- ಭಾಷಾ ವಿಜ್ಞಾನದಲ್ಲಿ ಸಂಶೋಧನೆ ಮತ್ತು ಅಧ್ಯಯನಕ್ಕೆ ವಿಫುಲ ಅವಕಾಶಗಳಿವೆ.
- ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿರುವ ಕನ್ನಡ ಭಾಷೆಯಲ್ಲಿಯೂ ಮಹಾಪ್ರಾಣಾಕ್ಷರಗಳಿಲ್ಲ.
ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಪ್ರದೇಶ, ಪ್ರತಿಯೊಬ್ಬರೂ ಎಲ್ಲ ಭಾಷಿಕರೊಂದಿಗೆ ಸಹಬಾಳ್ವೆಯಿಂದ ಬದುಕಬೇಕು. ಹೆಚ್ಚಿನ ಮಾತುಗಳನ್ನು ಕಲಿಯುವದರಿಂದ ಹೆಚ್ಚಿನ ಜ್ಞಾನದ ದಾರಿಗಳು ತೆರೆದುಕೊಳ್ಳುತ್ತವೆ. ಪ್ರತಿ ತಲೆಮಾರುಗಳಲ್ಲಿಯೂ ಭಾಷಾ ಬದಲಾವಣೆಯನ್ನು ಗುರುತಿಸಬಹುದು ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಸವರಾಜ ಕೋಡಗುಂಟಿ ಹೇಳಿದರು.
ಯಾದಗಿರಿ ಜಿಲ್ಲೆಯ ಗುರುಮಠಕಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಘಟಕ ಮತ್ತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯ ಕನ್ನಡ ವಿಭಾಗದ ಸಹಯೋಗದೊಂದಿಗೆ “ಕನ್ನಡ ಭಾಷೆ ಮತ್ತು ಸಂಶೋಧನೆ” ಕುರಿತು ನಡೆದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದ ಮೊದಲನೆಯ ಗೋಷ್ಠಿಯಲ್ಲಿ ಕನ್ನಡ ಭಾಷೆಯ ಕುರಿತು ಮಾತನಾಡಿದರು.
ಭಾಷೆ ಹೇಗೆ ರೂಪುಗೊಂಡಿತು, ದ್ರಾವಿಡ ಭಾಷೆ ವರ್ಗಗಳು, ಕನ್ನಡ ಭಾಷೆಯ ಹುಟ್ಟು, ಭಾಷೆ ಹೇಗೆ ಮನುಷ್ಯನ ಏಳಿಗೆಗೆ ಕಾರಣವಾಯಿತು ಎಂದು ವಿವರಿಸಿದರು
“ನಮಗೆ ಗೊತ್ತಿರುವ ಹಾಗೆ, ಹರಪ್ಪ ನಾಗರಿಕತೆಯ ಲಿಪಿಗಳನ್ನು ಇನ್ನೂ ಸರಿಯಾಗಿ ಓದಲಾಗಿಲ್ಲ. ನಮ್ಮ ಹತ್ತಿರದ ಕನಗನಹಳ್ಳಿ-ಸನ್ನತಿಯಲ್ಲಿ ದೊರೆತ ಶಾಸನಗಳು ದಕ್ಷಿಣ ಏಷ್ಯಾಕ್ಕೆ ಮೊದಲು ಅಕ್ಷರ ಕೊಟ್ಟ ಊರುಗಳು. ಅಶೋಕನ ಕಾಲದ ಶಾಸನಗಳು ಪಾಲಿ ಭಾಷೆಯಲ್ಲಿವೆ. ವೇದಗಳೆಲ್ಲವೂ ಜಾನಪದ ಸಾಹಿತ್ಯವೇ. 2300 ವರ್ಷಗಳ ಹಿಂದೆ ಅಶೋಕನು ಮಸ್ಕಿ ಮತ್ತು ಕನಗನಹಳ್ಳಿಯಲ್ಲಿ ಶಾಸನಗಳನ್ನು ಬರೆಸಿದನು. ಅಶೋಕನ ಶಾಸನಗಳೇ ಭಾರತದ ಮೊದಲ ಲಿಖಿತ ದಾಖಲೆಗಳು. ವಿಜ್ಞಾನ ಬಳಸಿಕೊಂಡು ನಾವು ಭಾಷೆ ಎಷ್ಟು ವರ್ಷ ಹಳೆಯದು ಎಂದು ಅಂದಾಜು ಮಾಡಬಹುದಾಗಿದೆ. ಭಾಷಾ ವಿಜ್ಞಾನದಲ್ಲಿ ಸಂಶೋಧನೆ ಮತ್ತು ಅಧ್ಯಯನಕ್ಕೆ ವಿಫುಲ ಅವಕಾಶಗಳಿವೆ” ಎಂದು ಹೇಳಿದರು.
“ದ್ರಾವಿಡ ಭಾಷಾ ಮನೆತನವು 8ರಿಂದ 10 ವರ್ಷಗಳಷ್ಟು ಹಳೆಯದು. ಇದಕ್ಕೆ ಬಲವಾದ ಆಧಾರಗಳಿವೆ. ನಂತರ ಉತ್ತರ ದ್ರಾವಿಡ, ದಕ್ಷಿಣ ದ್ರಾವಿಡ, ದಕ್ಷಿಣ ಮಧ್ಯದ್ರಾವಿಡ ಎಂದು ವಿಂಗಡಣೆಗಳಾದವು. ನಮಗೆ ಗೊತ್ತಿರುವ ಹಾಗೆ ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ. ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಒಂದು ಹಂತದವರೆಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಿ ಮುಂದೆ ವ್ಯವಹಾರಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು. ಇದರಿಂದ ಮಕ್ಕಳ ಕಲಿಕೆಗೆ ಅನುಕೂಲವಾಗಲಿದೆ. ಕನ್ನಡ ಭಾಷೆಯಲ್ಲಿ ಸಹಜವಾಗಿ ಮಹಾಪ್ರಾಣ ಅಕ್ಷರಗಳಿಲ್ಲ. ಸಂಸ್ಕೃತವನ್ನು ಅನುಸರಿಸಿ ಕನ್ನಡದಲ್ಲಿ ಇದೆಯೆಂದು ಬಳಸಿಕೊಂಡು ಬರಲಾಗಿದೆ. ಕನ್ನಡ ಭಾಷೆ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿರುವುದರಿಂದ ಇತರ ಭಾಷೆಯಲ್ಲಿಯಂತೆ ಕನ್ನಡದಲ್ಲಿಯೂ ಮಹಾಪ್ರಾಣಾಕ್ಷರಗಳಿಲ್ಲ” ಎಂದು ಪ್ರತಿಪಾದಿಸಿದರು.
“ಸಂಶೋಧನೆಗೆ ಮೂಲ ಆಕರ ಏನು ಅಂದರೆ, ‘ಪ್ರಶ್ನೆ’. ಸುಮ್ಮನೆ ಪ್ರಶ್ನೆ ಮಾಡುವುದಲ್ಲ. ಮೂಲ ಸಮಸ್ಯೆಯನ್ನು ಹುಡುಕಿ ಅದಕ್ಕೆ ಪರಿಹಾರ ಹುಡುಕುವುದು. ಹೀಗೆ ಪ್ರಶ್ನೆ ಮಾಡುತ್ತ ಆಲೋಚನೆಗೆ ಇಳಿಯುವುದೇ ಸಂಶೋಧನೆ” ಎಂದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ಸುದ್ದಿ ಓದಿದ್ದೀರಾ ? ಕನ್ನಡ ಮಾಧ್ಯಮಗಳು ಸೃಷ್ಟಿಸಿರುವ ತುಚ್ಛ ಶಬ್ದ ’ಅನ್ಯಕೋಮು’: ರಹಮತ್ ತರೀಕೆರೆ ವಿಷಾದ
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಚ್ಚಿನಮನಿ ಮೋನಪ್ಪ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಾಬುರಾಯ ದೊರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಚಿನ್ನ ಆಶಪ್ಪ, ಡಾ. ಮಾಲತಿ, ಡಾ. ಮಾಣಿಕಪ್ಪ, ಡಾ. ವೆಂಕಟೇಶ, ಮಹೇಶ ಡಾ. ಮಲ್ಲಪ್ಪ ಹಾಗೂ ಕಾಲೇಜಿನ ಸಿಬ್ಬಂದಿ ಹಾಗೂ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.





