ಕನ್ನಡ ಸುಂದರ ಮತ್ತು ಸ್ವತಂತ್ರ ಭಾಷೆಯಾಗಿದೆ. ಕನ್ನಡ ರಕ್ಷಿಸಬೇಕಾದ ರಾಜ್ಯ ಸರ್ಕಾರದಿಂದಲೇ ಕನ್ನಡಕ್ಕೆ ಹಿನ್ನಡೆಯಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕನ್ನಡಪರ ಕೆಲಸಗಳು ವ್ಯವಸ್ಥಿತವಾಗಿ ನಡೆಯುತ್ತಿಲ್ಲ ಎಂದು ಔರಾದ್ ಶಾಸಕ ಪ್ರಭು ಬಿ.ಚವ್ಹಾಣ ಆರೋಪಿಸಿದರು.
ಕನ್ನಡ ರಾಜ್ಯೋತ್ಸವದ ನಿಮಿತ್ತ ತಾಲ್ಲೂಕು ಆಡಳಿತದ ವತಿಯಿಂದ ಔರಾದ(ಬಿ) ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ʼಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲಾಗುವ ಅನುದಾನ ಕಡಿತಗೊಳಿಸಿ ದುರ್ಬಲಗೊಳಿಸಲಾಗಿದೆʼ ಎಂದರು.
ʼಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರ ಜಾಗಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಹೀಗಾದರೆ ಕನ್ನಡದ ಅಭಿವೃದ್ಧಿ ಹೇಗೆ ಸಾಧ್ಯ. ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡದ ಕಾರಣ ಬಹಳಷ್ಟು ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆಯಾಗಿದೆ. ಕನ್ನಡ ಮಾಧ್ಯಮ ಶಾಲೆಗಳಿರುವ ಕಡೆ ಸರ್ಕಾರ ಆಂಗ್ಲ ಮಾಧ್ಯಮದ ಶಾಲೆಗಳಿಗೆ ಅನುಮತಿ ನೀಡುತ್ತಿದೆ. ಇದು ಸರಿಯಲ್ಲ. ಅನ್ಯ ಭಾಷೆಗಳನ್ನು ವಿರೋಧಿಸುವುದಿಲ್ಲ. ಆದರೆ ಕನ್ನಡ ಭಾಷೆಗೆ ಧಕ್ಕೆ ತರುವ ಕೆಲಸ ಸರ್ಕಾರ ಮಾಡಬಾರದುʼ ಎಂದು ಹೇಳಿದರು.
ʼಈ ಹಿಂದೆ ಹೈದ್ರಾಬಾದ ನಿಜಾಮರ ಆಳ್ವಿಕೆಯಲ್ಲಿದ್ದ ಈ ಭಾಗದಲ್ಲಿ ಉರ್ದು ಭಾಷೆಯ ಪ್ರಭಾವ ಹೆಚ್ಚಾಗಿತ್ತು. ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಗಡಿಯಲ್ಲಿರುವ ಕಾರಣ ಮರಾಠಿ ಮತ್ತು ತೆಲುಗು ಭಾಷೆ ಮಾತನಾಡುವ ಜನ ಹೆಚ್ಚಿದ್ದಾರೆ. ಹಾಗಾಗಿ ಇಲ್ಲಿ ಕನ್ನಡದ ಬೆಳವಣಿಗೆ ಬಹಳಷ್ಟು ಕಷ್ಟದ ಕೆಲಸವಾಗಿತ್ತು. ಅಂತಹ ಸಂದರ್ಭದಲ್ಲಿ ಭಾಲ್ಕಿ ಹಿರೇಮಠದ ಚನ್ನಬಸವ ಪಟ್ಟದ್ದೇವರು ನಿಜಾಂರ ವಿರೋಧದ ನಡುವೆಯೂ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಿ ಈ ಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಿದ್ದಾರೆʼ ಎಂದು ಸ್ಮರಿಸಿದ್ದರು.
ʼನಾನು ಶಾಸಕನಾದ ಬಳಿಕ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿನ ಎಲ್ಲ ಗ್ರಾಮಗಳಲ್ಲಿ ಕನ್ನಡ ಶಾಲೆಗಳನ್ನು ತಂದು ಕನ್ನಡ ಕಲಿಕೆಯನ್ನು ಆರಂಭಿಸಲಾಗಿದೆ. ನಾನು ಕನ್ನಡದ ಬಗ್ಗೆ ಬಹಳಷ್ಟು ಅಭಿಮಾನ ಹೊಂದಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಕಾರ್ಯಕ್ರಮಗಳಿಗೆ ಸಹಕರಿಸುತ್ತಾ ಬರುತ್ತಿದ್ದೇನೆ. ಸಚಿವನಾಗಿದ್ದ ಸಂದರ್ಭದಲ್ಲಿ 2 ಕೋಟಿ ಅನುದಾನ ಮಂಜೂರು ಮಾಡಿಸಿ ಜಿಲ್ಲಾ ಕನ್ನಡ ಭವನ ನಿರ್ಮಿಸಿದ್ದೇನೆʼ ಎಂದು ತಿಳಿಸಿದರು.

ʼಜಿಲ್ಲೆಯಲ್ಲೇ ಮೊದಲ ಕನ್ನಡ ಭವನ ಔರಾದನಲ್ಲಿ ನಿರ್ಮಿಸಲಾಗಿದೆ. ಜಿಲ್ಲಾ, ತಾಲ್ಲೂಕು ಮತ್ತು ವಲಯ ಕನ್ನಡ ಸಮ್ಮೇಳನಗಳನ್ನು ಆಯೋಜಿಸಿದ್ದೇನೆ. ಈ ಎಲ್ಲ ಪ್ರಯತ್ನಗಳಿಂದಾಗಿ ಇಂದು ಕ್ಷೇತ್ರದೆಲ್ಲೆಡೆ ಕನ್ನಡದ ವಾತಾವರಣ ನಿರ್ಮಾಣವಾಗಿದೆ. ಶಿಕ್ಷಕರ ಸಮಸ್ಯೆಯಂತಹ ಕೆಲವು ಕೊರತೆಗಳಿದ್ದು, ಹಂತ ಹಂತವಾಗಿ ನಿವಾರಿಸುತ್ತೇನೆ. ಕನ್ನಡದ ಅಭಿವೃದ್ಧಿಗೆ ಸದಾ ಬದ್ಧನಾಗಿದ್ದೇನೆʼ ಎಂದು ತಿಳಿಸಿದರು.
ʼಕನ್ನಡ ನಾಡಿನಲ್ಲಿರುವ ಎಲ್ಲರೂ ಕನ್ನಡವನ್ನು ಕಲಿಯಬೇಕು. ಕನ್ನಡ ಮಾತನಾಡಬೇಕು. ಕನ್ನಡದಲ್ಲಿಯೇ ವ್ಯವಹರಿಸಬೇಕು. ಬೇರೆ ಭಾಷೆಗಳಿಗೆ ಗೌರವಿಸುವುದು ತಪ್ಪಲ್ಲ ಆದರೆ ಕನ್ನಡವನ್ನು ಪ್ರೋತ್ಸಾಹಿಸಬೇಕು. ಕನ್ನಡದ ನೆಲ, ಜಲ, ಭಾಷೆಯನ್ನು ಪ್ರೀತಿಸಬೇಕು. ಎಲ್ಲರಲ್ಲಿಯೂ ಕನ್ನಡಾಭಿಮಾನ ಬೆಳೆದರೆ ಕನ್ನಡ ತಾನಾಗಿಯೇ ಉಳಿಯುತ್ತದೆʼ ಎಂದು ಹೇಳಿದರು.
ಔರಾದ ಹಾಗೂ ಕಮಲಗರ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದು, ಔರಾದ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ಲಭಿಸಿ ಪಟ್ಟಣದ ಅಭಿವೃದ್ಧಿಗೆ ನೆರವಾಗಲಿದೆ. ಕಮಲಗರದಲ್ಲಿ ನೂತನ ಪ್ರಜಾಸೌಧ ತಾಲ್ಲೂಕು ಆಡಳಿತ ಸೌಧ ನಿರ್ಮಿಸಲಾಗುತ್ತಿದೆ. 560 ಕೋಟಿಯ ಕೆರೆ ತುಂಬುವ ಯೋಜನೆ, 118 ಕೋಟಿಯ ನಾಗೂರ(ಬಿ) ವಿದ್ಯುತ್ ಉಪ ಕೇಂದ್ರ ಸ್ಥಾಪನೆ, ಟ್ರೀ ಪಾರ್ಕ್, ಕಾರಂಜಾ ಜಲಾಶಯದಿಂದ ಔರಾದ ಪಟ್ಟಣಕ್ಕೆ ನೀರು ಸರಬರಾಜು ಯೋಜನೆ, ಸಿಪೆಟ್ ಕಾಲೇಜು, ವಸತಿ ಶಾಲೆಗಳ ನಿರ್ಮಾಣ, ಹೆಡಗಾಪೂರ ಗೋಶಾಲೆ, ಜಾನುವಾರು ತಳಿ ಸಂವರ್ಧನಾ ಕೇಂದ್ರ ಸ್ಥಾಪನೆಯಂತಹ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆʼ ಎಂದು ಹೇಳಿದರು.
ಔರಾದ(ಬಿ) ತಹಸೀಲ್ದಾರರಾದ ಮಹೇಶ ಪಾಟೀಲ ಅವರು ಧ್ವಜಾರೋಹಣ ನೆರವೇರಿಸಿದರು. ಕಲಬುರಗಿಯ ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ಅವರು ವಿಶೇಷ ಉಪನ್ಯಾಸ ನೀಡಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಎಂ ಅಮರವಾಡಿ ಮಾತನಾಡಿದರು.
ಇದೇ ವೇಳೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಭಾಗವಹಿಸಿದ ಮಕ್ಕಳಿಗೆ ಶಾಸಕರು ನಗದು ಬಹುಮಾನ ನೀಡಿ ಗೌರವಿಸಿದರು.

ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ವಿವಿಧ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಾಗನಾಥ ಚಿಟಮೆ (ಶಿಕ್ಷಣ ಕ್ಷೇತ್ರ), ಮನ್ಮಥಪ್ಪ ಸ್ವಾಮಿ (ಮಾಧ್ಯಮ ಕ್ಷೇತ್ರ ), ಎಂ.ಡಿ ಫಜಲ್, ಶಿವರಾಜ ಹೆಳವ (ಸೇವಾ ಕ್ಷೇತ್ರ) ಹಾಗೂ ವಿಠಲ ಯೋಗಿ (ಸಾಹಿತ್ಯ ಕ್ಷೇತ್ರ) ಅವರನ್ನು ಶಾಸಕರು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು.
ಇದೇ ವೇಳೆ ತಮ್ಮ ಕಿರಾಣಿ ಅಂಗಡಿಯ ಮೇಲೆ ಶೇ.100ರಷ್ಟು ಕನ್ನಡ ನಾಮಫಲಕ ಹಾಕಿದ ಎಂ.ಜಿ ರೆಡ್ಡಿ, ಸಿಕ್ಕಿರುವ ಬಂಗಾರದ ಆಭರಣಗಳನ್ನು ವಾರಸುದಾರರಿಗೆ ಮರಳಿಸಿ ಪ್ರಮಾಣಿಕತೆ ಮೆರೆದ ಜಲೀಲಮಿಯ್ಯಾ ಅವರನ್ನು ಮತ್ತು ಕನ್ನಡ ರಾಜ್ಯೋತ್ಸವದ ನಿಮಿತ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೆತರಾದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
ಇದನ್ನೂ ಓದಿ : ಕನ್ನಡ ರಾಜೋತ್ಸವ | ಕರ್ನಾಟಕ ಸರ್ವಧರ್ಮ ಸಮನ್ವಯ ನಾಡು : ಸಚಿವ ಈಶ್ವರ ಖಂಡ್ರೆ
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸರುಬಾಯಿ ಘೂಳೆ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ ರಂಗೇಶ, ಆರಕ್ಷಕ ವೃತ್ತ ನಿರೀಕ್ಷಕ ರಘುವೀರಸಿಂಗ್ ಠಾಕೂರ್, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ, ತಾಲ್ಲೂಕು ವೈದ್ಯಾಧಿಕಾರಿ ಡಾ.ಗಾಯತ್ರಿ, ಮುಖಂಡ ಧೊಂಡಿಬಾ ನರೋಟೆ ಸೇರಿದಂತೆ ವಿವಿಧ ಕನ್ನಡಪರ ಸಂಘ-ಸಂಸ್ಥೆಗಳ ಮುಖಂಡರು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ಸತೀಷ ಮಜಗೆ ಹಾಗೂ ಮಹಾನಂದಾ ಎಂಡೆ ನಿರೂಪಿಸಿದರು.





