ಕೇಂದ್ರ ಸರ್ಕಾರ ಜಾರಿಗೆ ತರುವುದಾಗಿ ಘೋಷಿಸಿದ ನಾಲ್ಕು ಲೇಬರ್ ಕೋಡ್ ಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಅಖಿಲ ಭಾರತ ಮುಷ್ಕರದ ಕರೆಯ ಮೇರೆಗೆ ಬಾಗಲಕೋಟೆಯಲ್ಲಿ ಬಾಗಲಕೋಟೆ ನಗರದ ಎಲ್ಐಸಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರಿಗೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ಮಾಡಿ, ಪ್ರತಿಭಟನಾ ಸಭೆ ನಡೆಸಿದರು.
ದೇಶದ ಕಾರ್ಮಿಕ ಸಂಘಟನೆಗಳು ಅನೇಕ ಸಲ ಸಂಘಟಿಸಿದ ಅಖಿಲ ಭಾರತ ಮುಷ್ಕರಗಳನ್ನು ಹಾಗೂ ದೇಶದ ಜನರ ಪ್ರತಿರೋಧವನ್ನು ಲೆಕ್ಕಿಸದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಮತ್ತು ವಿದೇಶಿ ಬಂಡವಾಳಗಾರರ ಹಿತವನ್ನು ಕಾಪಾಡಲೆಂದು; ಅಸ್ತಿತ್ವದಲ್ಲಿರುವ 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಕಾರ್ಮಿಕ ಸಂಹಿತೆಗಳನ್ನಾಗಿ ಬದಲಾಯಿಸಿ ನವೆಂಬರ್ 21, 2025 ರಂದು ಜಾರಿಗೆ ತರುವದಾಗಿ ಘೋಷಿಸಿದೆ. ಈ ಸಂಹಿತೆಗಳು ಸಂಪೂರ್ಣ ದುಡಿಯುವ ಜನರ ಜೀವನವನ್ನು ವಿನಾಶ ಮಾಡುವ ಸ್ವರೂಪ ಹೊಂದಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಈ ವೇಳೆ ಶ್ರೀಕಾಂತ್ ಕೊಂಡುಗೂಳಿ ಮಾತನಾಡಿ, ಹೊಸ ಕಾರ್ಮಿಕ ಸಂಹಿತೆಯಲ್ಲಿ ನಿಶ್ಚಿತ ಅವಧಿಯ ಉದ್ಯೋಗ ಒಪ್ಪಂದವನ್ನು ಪ್ರಸ್ತಾಪಿಸಲಾಗಿದೆ. ಅಂದರೆ ಕಾಯಂ ಉದ್ಯೋಗವನ್ನು ನಾಶಗೊಳಿಸುವ ಹುನ್ನಾರ ಮಾಡಲಾಗಿದೆ. ಮುಷ್ಕರದ ಹಕ್ಕನ್ನು ಕಸಿದುಕೊಳ್ಳುವ 14 ದಿನದ ಮುಂಚಿತವಾಗಿ ಮುಷ್ಕರದ ಸೂಚನೆ ನೀಡಬೇಕೆನ್ನುವ ನಿಬಂಧನೆಯನ್ನು ಪ್ರಸ್ತಾಪಿಸಲಾಗಿದೆ. ಕೈಗಾರಿಕಾ ಸಂಸ್ಥೆಗಳ ಕಾರ್ಮಿಕರ ಸಂಖ್ಯೆಯನ್ನು 100 ರಿಂದ 300ಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ ಪ್ರಮಾಣಿಕೃತ ಸ್ಥಾಯಿ ಆದೇಶವು ಶೇ.85ಕ್ಕಿಂತ ಹೆಚ್ಚು ಸಂಸ್ಥೆಗಳಿಗೆ ಅನ್ವಯ ಆಗದಂತೆ ಮಾಡಲಾಗಿದೆ. ರೂಪಾಯಿ 178 ಕ್ಕೆ ತಳಮಟ್ಟದ ವೇತನವನ್ನು ಪರಿಚಯಿಸಲಾಗಿದೆ ಎಂದು ಆರೋಪಿಸಿದರು.
ಈ ರೀತಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತಂದು ಕಾರ್ಮಿಕರ ಅಲ್ಪಸ್ವಲ್ಪ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಮಾಲೀಕರ ಲಾಭವನ್ನು ಹೆಚ್ಚಿಸುವ, ಅವರಿಗೆ ಅನುಕೂಲ ಮಾಡಿಕೊಡುವ ಬದಲಾವಣೆಗಳನ್ನು ಈ ಸಂಹಿತೆಯಲ್ಲಿ ಮಾಡಲಾಗಿದೆ. ಆದ್ದರಿಂದ ಇಡೀ ದೇಶದ ಕಾರ್ಮಿಕರು ಹಾಗೂ ಎಲ್ಲ ಜನತೆ ಈ ಲೇಬರ್ ಕೋಡ್ಗಳನ್ನು ವಿರೋಧಿಸಿ ಬೃಹತ್ ಹೋರಾಟ ಬೆಳೆಸುವ ಅವಶ್ಯಕತೆ ಇದೆ ಎಂದರು.
ಇದನ್ನೂ ಓದಿ ವಿಜಯಪುರ | ಎಸ್ಐಆರ್ ಗೆ ಬಲಿ ಪಶುಗಳಾಗುವವರು; ಎಲ್ಲಾ ಜಾತಿ, ಧರ್ಮಿಯರು: ಚಿಂತಕ ಶಿವಸುಂದರ್
ಎಐಯುಟಿಯುಸಿ ಜಿಲ್ಲಾ ನಾಯಕಿ ಕಮಲಾ ತೇಲಿ, ರುಕ್ಸಾನಾ ನಾಗಠಾಣ, ಸೈನಾಜ್ ಜಂಗಿ, ಮಂಜುಳಾ ನಾಯಕ್, ವಾಸಂತಿ ಪುಜಾರಿ, ದಾನಮ್ಮ, ಭಾರತಿ ಚವ್ಹಾಣ, ಮಂಜುಳಾ ಸರ್ಕಾರ್, ಬಸಮ್ಮ ಕರಡಿ, ಗೀತಾ ಬದಾಮಿ, ಸುರೇಖಾ ಕಾಳೆ, ರಮೇಶ ಬಂಡಿವಡ್ಡರ, ನಾರಾಯಣ ಇಂಗಳೆ, ರಮೇಶ ಗೌಡರ್ ಹಾಗೂ ಸಂಘಟನಾಕಾರ ಹಯ್ಯಾಳಪ್ಪ ಎಚ್. ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.





