ಔರಾದ್ ತಾಲೂಕಿನ ನಾಗೂರ(ಬಿ) ಗ್ರಾಮದ ಶಿವಕುಮಾರ ಗಂಗಶೆಟ್ಟಿ ಎಂಬುವವರು ರಾಶಿ ಮಾಡಲು ಕಟಾವು ಮಾಡಿ ಕೂಡಿಟ್ಟ ಸೋಯಾ ಬಣವಿಗೆ ಅಪರಿಚಿತ ಕಿಡಿಗೇಡಿಗಳು ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಬಣವಿಗೆ ಬೆಂಕಿಯಿಟ್ಟಿದ್ದಾರೆ.
ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬಣವಿಗೆ ಕಿಡಿ ಇಟ್ಟ ಪರಿಣಾಮ 3 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸುಮಾರು 25 ಕ್ವಿಂಟಲ್ಗಿಂತಲೂ ಹೆಚ್ಚಿನ ಫಸಲು ಬರುವ ಅಂದಾಜು ₹1.20 ಲಕ್ಷಕ್ಕೂ ಅಧಿಕ ಮೌಲ್ಯದ ಬೆಳೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ರೈತ ಶಿವಕುಮಾರ ಗಂಗಶೆಟ್ಟಿ ಅವರು ತಮ್ಮ ಜಮೀನಿನ ಸರ್ವೇ ನಂ-19 ರಲ್ಲಿ ಬೆಳೆದಿದ್ದ ಸೋಯಾಅವರೆ ಇತ್ತೀಚೆಗೆ ಕಟಾವಿ ಮಾಡಿ ಸಂಗ್ರಹಿಸಿಟ್ಟಿದ್ದರು, ಯಾರೋ ಕಿಡಿಗೇಡಿಗಳು ಅದಕ್ಕೆ ಬೆಂಕಿಯಿಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ : ಬೀದರ್ | ದನ ಮೇಯಿಸಲು ಹೋದ ಬಾಲಕರಿಬ್ಬರು ಹೊಂಡದಲ್ಲಿ ಮುಳುಗಿ ಸಾವು
ಕಷ್ಟಪಟ್ಟು ದುಡಿದು ಬೆಳೆದಿದ್ದ ಸೋಯಾಅವರೆ ಬಣವಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಸುಟ್ಟು ಕರಕಲಾದ ಸೋಯಾ ಅವರೆ ಬೆಳೆ ಹಾನಿ ಪರಿಹಾರ ನೀಡಬೇಕಾಗಿ ರೈತ ಶಿವಕುಮಾರ ಮನವಿ ಮಾಡಿದ್ದಾರೆ.





