದಂತೆ ಹಲವರು ಇದ್ದರು.





