ಕುರಿಗಳ ಮೈ ತೊಳೆಯಲು ಕೆರೆಗೆ ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದಲ್ಲಿ ನಡೆದಿದೆ.
ಉಂಡಿಗನಾಳು ಗ್ರಾಮದ ಗಿರೀಶ್ ಅವರ ಪುತ್ರ ಸೃಜನ್(13) ಹಾಗೂ ಶಿವಕುಮಾರ್ ಅವರ ಪುತ್ರ ವಿಜಯ್ ಕುಮಾರ್(13) ಕೆರೆಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳು.
ಈ ಇಬ್ಬರೂ ವಿದ್ಯಾರ್ಥಿಗಳು ಉಂಡಿಗನಾಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶನಿವಾರ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕನಕದಾಸ ಜಯಂತಿಯ ಕಾರ್ಯಕ್ರಮವನ್ನು ಮುಗಿಸಿಕೊಂಡು ಮನೆಗೆ ಹಿಂದಿರುಗಿ ಬಂದಿದ್ದರು. ಬಳಿಕ, ಮನೆಯಲ್ಲಿ ಸಾಕಿದ್ದ ಕುರಿಗಳನ್ನು ಕೆರೆಯಲ್ಲಿ ಮೈತೊಳೆದುಕೊಂಡು ಬರುವುದಾಗಿ ಹೇಳಿ ಈ ಇಬ್ಬರೂ ವಿದ್ಯಾರ್ಥಿಗಳು ಉಂಡಿಗನಾಳು ಗ್ರಾಮದ ಹೊಸಳ್ಳಿ ಕೆರೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ಬಾಹುಬಲಿ ಮೂರ್ತಿ ವಿಶ್ವಕ್ಕೇ ಶಾಂತಿ ಸಂದೇಶ ಸಾರುವ ಸಂಕೇತ: ಉಪರಾಷ್ಟ್ರಪತಿ ಸಿ ಪಿ ರಾಧಾಕೃಷ್ಣನ್
ಶಾಸಕ ಹುಲ್ಲಳ್ಳಿ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳನ್ನು ಕಳೆದುಕೊಂಡು ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ವಿದ್ಯಾರ್ಥಿಗಳು ಕೆರೆಗೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಮೃತ ದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಈ ಸಂದರ್ಭದಲ್ಲಿ ಅರಸೀಕೆರೆ ತಹಶೀಲ್ದಾರ್ ಸಂತೋಷ್ ಕುಮಾರ್ ಸ್ಥಳದಲ್ಲಿ ಇದ್ದರು.





