ದೀಪಾವಳಿ ಹಬ್ಬದ ಹಿನ್ನೆಲೆ ಮನೆ ಮುಂದಿನ ಬ್ಯಾರೆಲ್ ಮೇಲಿಟ್ಟಿದ್ದ ದೀಪವೊಂದು ಹೊತ್ತಿಕೊಂಡು ಪಕ್ಕದಲ್ಲಿ ವ್ಯಾಪಿಸಿದ್ದರಿಂದ ಅಂದಾಜು ನಾಲ್ಕೈದು ಸಿಲಿಂಡರ್ಗಳು ಸ್ಫೋಟಗೊಂಡು ಎಂಟು ಮಂದಿ ಗಾಯಗೊಂಡಿದ್ದು, 7 ಬೈಕ್ ಗಳು ಸೇರಿದಂತೆ ಮನೆಯಲ್ಲಿನ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಜಿಲ್ಲೆಯ ಗದ್ದನಕೆರೆ ಕ್ರಾಸಿನಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಕಲ್ಮೇಶ ಧರಿಯಪ್ಪ ಲೋಕಣ್ಣ ಬಾರ (30), ಸಚಿನ್ ಪ್ರಕಾಶ್ ಮೇರಿ (28), ಗಣೇಶ್(26), ದಾಪು ದೇವಿ (28), ಡಿಂಪಲ್ ಪಟೇಲ್ (1), ಸ್ನೇಹ (22), ಐಶ್ವರ್ಯ (13), ಶೃತಿ (23) ಗಾಯಗೊಂಡಿದ್ದಾರೆ. ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿನಿ ಸ್ನೇಹ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಲಾದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದ್ದನಕೆರೆ ಕ್ರಾಸಿನಲ್ಲಿರುವ ರಾಜೇಂದ್ರ ಪ್ರಸಾದ ತಪಶೆಟ್ಟಿ ಮನೆ ಮುಂದಿನ ಬ್ಯಾರೆಲ್ ಮೇಲೆ ದೀಪಾವಳಿ ಹಬ್ಬಕ್ಕೆ ದೀಪ ಹಚ್ಚಿ ಇಟ್ಟಿದ್ದಾರೆ. ಬ್ಯಾರೆಲ್ ಒಳಗೆ ಬೋರ್ ವೆಲ್ ತೋಡುವ ಕೆಲಸಕ್ಕೆ ಬಳಸುವ ದ್ರವ ಪದಾರ್ಥ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ದೀಪ ಆರಂಭದಲ್ಲಿ ಈ ಬ್ಯಾರೆಲ್ಗೆ ತಗುಲಿದೆ. ಬಳಿಕ ಅಧಿಕಗೊಂಡು ಪಕ್ಕದಲ್ಲಿಟ್ಟಿದ್ದ ಸಿಲಿಂಡರಿಗೆ ವ್ಯಾಪಿಸಿದೆ. ಆಗ ನಾಲ್ಕೈದು ಸಿಲೆಂಡರ್ ಏಕಕಾಲಕ್ಕೆ ಸ್ಫೋಟಗೊಂಡಿವೆ.
ಇದನ್ನೂ ಓದಿ: ಬಾಗಲಕೋಟೆ | ಬಾಗಿಲಲ್ಲಿ ಹಚ್ಚಿದ್ದ ದೀಪದಿಂದ ಬೆಂಕಿ ಅವಘಡ; ಹೊತ್ತಿ ಉರಿದ ಮನೆ
ಘಟನೆಯಲ್ಲಿ ತಪಶೆಟ್ಟಿ ಮನೆ ಮೇಲೆ ವಾಸವಿದ್ದವರು ಹಾಗೂ ನೋಡಲು ಬಂದವರು ಸೇರಿ ಒಟ್ಟು ಎಂಟು ಜನರಿಗೆ ಗಾಯಗಳಾಗಿವೆ. ಮನೆಯ ಮುಂದಿದ್ದ ಏಳು ಬೈಕುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಮನೆಯೊಳಗೆ ಇಟ್ಟಿದ್ದ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ. ಆದರೆ, ಯಾವುದೇ ಜೀವ ಹಾನಿ ಸಂಭವಿಸಿಲ್ಲದಿರುವುದು ಸಮಾಧಾನಕರ.
ಸ್ಥಳಕ್ಕೆ ಭೇಟಿ ನೀಡಿದ ಸಚಿವ ಆರ್ ಬಿ ತಿಮ್ಮಾಪುರ ಹಾಗೂ ಶಾಸಕ ಜೆ ಟಿ ಪಾಟೀಲ ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಸಚಿವರು ಘಟನೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಸೂಕ್ತ ಪರಿಹಾರ ಸೇರಿದಂತೆ ಸರ್ಕಾರದಿಂದ ಎಷ್ಟು ಸಾಧ್ಯವೊ ಅಷ್ಟು ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.





